Site icon Vistara News

Vijayanagara News: ಹಂಪಿ ಉತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಡಿಸಿ ಎಂ.ಎಸ್.ದಿವಾಕರ್‌

Vijayanagara DC M.S. Diwakar latest pressmeet about Hampi Utsav

ಹೊಸಪೇಟೆ: ಫೆಬ್ರವರಿ 2, 3 ಮತ್ತು 4ರಂದು ನಡೆಯುವ ಹಂಪಿ ಉತ್ಸವಕ್ಕೆ (Hampi Utsav) ಜಿಲ್ಲಾಡಳಿತದಿಂದ (Vijayanagara News) ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಹೇಳಿದರು.

ಹಂಪಿ ಉತ್ಸವ 2024ರ ಅಂಗವಾಗಿ ನಡೆದಿರುವ ಪೂರ್ವಸಿದ್ಧತೆಗಳ ಕುರಿತು ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜ.24 ರಿಂದ ಹಂಪಿಯಲ್ಲಿ ಶಿಲ್ಪಕಲಾ ಶಿಬಿರ ನಡೆಯುತ್ತಿದ್ದು, ವಿಶೇಷ ಶಿಲ್ಪಿಗಳಿಂದ ವಿಭಿನ್ನವಾದ ಶಿಲ್ಪಗಳು ಮೂಡಿಬರುತ್ತಿವೆ. ಜ.29 ರಿಂದ ಹಂಪಿಯಲ್ಲಿ ಚಿತ್ರಕಲಾ ಶಿಬಿರ ನಡೆಯುತ್ತಿದ್ದು, ವಿಶೇಷ ಚಿತ್ರ ಕಲಾವಿದರಿಂದ ವಿಭಿನ್ನವಾದ ಕೃತಿಗಳು ಮೂಡಿಬರುತ್ತಿವೆ ಎಂದ ಅವರು, ಫೆಬ್ರವರಿ 01 ರಂದು ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಹಂಪಿಯವರೆಗೆ ಬೈಕ್ ರ‍್ಯಾಲಿ ಜರುಗಲಿದ್ದು, ಈಗಾಗಲೇ ನಗರದ 50ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಗಳು ಈ ರ‍್ಯಾಲಿಯಲ್ಲಿ ಭಾಗವಹಿಸಲು ನೋಂದಣಿಯನ್ನು ಮಾಡಿಕೊಂಡಿವೆ ಎಂದರು.

ಫೆ.01 ರಂದು ಬೆಳಿಗ್ಗೆ 10 ಗಂಟೆಗೆ ಆಕಾಶದಿಂದ ಹಂಪಿ ನೋಡುವ ಆಸಕ್ತರಿಗೆ ಹಂಪಿ ಬೈ ಸೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಂದು ಮಧ್ಯಾಹ್ನ 3 ಗಂಟೆಗೆ ವಡಕರಾಯನ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಸಂತ ವೈಭವ ಭವ್ಯ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ. ಈ ಭವ್ಯ ಮೆರವಣಿಗೆಯಲ್ಲಿ ಜಿಲ್ಲೆಯ ಹಾಗೂ ಇತರೆ ಜಿಲ್ಲೆಗಳ 70 ರಿಂದ 100 ವಿಶೇಷ ಕಲಾ ತಂಡಗಳು ಭಾಗವಹಿಸುತ್ತವೆ ಅಲ್ಲದೇ ಹಂಪಿಯ ದೇವಸ್ಥಾನ ಲಕ್ಷ್ಮೀ ಆನೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ನಗರದ ಜನರಿಗೆ ಭಕ್ತಿ ಸಿಂಚನವನ್ನು ಉಂಟು ಮಾಡುವ ಮೂಲಕ ನಗರದ ಜನರಿಗೆ ಉತ್ಸವದ ಸವಿರುಚಿಯನ್ನು ಉಣಬಡಿಸಲಿವೆ ಎಂದು ಹೇಳಿದರು.

ಇದನ್ನೂ ಓದಿ: Stock Market: 612 ಅಂಕ ಜಿಗಿದ ಸೆನ್ಸೆಕ್ಸ್, ಹೂಡಿಕೆದಾರರು ಫುಲ್ ಖುಷ್

ಫೆ.02 ರಂದು ಬೆಳಿಗ್ಗೆ 10 ಗಂಟೆಗೆ ಕಮಲಾಪುರ ಬಳಿಯ ಹವಾಮಾ ಕಚೇರಿಯ ಹಿಂಭಾಗದ ಆವರಣದಲ್ಲಿ ಅತ್ಯುತ್ತಮ ಎತ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 10.30ಕ್ಕೆ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಹಂಪಿ ಇತಿಹಾಸದ ಕುರಿತು ವಿಚಾರ ಸಂಕೀರ್ಣ ಹಾಗೂ ಕವಿಗೋಷ್ಠಿ ಜರುಗಲಿದೆ. ಬೆಳಿಗ್ಗೆ 11ಕ್ಕೆ ವಸ್ತು ಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಅದೇ ದಿನ ಬೆಂಗಳೂರಿನಿಂದ ಸುಮಾರು 50 ಹೆಚ್ಚು ಬೈಕ್‌ಗಳ ಮೂಲಕ ಹಂಪಿ ದರ್ಶನಕ್ಕಾಗಿ ಬೈಕ್ ರ‍್ಯಾಲಿ ಮೂಲಕ ಹಂಪಿಗೆ ಆಗಮಿಸಲಿದ್ದಾರೆ. ಅಂದು ಸಂಜೆ 5 ಗಂಟೆಯಿಂದ ಹಂಪಿ ಉತ್ಸವದ ವೇದಿಕೆಗಳಲ್ಲಿ ವಿಭಿನ್ನವಾದ ಆಕರ್ಷಕ ಕಲಾ ತಂಡಗಳಿಂದ ಹಾಗೂ ಮುಖ್ಯ ವೇದಿಕೆಯಲ್ಲಿ ಸೆಲೆಬ್ರಿಟಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂದರು.

ಫೆ.02 ರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೂತನ ಪೊಲೀಸ್ ಅಧೀಕ್ಷಕರ ಕಚೇರಿ ಉದ್ಘಾಟನೆ. ಅಂದು ರಾತ್ರಿ 08 ಗಂಟೆಗೆ ಮುಖ್ಯಮಂತ್ರಿಗಳು ಹಾಗೂ ಇತರೆ ಗಣ್ಯರಿಂದ ವಿದ್ಯುಕ್ತವಾಗಿ ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡಾ ಆಗಮಿಸಲಿದ್ದಾರೆ ಎಂದು ತಿಳಿಸಿದ ಅವರು, ರಾತ್ರಿ 11 ಗಂಟೆವರೆಗೆ ಉತ್ಸವದ 04 ವೇದಿಕೆಗಳಲ್ಲಿ ವಿಭಿನ್ನವಾದ ಹಾಗೂ ಆಕರ್ಷಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಗಾಯತ್ರಿ ಪೀಠ ಮುಖ್ಯ ವೇದಿಕೆಯಲ್ಲಿ ಜೆಮ್ಮಿನ್ ಮತ್ತು ಉಹಿರೆ ಉಹಿರೆ ಬ್ಯಾಂಡ್ ಸಂಗೀತ, ಕಾಂತಾರ ನೃತ್ಯ ಹಾಗೂ ಹುಲಿ ನೃತ್ಯಗಳು ಡ್ರಮ್ಸ್ ಮತ್ತು ಇವೆಂಟ್ಸ್, ತಂಡ ಬೆಂಗಳೂರು ಇವರಿಂದ ಪ್ರದರ್ಶನಗೊಳ್ಳಲಿದೆ. ಅಲ್ಲದೇ ಅನುರಾಧ ಭಟ್ ಹಾಗೂ ಶಾಸ್ತ್ರೀಯ ನೃತ್ಯಗಾರರಿಂದ ಶ್ರೀ ಹಂಪಿ ವಿರೂಪಾಕ್ಷೇಶ್ವರನಿಗೆ ಭವ್ಯವಾದ ಆರಂಭಿಕ ಹಾಡು ಮತ್ತು ನೃತ್ಯ ಜರುಗಲಿದೆ. ಅದೇ ದಿನ ವಿದ್ವಾನ್ ಪ್ರವೀಣ್ ಗೋಡಕಿಂಡಿ ಮತ್ತು ತಂಡದಿಂದ ಕೊಳಲು ವಾದನ ಕಾರ್ಯಕ್ರಮ ಜರುಗಲಿದೆ. ನಂತರ ಖ್ಯಾತ ಚಲನಚಿತ್ರ ಗಾಯಕರಾದ ವಿಜಯ ಪ್ರಕಾಶ್, ಅನುರಾಧ, ಉಷಾ, ದಿವ್ಯಾ ಹಾಗೂ ಮಂಗಳ ಇವರ ತಂಡದಿದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಫೆ.03 ರಂದು ಬೆಳಿಗ್ಗೆ 10 ಗಂಟೆಗೆ ಹವಾಮಾ ಕಚೇರಿಯ ಹಿಂಭಾಗದ ಆವರಣದಲ್ಲಿ ಅತ್ಯುತ್ತಮ ಕುರಿ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 11 ಗಂಟೆಗೆ ಹೊಸ ಮಲಪನಗುಡಿಯ ಹತ್ತಿರ ಸಜ್ಜುಗೊಳಿಸಿರುವ ಅಖಾಡದಲ್ಲಿ ಕುಸ್ತಿ, ಭಾರ ಎತ್ತುವ ಸ್ಪರ್ಧೆ ಹಾಗೂ ಚಕ್ಕಡಿಯನ್ನು ಬಿಚ್ಚಿ ತೊಡಿಸುವ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ. ಅಂದು ಸಂಜೆ 5 ಗಂಟೆಯಿಂದ ಹಂಪಿ ಉತ್ಸವದ ನಾಲ್ಕು ವೇದಿಕೆಗಳಲ್ಲಿ ಏಕಕಾಲದಲ್ಲಿ ವಿಭಿನ್ನವಾದ ಆಕರ್ಷಕ ಕಲಾ ತಂಡಗಳಿಂದ ಹಾಗೂ ಮುಖ್ಯ ವೇದಿಕೆಯಲ್ಲಿ ಸೆಲೆಬ್ರಿಟಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂದು ಹೇಳಿದರು.

ಇದನ್ನೂ ಓದಿ: Tirupati Temple: ತಿರುಪತಿ ದೇವಸ್ಥಾನದಲ್ಲಿ ಫೆ. 3ರಿಂದ ಧಾರ್ಮಿಕ ಸದಸ್‌

ಫೆ.03 ರ ರಾತ್ರಿ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹಾಗೂ ಇತರೆ ಗಣ್ಯರಿಂದ ಎರಡನೇ ದಿನದ ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಖ್ಯಾತ ಚಲನಚಿತ್ರ ನಟ ದರ್ಶನ್ ತೂಗದೀಪ್ ಉಪಸ್ಥಿತರಿರುವರು. ಅಂದು ರಾತ್ರಿ 11 ಗಂಟೆವರೆಗೆ ಉತ್ಸವದ ನಾಲ್ಕು ವೇದಿಕೆಗಳಲ್ಲಿ 4 ವಿಭಿನ್ನವಾದ ಹಾಗೂ ಆಕರ್ಷಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾಯತ್ರಿ ಪೀಠ ಮುಖ್ಯ ವೇದಿಕೆಯಲ್ಲಿ ಕೋಲ್ಕತ್ತಾದ ಗೋಲ್ಡನ್ ಗರ್ಲ್ಸ್ ತಂಡದಿಂದ ಗಣಪತಿ ನೃತ್ಯ, ಶಿವನ ನೃತ್ಯ ಹಾಗೂ ಭಕ್ತಿ ನೃತ್ಯ ರೂಪಕಗಳು ಪ್ರದರ್ಶನಗೊಳ್ಳಲಿವೆ. ಅಲ್ಲದೇ ಗಂಗಾವತಿ ಪ್ರಾಣೇಶ್ ಇವರಿಂದ ಹಾಸ್ಯ ಸಂಜೆ ಜರುಗಲಿದೆ. ವೈಜಯಂತಿ ಕಾಶಿ ಅವರಿಂದ ನೃತ್ಯ ರೂಪಕ ಜರುಗಲಿದೆ. ಬಳಿಕ ಖ್ಯಾತ ಕಲಾವಿದರಿಂದ ತಂತಿ ವಾದ್ಯಗಳ ಗೋಷ್ಠಿ ಹಾಗೂ ಶಹನಾಯಿ ವಾದನ ಕಾರ್ಯಕ್ರಮಗಳು, ಅದೇ ದಿನ ರ‍್ಯಾಪ್ ಸಂಗೀತಗಾರರಾದ ಆಲ್‌ಓಕೆ ತಂಡ ಸಂಗೀತ ಕಾರ್ಯಕ್ರಮ ನೀಡಲಿದೆ. ಅದೇ ದಿನ 10 ಗಂಟೆಯ ನಂತರ ಖ್ಯಾತ ಸಂಗೀತ ಸಂಯೋಜಕ ವಿ.ಹರಿಕೃಷ್ಣ ಮತ್ತು ಗಾಯಕರಾದ ಹೇಮಂತ, ಸಂತೋಷ, ವೆಂಕಿ, ಅನಿರುದ್ಧ ಶೆಟ್ಟಿ, ವಾಲಿ, ಇಂದು ನಾಗರಾಜ್ ಹಾಗೂ ಇತರರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದರು.

ಫೆ.04 ರಂದು ಬೆಳಿಗ್ಗೆ 10ಗಂಟೆಗೆ ಎಚ್.ಡಬ್ಲೂ.ಎಚ್.ಎ.ಎಂ.ಎ ಕಚೇರಿಯ ಹಿಂಭಾಗದ ಆವರಣದಲ್ಲಿ ಅತ್ಯುತ್ತಮವಾದ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಅಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಜಾನಪದ ವಾಹಿನಿ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ. ಈ ಮೆರವಣಿಗೆಯಲ್ಲಿ ಸುಮಾರು 35 ಕಲಾ ತಂಡಗಳು ಭಾಗವಹಿಸಲಿವೆ. ಅಲ್ಲದೇ ಹಂಪಿಯ ದೇವಸ್ಥಾನ ಲಕ್ಷ್ಮೀ ಆನೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ಸಂಜೆ 5 ಗಂಟೆಯಿಂದ ಹಂಪಿ ಉತ್ಸವದ ನಾಲ್ಕು ವೇದಿಕೆಗಳಲ್ಲಿ ಏಕ ಕಾಲದಲ್ಲಿ ವಿಭಿನ್ನವಾದ ಹಾಗೂ ಆಕರ್ಷಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಅಂದು ರಾತ್ರಿ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟ ವಿ.ರವಿಚಂದ್ರನ್ ಉಪಸ್ಥಿತರಿರುವರು ಎಂದು ತಿಳಿಸಿದರು.

ಇದನ್ನೂ ಓದಿ: Budget 2024: ನಾಳೆ ಕೇಂದ್ರ ಮಧ್ಯಂತರ ಬಜೆಟ್ ಮಂಡನೆ, ನಿರೀಕ್ಷೆಗಳೇನು?

ಫೆ.04 ರ ರಾತ್ರಿ 11 ಗಂಟೆವರೆಗೆ ಉತ್ಸವದ ನಾಲ್ಕು ವೇದಿಕೆಗಳಲ್ಲಿ ವಿಭಿನ್ನವಾದ ಹಾಗೂ ಆಕರ್ಷಕ ಕಲಾ ತಂಡಗಳಿಂದ ಹಾಗೂ ಮುಖ್ಯ ವೇದಿಕೆಯಾದ ಗಾಯತ್ರಿ ಪೀಠದಲ್ಲಿ ಚಲನಚಿತ್ರ ನಟರಾದ ಅರ್ಮುಗಂ ರವಿಶಂಕರ್, ಅಜಯ್ ರಾವ್, ನೆನಪಿರಲಿ ಪ್ರೇಮ್, ರಾಗಿಣಿ ದ್ವಿವೇದಿ. ನಮ್ರತಾ ಗೌಡ. ನಿಮಿಕಾ ರತ್ನಾಕರ್, ನಿಶ್ವಿಕಾ ನಾಯ್ಡು, ಜಾಹಿದ್ ಅಹಮ್ಮದ್ ಖಾನ್, ಸತ್ಯನಾರಾಯಣ್ ಶೆಟ್ಟಿ, ಸಂಯುಕ್ತ ಹೆಗ್ಡೆ ಹಾಗೂ ದಿಗಂತ ಅವರಿಂದ ವಿವಿಧ ನೃತ್ಯ ಹಾಗೂ ಗಾಯನಗಳು ನಡೆಯಲಿವೆ. ಅದೇ ದಿನ 10 ಗಂಟೆಯ ನಂತರ ಖ್ಯಾತ ಸಂಗೀತ ಸಂಯೋಜಕ ಸಾಧು ಕೋಕಿಲ ಮತ್ತು ಗಾಯಕರಾದ ಕಲಾವತಿ, ಸುನೀತ, ವಾಣಿ ಹರಿಹರನ್, ಉಷಾ, ಮಂಗಳಾ ಮುಂತಾದವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ಇದನ್ನೂ ಓದಿ: RBI Order: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ! ಗ್ರಾಹಕರಿಗಾಗುವ ತೊಂದರೆ ಏನು?

ಸುದ್ದಿಗೋಷ್ಠಿಯಲ್ಲಿ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version