Site icon Vistara News

Vijayanagara News: ಪೌರ ಕಾರ್ಮಿಕರ ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಶಿಬಿರ ನಡೆಸಲು ಸೂಚನೆ

Progress Review Meeting by Safai Karmachari National Commission Chairman M Venkatesan at hosapete

ಹೊಸಪೇಟೆ: ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್, ಶುಕ್ರವಾರ ವಿಜಯನಗರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆ (Vijayanagara News) ನಡೆಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಹೊಸಪೇಟೆ, ಕಮಲಾಪುರ, ಹಡಗಲಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಅಧ್ಯಕ್ಷರು ಮೊದಲಿಗೆ ಪೌರ ಕಾರ್ಮಿಕರ, ಬಳಿಕ ಪೌರ ಕಾರ್ಮಿಕ ಯೂನಿಯನ್ ಪದಾಧಿಕಾರಿಗಳ ಮತ್ತು ಹೊರಗುತ್ತಿಗೆ ಏಜೆನ್ಸಿದಾರರೊಂದಿಗೆ ನಾನಾ ವಿಷಯಗಳನ್ನು ಚರ್ಚಿಸಿದರು. ವಿಜಯನಗರ ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಮತ್ತು ಪ.ಪಂ ಅಧಿಕಾರಿಗಳು, ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಪೌರ ಕಾರ್ಮಿಕರ ಅಹವಾಲು ಆಲಿಸಿದರು.

ಇದನ್ನೂ ಓದಿ: T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

ನಿಮ್ಮ ಪಿಎಫ್ ನಂಬರ್, ಇಎಸ್‌ಐ ನಂಬರ್ ಗೊತ್ತಿದೆಯಾ? ಮೆಡಿಕಲ್ ಇನ್ಶೂರನ್ಸ್ ಇದೆಯಾ? ಎಂದು ಅಧ್ಯಕ್ಷರು ಪೌರ ಕಾರ್ಮಿಕರಿಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಪೌರ ಕಾರ್ಮಿಕರಿಗೆ ಕೊನೆಯ ಬಾರಿ ಆರೋಗ್ಯ ಶಿಬಿರ ಯಾವಾಗ ನಡಿಸಿದ್ದೀರಿ? ಎಂದು ನಗರಸಭೆ ಅಧಿಕಾರಿಗಳಿಗೆ ಪ್ರಶ್ನಿಸಿದರು.

ವೇತನ ಪಾವತಿ ಸರಿಯಾದ ಸಮಯಕ್ಕೆ ಆಗುತ್ತಿದೆಯೇ? ನೀವು ಪ್ರತಿದಿನ ಕೆಲಸ ಮಾಡುವ ಅವಧಿ ಎಷ್ಟು? ಎಂದು ಕೇಳಿದ ಅಧ್ಯಕ್ಷರು, ಪೌರ ಕಾರ್ಮಿಕ ನೌಕರೊಬ್ಬರ ಮೆಸೇಜ್‌ಗೆ ಬಂದಿರುವ ಸಂದೇಶವನ್ನು ವೀಕ್ಷಿಸಿ ವೇತನವು ಬ್ಯಾಂಕಿನ ಖಾತೆಗೆ ಪ್ರತಿ ಮಾಹೆ ಸರಿಯಾದ ಸಮಯಕ್ಕೆ ಜಮಾ ಆಗುತ್ತಿರುವುದರ ಬಗ್ಗೆ ಖಚಿತಪಡಿಸಿಕೊಂಡರು.

ಟಿಶರ್ಟ್‌, ಪ್ಯಾಂಟ್, ರೇನ್‌ಕೋಟ್ ನೀಡುತ್ತಿರುವುದರ ಬಗ್ಗೆ ಸಹ ಪೌರ ಕಾರ್ಮಿಕರಿಗೆ ಕೇಳಿ ಖಚಿತಪಡಿಸಿಕೊಂಡರು. ಕೈತೊಳೆಯಲು ಸೋಪು ಕೊಡುತ್ತಾರಾ ಎಂದು ಕೇಳಿ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಹೊರಗುತ್ತಿಗೆ ಆಧಾರಡಿ ಕೆಲಸ ಮಾಡುವ ಪೌರ ಕಾರ್ಮಿಕ ನೌಕರರಿಗೆ ಪ್ರತಿ ಮಾಹೆ 14,800 ಮತ್ತು ಪೌರ ಕಾರ್ಮಿಕ ವಾಹನ ಚಾಲಕರಿಗೆ ಪ್ರತಿ ಮಾಹೆ 12,800 ರೂ ಸಿಗುತ್ತಿದೆ ಎಂದು ಅಧಿಕಾರಿಗಳು ಅಧ್ಯಕ್ಷರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Gold Rate Today: ಮತ್ತೆ ಏರಿಕೆಯ ಹಾದಿಯಲ್ಲಿ ಚಿನ್ನದ ಬೆಲೆ; ಆಭರಣ ಖರೀದಿಯ ಮುನ್ನ ಇಂದಿನ ದರ ಗಮನಿಸಿ

ಉತ್ತಮವಾದ ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಿದೆ. ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ಉತ್ತಮವಾದ ಆರೋಗ್ಯ ಸಿಗುವ ನಿಟ್ಟಿನಲ್ಲಿ ಎಲ್ಲಾ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ವಾರದೊಳಗೆ ಆರೋಗ್ಯ ಶಿಬಿರಗಳು ನಡೆಯಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗುರುತಿನ ಚೀಟಿ ನೀಡಿ

ಇನ್ಸೂರೆನ್ಸ್ ನಂಬರ್, ರಕ್ತದ ಗುಂಪು, ಇಎಸ್‌ಐ ನಂಬರ್ ಸೇರಿದಂತೆ ಮಹತ್ವದ ಮಾಹಿತಿ ಇರುವ ಗುರುತಿನ ಚೀಟಿಗಳನ್ನು ಮುದ್ರಿಸಿ ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ನೀಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಒದಗಿಸುವ ಏಜೆನ್ಸಿಗಳಿಗೆ ನಿರ್ದೇಶನ ನೀಡಿದರು.

ನಿವೇಶನ ನೀಡಲು ಕ್ರಮ

ನಮಗಿನ್ನು ಮನೆಯಿಲ್ಲ. ನಮಗೆ ಮನೆ ಕೊಡಿ ಎಂದು ಕೆಲವು ಪೌರ ಕಾರ್ಮಿಕರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮನೋಹರ ಅವರು, ಪೌರ ಕಾರ್ಮಿಕರಿಗೆ ಮನೆ ಬೇಕು ಎನ್ನುವ ಬೇಡಿಕೆಯನ್ನು ಪರಿಗಣಿಸಿ ಆರು ತಿಂಗಳೊಳಗೆ ನಿವೇಶನ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: India Coach: ಕೋಚ್​ ಆಗುವ ಮುನ್ನವೇ ಗಂಭೀರ್​ಗೆ ಕಿವಿಮಾತು ಹೇಳಿದ ಅನಿಲ್ ಕುಂಬ್ಳೆ

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸಹಾಯಕ ಆಯುಕ್ತ ಮೊಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲಿಂ ಪಾಷಾ, ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದ್ದೀನ್, ನಗರಸಭೆಯ ಸಹಾಯಕ ಅಭಿಯಂತರೆ ಆರತಿ, ಹಿರಿಯ ಆರೋಗ್ಯ ನಿರೀಕ್ಷಕಿ ಲತಾ ಸೇರಿದಂತೆ ವಿವಿಧ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಮತ್ತು ಇತರರು ಇದ್ದರು.

Exit mobile version