Site icon Vistara News

Uttara Kannada News: ಶ್ರೀಶಂಕರರ ಮೂಲಮಠ ಪುನರುತ್ಥಾನಕ್ಕೆ ಸಂಕಲ್ಪ: ರಾಘವೇಶ್ವರ ಶ್ರೀ ಘೋಷಣೆ

Shri Raghaveshwara Bharathi maha swamiji aashirvachan in Khyapana programme at Ashoke Sri Ramachandrapur Mutt

ಗೋಕರ್ಣ: ಶತಮಾನಗಳಿಂದ ನಿರ್ಜಲ ಮತ್ತು ನಿರ್ಜಲವಾಗಿದ್ದ ಅಶೋಕೆಯ ಪುಣ್ಯ ಪರಿಸರದಲ್ಲಿ ಮತ್ತೆ ಜೀವಚೈತನ್ಯ ಪ್ರವಾಹವಾಗಿ ಹರಿದಿರುವುದು ಶಂಕರಾಚಾರ್ಯರು ಸ್ಥಾಪಿಸಿದ ಮೂಲಮಠದ ಪುನರುತ್ಥಾನದ ಪರ್ವಕಾಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ತಿಳಿಸಿದರು.

ಆದಿಗುರು ಶಂಕರರು ಮೂಲಮಠ ಸ್ಥಾಪಿಸಿದ ಅಶೋಕೆಯ ಪರಿಸರದಲ್ಲಿ ಶ್ರೀರಾಮಚಂದ್ರಾಪುರ ಮಠದ ಸಮಸ್ತ ಶಿಷ್ಯರು ಹಮ್ಮಿಕೊಂಡಿದ್ದ ಖ್ಯಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಅಶೋಕೆಯ ಪುಣ್ಯಭೂಮಿಗೆ ಇಂದು ಜನಸ್ತೋಮ ಹರಿದುಬಂದಿದೆ. ಜೀವಚೈನತ್ಯ ಮೈವೆತ್ತಿದ ಪುಣ್ಯಪರ್ವ. ಆದಿ ಗುರು ಶಂಕರರೆಂಬ ಮಹಾಚೈತನ್ಯವನ್ನು ಮೂರು ಬಾರಿ ಆಕರ್ಷಿಸಿದ ಈ ಕ್ಷೇತ್ರ ಕಳೆದುಕೊಂಡಿದ್ದನ್ನು ಮರಳಿ ಪಡೆಯುವ ತಪೋಭೂಮಿ. ಹೀಗೆ ಇಡೀ ಗೋಕರ್ಣ ಮಂಡಲಕ್ಕೆ ರಾಜಧಾನಿಯಾಗಿ ಸಮಸ್ತ ಸಮಾಜಕ್ಕೆ ಧರ್ಮನಿರ್ದೇಶಗಳನ್ನು ನೀಡುತ್ತಾ ವೈಭವದಿಂದ ಮೆರೆಯುತ್ತಿದ್ದ ಆದ್ಯ ರಘೋತ್ತಮ ಮಠ (ಈಗಿನ ರಾಮಚಂದ್ರಾಪುರ ಮಠ) ಇದೀಗ ಗತವೈಭವವನ್ನು ಮರಳಿ ಪಡೆಯುವ ಕಾಲ ಸನ್ನಿಹಿತವಾಗಿದೆ ಎಂದು ಬಣ್ಣಿಸಿದರು.

ಇದನ್ನೂ ಓದಿ: Virat Kohli: ಮೊದಲ ಟಿ20 ಪಂದ್ಯಕ್ಕೆ ಕೊಹ್ಲಿ ಅಲಭ್ಯ; ಖಚಿತಪಡಿಸಿದ ಕೋಚ್​

ಸುಮತಿಯಿಂದ ಸೋತ ಅಶೋಕನೆಂಬ ರಾಜ ಪ್ರಕ್ಷದ್ವೀಪದಿಂದ ಇಲ್ಲಿಗೆ ಬಂದು ಘೋರ ತಪಸ್ಸು ಮಾಡಿ, ಕಳೆದುಕೊಂಡಿದ್ದನ್ನು ಮರಳಿ ಪಡೆದು ಧರ್ಮರಾಜ್ಯ ಸ್ಥಾಪನೆ ಮಾಡಿದ ಬಗ್ಗೆ ಸ್ಕಂದಪುರಾಣದಲ್ಲಿ ಉಲ್ಲೇಖವಿದೆ. ಹಿಂದೆ ವಿದ್ಯಾ ತಪಸ್ಸಿನ ಜ್ಞಾನ ಸಾಮ್ರಾಜ್ಯವಾಗಿ ಕಂಗೊಳಿಸಿದ್ದ ಅಶೋಕೆ ಕಾಲಗರ್ಭದಲ್ಲಿ ಸಿಲುಕಿ ಇಲ್ಲಿನ ಚೈತನ್ಯಕ್ಕೆ ಮಬ್ಬು ಕವಿದಿತ್ತು. ಆದರೆ ಇಡೀ ಸಮಾಜವೇ ಮತ್ತೊಮ್ಮೆ ಸೇರುವ ಮೂಲಕ ಚೈತನ್ಯ ಪುಟಿದೆದ್ದಿದೆ. ಇದು ಶ್ರೀಮಠದ ಪುನರುತ್ಥಾನದ ಪರ್ವಕಾಲ ಎಂದು ವಿವರಿಸಿದರು.

ಆದಿಗುರು ಶಂಕರರ ವಾಕ್ಯ ಪರಿಪಾಲನೆಗಾಗಿ ಬೋಳುಗುಡ್ಡವಾಗಿದ್ದ ಅಶೋಕೆಗೆ ಆಗಮಿಸಿ ಮೂಲಮಠದ ಪುನರುತ್ಥಾನದ ಸಂಕಲ್ಪ ಮಾಡಿದ್ದೇವೆ. ಮೂಲಮಠ ಸ್ಥಾಪನೆ ಸಂದರ್ಭದಲ್ಲಿ ಶ್ರೀಶಂಕರರು ತಮ್ಮ ಜ್ಯೇಷ್ಠಶಿಷ್ಯರಿಗೆ ನೀಡಿದ್ದ ‘ಅತ್ರತಿಷ್ಠ ಯತಿಶ್ರೇಷ್ಠ’ ಎಂಬ ಗುರುವಾಕ್ಯ ಪರಿಪಾಲನೆಯಷ್ಟೇ ಈ ಸಂಕಲ್ಪಕ್ಕೆ ಮೂಲ ಎಂದರು.

ಆದಿಗುರುವಿನ ವಾಕ್ಯ ಪರಿಪಾಲನೆ ಸಾಧ್ಯವಾಗದ ಬೇಸರ, ನೋವಿನಿಂದ ಅಶೋಕೆಯನ್ನು ನಮ್ಮ ಪೂರ್ವಾಚಾರ್ಯರು ತೊರೆಯಬೇಕಾದ ಸಂದರ್ಭ ಬಂದದ್ದು ನಮ್ಮ ಇಡೀ ಸಮಾಜದ ಅಧಃಪತನಕ್ಕೆ ಕಾರಣವಾಯಿತು. ಮೂಲಮಠವಷ್ಟೇ ಅಲ್ಲದೇ ಇಲ್ಲಿದ್ದ ಅಗ್ರಹಾರ ಕೂಡಾ ನಾಶವಾಯಿತು. ಇದಕ್ಕೆ ಗುರುಗಳ ನೋವು ಕಾರಣ. ಮಲ್ಲಿಕಾರ್ಜುನನ ಉಪೇಕ್ಷೆ ಕಾರಣ. ಇಂಥ ತಪ್ಪುಗಳಿಗೆ ಖ್ಯಾಪನೆಯ ಮೂಲಕ ಪೂರ್ವಾಚಾರ್ಯರ ಕ್ಷಮೆ ಯಾಚಿಸುವ ಮೂಲಕ ಪುನರುತ್ಥಾನಕ್ಕೆ ಅವರ ಅನುಗ್ರಹ ಬೇಡೋಣ ಎಂದು ಸೂಚಿಸಿದರು.

ಗುರು ದೇವರ ಪ್ರತಿಬಿಂಬ. ಗುರುಗಳಿಗೆ, ನೋವು ನೀಡಿದವರು, ಮಠಕ್ಕೆ ಅಪಚಾರ ಮಾಡಿದವರು ಬ್ರಹ್ಮರಾಕ್ಷಸರಾಗುತ್ತಾರೆ ಎನ್ನುವುದು ಶಾಸ್ತ್ರವಿಧಿತ. ಯಾವುದೇ ಪ್ರಮಾದಗಳಿಗೆ ಪಶ್ಚಾತ್ತಾಪವೇ ಪ್ರಾಯಶ್ಚಿತ. ಇದರಲ್ಲಿ ನಾಲ್ಕು ಬಗೆ. ಖ್ಯಾಪನೆ, ಅನುತಾಪ, ತಪಸ್ಸು ಮತ್ತು ಅಧ್ಯಯನ. ಆದ್ದರಿಂದ ಪುನರುತ್ಥಾನದ ಮೊದಲ ಕಾರ್ಯ ಖ್ಯಾಪನೆ ಅಥವಾ ಪಾಪ ಪರಿಮಾರ್ಜನೆ ಎಂದು ವಿವರಿಸಿದರು.

ಇದನ್ನೂ ಓದಿ: Hardware Business : ಹಾರ್ಡ್‌ವೇರ್‌ ಬಿಸಿನೆಸ್‌ ಆರಂಭಿಸೋದು ಹೇಗೆ, ಬಂಡವಾಳ ಎಷ್ಟು ಬೇಕು, ಲಾಭ ಎಷ್ಟು?

ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಪರಂಪರೆಯ ನೋವಿನ ಪರಿಮಾರ್ಜನೆಗಾಗಿ ಇಡೀ ಸಮಾಜ ಖ್ಯಾಪನೆ ಮಾಡುತ್ತಿದೆ. ಭಕ್ತಿಭಾವದಿಂದ, ನಿರ್ಮೋಹದಿಂದ ಪಶ್ಚಾತ್ತಾಪ ಪಡುತ್ತಿದ್ದೇವೆ. ಇಡೀ ಸಮಾಜ ಖ್ಯಾಪನೆಗಾಗಿ ಎದ್ದುಬಂದಿದ್ದು, ಪರಿಮಾರ್ಜನೆಯಿಂದ ಪ್ರಸನ್ನರಾಗಬೇಕು ಎಂದು ಮನವಿ ಮಾಡಿಕೊಂಡರು.

ಧರ್ಮಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ಟ ಖ್ಯಾಪನೆ ಬೋಧಿಸಿದರು. ಅತಿರುದ್ರ ಮಹಾಸಮಿತಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಕೋಶಾಧ್ಯಕ್ಷ ರಮಣ ಭಟ್ ಮುಂಬೈ, ಉಪಾಧ್ಯಕ್ಷರಾದ ಸಂತೋಷ್ ಹೆಗಡೆ, ಜಿ.ಎಲ್.ಗಣೇಶ್, ಸುಬ್ರಾಯ ಅಗ್ನಿಹೋತ್ರಿ, ಆರ್.ಎಸ್.ಹೆಗಡೆ ಹರಗಿ, ಕಾರ್ಯದರ್ಶಿಗಳಾದ ಶ್ರೀಕಾಂತ ಪಂಡಿತ್, ಮುರೂರು ಸುಬ್ರಾಯ ಭಟ್, ಆರ್.ಜಿ.ಹೆಗಡೆ ಹೊಸಾಕುಳಿ, ಪರಮೇಶ್ವರ ಮಾರ್ಕಂಡೆ, ಪೆದಮಲೆ ನಾಗರಾಜ ಭಟ್, ಎಸ್.ಎಸ್.ಹೆಗಡೆ, ಜಿ.ಎಸ್.ಹೆಗಡೆ, ಅಶ್ವಿನಿ ಉಡುಚೆ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ, ರಾಮಚಂದ್ರ ಅಜ್ಜಕಾನ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನ ಕುಮಾರ, ಲೋಕಸಂಪರ್ಕಾಧಿಕಾರಿಗಳಾದ ಜಿ.ಕೆ.ಹೆಗಡೆ, ಹರಿಪ್ರಸಾದ್ ಪೆರಿಯಾಪ್ಪು ಭಾಗವಹಿಸಿದ್ದರು.

ವಿವಿಧ ವಿಭಾಗಗಳ ನಿರ್ದೇಶಕರಾದ ಶ್ರೀವತ್ಸ ಮುರಗೋಡು, ಪ್ರಮೋದ್ ಪಂಡಿತ್, ಹಾರಕೆರೆ ನಾರಾಯಣ ಭಟ್, ಶಾಂತಾರಾಮ ಹಿರೇಮನೆ, ಈಶ್ವರಿ ಬೇರ್ಕಡವು, ರಾಜಾರಾಮ ಭಟ್ ಮುರೂರು, ವೀಣಾ ಗೋಪಾಲಕೃಷ್ಣ, ಮೋಹನ ಭಟ್ ಹರಿಹರ, ಹೇರಂಬ ಶಾಸ್ತ್ರಿ, ಮಹಾಮಂಡಲ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.‌

ಇದನ್ನೂ ಓದಿ: Rahul Dravid: ಅಯ್ಯರ್​,ಇಶಾನ್​ ಅಶಿಸ್ತು ವಿಚಾರದಲ್ಲಿ ಸ್ಪಷ್ಟನೆ ನೀಡಿದ ಕೋಚ್​​ ದ್ರಾವಿಡ್

ಶ್ರೀಮಲ್ಲಿಕಾರ್ಜುನ ಸ್ವಾಮಿಗೆ ಹಮ್ಮಿಕೊಂಡಿದ್ದ ಹನ್ನೊಂದು ದಿನಗಳ ಅತಿರುದ್ರ ಅಭಿಷೇಕ ಪರಮಪೂಜ್ಯರು ಸುವರ್ಣ ಕಲಶಾಭಿಷೇಕ ಮಾಡುವ ಮೂಲಕ ಸಂಪನ್ನಗೊಂಡಿತು.

Exit mobile version