Site icon Vistara News

Road Accident : ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು; ಇಬ್ಬರು ಸಾವು, ಮತ್ತಿಬ್ಬರು ಗಂಭೀರ

Two Deaded two injured in car accident

ವಿಜಯನಗರ: ಕಾರು ಅಪಘಾತದಲ್ಲಿ (Road Accident) ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ವಿಜಯನಗರದ ಕೂಡ್ಲಿಗಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಘಟನೆ ನಡೆದಿದೆ.

ಕೇರಳದಿಂದ ಹಂಪಿ ಕಡೆ ಹೊರಟಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಹೆದ್ದಾರಿ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ/ ಮೃತರು ಯಾರೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ವಿಜಯನಗರ ಎಸ್‌ಪಿ ಶ್ರೀಹರಿಬಾಬು ಬಿಎಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Assault Case : ಮಗು ಅಳುತ್ತಿದ್ದಕ್ಕೆ ಸಿಟ್ಟಾಗಿ ಗೋಡೆಗೆ ಎಸೆದು ಬಿಸಾಡಿದ ಪಾಪಿ ತಂದೆ!

ಕೊಪ್ಪಳದಲ್ಲಿ ಮಗುಚಿ ಬಿದ್ದ ಖಾಸಗಿ ಬಸ್‌

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ವೊಂದು ಮಗುಚಿಬಿದ್ದಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಎಚ್.ಆರ್.ಜಿ. ನಗರದ ಬಳಿ ಘಟನೆ ನಡೆದಿದೆ. ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಗಂಗಾವತಿಗೆ ಬರುತ್ತಿದ್ದ ಎಸ್.ಆರ್.ಎಸ್ ಬಸ್‌ಗೆ ಎದುರಿಗೆ ಬಂದ ಬೊಲೆರೋ ವಾಹನ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಬಸ್‌ ಪಲ್ಟಿಯಾಗಿದೆ. ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ ಗಂಗಾವತಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆಗೆ ಉರುಳಿ ಬಿದ್ದ ಮರ, ಬೈಕ್‌ ಸವಾರರು ಪಾರು

ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು, ಬೈಕ್‌ ಸವಾರರು ಅಪಾಯದಿಂದ ಪಾರಾಗಿದ್ದಾರೆ. ಕೊಡಗಿನ ಕರಡ ಗ್ರಾಮದಲ್ಲಿ ಘಟನೆ ನಡೆದಿದೆ.

ವೀರಾಜಪೇಟೆ- ನಾಪೋಕ್ಲು ರಸ್ತೆಯ ಸೇತುವೆ ಬಳಿ ಬರುವಾಗ ನೋಡನೋಡುತ್ತಿದ್ದಂತೆ ಮರವೊಂದು ಉರುಳಿ ಬಿದ್ದಿದೆ. ಬೈಕ್‌ನಲ್ಲಿ ಸಂಚಾರ ಮಾಡುತ್ತಿದ್ದ ನವೀನ್ ಹಾಗೂ ಸುಬ್ರಮಣಿ ಎಂಬುವ ಸವಾರರು ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Exit mobile version