Site icon Vistara News

Vijayanagara News: ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಮಾರ್ಗಸೂಚಿ ಅನುಸರಿಸಲಿ: ಡಿಸಿ ದಿವಾಕರ್‌

Vijayanagara dc meeting with representatives of various political parties about lok sabha election

ಹೊಸಪೇಟೆ: ಲೋಕಸಭಾ ಚುನಾವಣೆ (Lok Sabha Election) ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ (Vijayanagara News) ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಮಾ.16 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಏಪ್ರಿಲ್ 12ರಂದು ರಂದು ಅಧಿಸೂಚನೆ ಹೊರಡಿಸಲಾಗುವುದು. ಮೇ 7ರಂದು ಮತದಾನ ಮತ್ತು ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಪುರುಷರು ಮತ್ತು ಮಹಿಳೆಯರು ಸೇರಿ ಒಟ್ಟು 11,18,543 ಮತದಾರರು ತಮ್ಮ ಮತಹಕ್ಕನ್ನು ಚಲಾಯಿಸಲು ಅರ್ಹರಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಎಲ್ಲಾ ನಾಮನಿರ್ದೇಶನಗೊಂಡ ನಿಗಮ ಮಂಡಳಿಗಳನ್ನು ಹಾಗೂ ಸಮಿತಿಗಳನ್ನು ಸಂಪೂರ್ಣ ಚುನಾವಣೆ ಪ್ರಕ್ರಿಯೆ ಮುಕ್ತಾಯದವರೆಗೆ ಅಮಾನತ್ತಿನಲ್ಲಿಡಲಾಗಿದೆ. ರಾಜಕೀಯ ಪಕ್ಷಗಳು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: Unilever Comapny: ಐಸ್‌ಕ್ರೀಮ್‌ ಉದ್ಯಮದಿಂದ ಹಿಂದೆ ಸರಿದ ಯೂನಿಲಿವರ್ ಕಂಪೆನಿ; 7,500 ಉದ್ಯೋಗ ಕಡಿತದ ಸೂಚನೆ

ಯಾವುದೇ ಉದ್ದೇಶಿತ ಸಭೆಗೆ ಸಂಬಂಧಿಸಿದ ಧ್ವನಿವರ್ಧಕಗಳು ಅಥವಾ ಇತರೆ ಯಾವುದೇ ಸೌಲಭ್ಯವನ್ನು ಬಳಸಲು ಅನುಮತಿ ಅಥವಾ ಪರವಾನಿಗೆ ಪಡೆಯಬೇಕಾದರೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು ಮತ್ತು ಅಂತಹ ಅನುಮತಿ ಮತ್ತು ಪರವಾನಿಗೆ ಪಡೆಯಬೇಕು. ಮೆರವಣಿಗೆಯನ್ನು ಆಯೋಜಿಸುವ ಪಕ್ಷ ಅಥವಾ ಅಭ್ಯರ್ಥಿಯು ಮೆರವಣಿಗೆ ಪ್ರಾರಂಭವಾಗುವ ಸಮಯ ಮತ್ತು ಸ್ಥಳ, ಅನುಸರಿಸಬೇಕಾದ ಮಾರ್ಗ ಮತ್ತು ಮೆರವಣಿಗೆ ಕೊನೆಗೊಳ್ಳುವ ಸಮಯ ಮತ್ತು ಸ್ಥಳವನ್ನು ಮುಂಚಿತವಾಗಿ ನಿರ್ಧರಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಒಮ್ಮೆ ಅನುಮತಿ ಪಡೆದ ಮೇಲೆ ಯಾವುದೇ ಕಾರಣಕ್ಕು ಮಾರ್ಗವನ್ನಾಗಲಿ ಅಥವಾ ಕಾರ್ಯಕ್ರಮವನ್ನಾಗಲಿ ಬದಲಾಯಿಸುವಂತಿಲ್ಲ.

ಸ್ಥಳೀಯ ಪೊಲೀಸ್ ಮತ್ತು ಚುನಾವಣಾ ಸಿಬ್ಬಂದಿ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: IPL 2024 : ಐಪಿಎಲ್​ನಲ್ಲಿ ಹ್ಯಾಟ್ರಿಕ್​ ವಿಕೆಟ್ ಸಾಧನೆ ಮಾಡಿದ ಬೌಲರ್​ಗಳ ವಿವರ ಇಲ್ಲಿದೆ

ಮತದಾನದ ದಿನ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಜರುಗಲು ಎಲ್ಲಾ ಸಹಕಾರ ನೀಡಬೇಕು. ಪಕ್ಷದ ಕಾರ್ಯಕರ್ತರಿಂದ ಯಾವುದೇ ಅಡಚಣೆಗಳು ಉಂಟಾಗದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ಸಾಕಷ್ಟು ಮೊದಲೇ ತೆಗೆದುಕೊಳ್ಳಬೇಕು. ಮತಗಟ್ಟೆ ಪ್ರವೇಶಕ್ಕೆ ಅನುಮತಿ ಹೊಂದಿದ ಏಜೆಂಟರುಗಳಿಗೆ ಮಾತ್ರ ಅವಕಾಶವಿರುತ್ತದೆ. ನಿರ್ಬಂಧಿಸಿದ ಪ್ರದೇಶದೊಳಗೆ ಯಾವುದೇ ಚುನಾವಣಾ ಪ್ರಚಾರ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸಬಹುದಾದ ಅಥವಾ ಪರಸ್ಪರ ದ್ವೇಷವನ್ನು ಉಂಟು ಮಾಡುವ ಅಥವಾ ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ ಧಾರ್ಮಿಕ ಅಥವಾ ಭಾಷಿಕ ನಡುವೆ ಉದ್ವಿಘ್ನತೆಯನ್ನು ಉಂಟು ಮಾಡುವ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು. ಮತಗಳನ್ನು ಪಡೆಯಲು ಜಾತಿ ಅಥವಾ ಕೋಮು ಭಾವನೆಗಳ ಆಧಾರದ ಮೇಲೆ ಮನವಿ ಮಾಡಬಾರದು ಎಂದು ತಿಳಿಸಿದರು.

ಇದನ್ನೂ ಓದಿ: Virat Kohli: ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಇತರರು ಇದ್ದರು.

Exit mobile version