Site icon Vistara News

Vijayangara News: ಹರಪನಹಳ್ಳಿಯಲ್ಲಿ ಜನತಾ ದರ್ಶನ; ಜನರ ಸಮಸ್ಯೆ ಆಲಿಸಿದ ಶಾಸಕಿ ಎಂ.ಪಿ. ಲತಾ, ಡಿಸಿ ದಿವಾಕರ್

Janata Darshan programme inauguration by MLA MP Latha at Harapanahalli

ಹೊಸಪೇಟೆ: ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭವಾಗಿರುವ ಜನತಾದರ್ಶನ (Janata Darshan) ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟಕ್ಕೂ ವಿಸ್ತರಣೆ ಮಾಡಲಾಗುವುದು ಎಂದು ಸ್ಥಳೀಯ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭಿಸಿರುವ ಜನತಾ ದರ್ಶನ ಕಾರ್ಯಕ್ರಮ ರಾಜ್ಯದಿಂದ, ಜಿಲ್ಲೆಯಿಂದ ಇದೀಗ ತಾಲೂಕು ಮಟ್ಟಕ್ಕೂ ಆರಂಭವಾಗಿರುವುದರಿಂದ ಬಡವರಿಗೂ, ಕೂಲಿಕಾರರಿಗೆ ಹಾಗೂ ರೈತರಿಗೆ ಅನುಕೂಲವಾಗಿದೆ ಎಂದರು.

ಇದನ್ನೂ ಓದಿ: VIjayanagara News: ಹೊಸಪೇಟೆಯಲ್ಲಿ ಅ.12, 13ರಂದು ಚಾರ್ಟರ್ಡ್ ಅಕೌಂಟೆಂಟ್‌ಗಳ ಸಮಾವೇಶ

ತಾಲೂಕಿನ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತವನ್ನು ಕರೆ ತರಲಾಗಿದೆ ಆದರೂ ಸಹ ಹರಪನಹಳ್ಳಿ ತಾಲೂಕಿನ ಕೊನೆಯ ಗ್ರಾಮಗಳ ಸಾರ್ವಜನಿಕರು ಜಿಲ್ಲಾ ಕೇಂದಕ್ಕೆ ಹೋಗಿ ಬರಲು ಸಮಸ್ಯೆಗಳಾಗುತ್ತಿದ್ದವು. ಆದರೆ ಇಂತಹ ಜನತಾದರ್ಶನದಿಂದ ಇಲ್ಲಿಯೇ ಸಾಧ್ಯವಾದಷ್ಟು ಪರಿಹಾರ ಸಿಗಲಿದೆ. ಇಂತಹ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಆಯೋಜಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ವಿವಿಧ ಇಲಾಖೆಯ 25 ಕೌಂಟರ್ ಸ್ಥಾಪನೆ

ಸಾರ್ವಜನಿಕರಿಂದ ಅಹವಾಲು ಸಲ್ಲಿಕೆಗೆ ಜಿಲ್ಲಾಡಳಿತದಿಂದ 25 ಕೌಂಟರ್ ಸ್ಥಾಪಿಸಲಾಗಿತ್ತು, ಇಲಾಖಾವಾರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕಂದಾಯ ಇಲಾಖೆ ಸೇರಿದಂತೆ ತಾಲೂಕು ಪಂಚಾಯಿತಿ, ಪೌರಾಡಳಿತ, ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತುಸೇವೆ, ಮೀನುಗಾರಿಕೆ ಇಲಾಖೆ, ಇಂಧನ ಇಲಾಖೆ (ಬೆಸ್ಕಾಂ), ಖಜಾನೆ ಇಲಾಖೆ, ಕಾರ್ಮಿಕ ಇಲಾಖೆ, ನೋಂದಣಿ ಇಲಾಖೆ, ಸಾರಿಗೆ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು, ಶಿಕ್ಷಣ, ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ), ಕೌಶಲ್ಯಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಒಟ್ಟು 25ಕ್ಕೂ ಹೆಚ್ಚು ಇಲಾಖೆಗಳ ಕೌಂಟರ್ ತೆರೆದು ಸಾರ್ವಜನಿಕರಿಂದ ಒಟ್ಟು 424 ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು. ಪಿಂಚಣಿ ಸೌಲಭ್ಯ ಸೇರಿದಂತೆ ಕೆಲವೊಂದನ್ನು ಸ್ಥಳದಲ್ಲಿಯೇ ಪರಿಹರಿಸಿದರು.

ಇದನ್ನೂ ಓದಿ: Yadgiri News: ಯಾದಗಿರಿಯಲ್ಲಿ ವಿಶ್ವ ವಸತಿ ರಹಿತರ ದಿನಾಚರಣೆ

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವಾಕರ್‌ ಎಂ.ಎಸ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ, ಡಿಎಫ್‌ಒ ಅರ್ಸಲನ್, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಡಿವೈಎಸ್‌ಪಿ ವೆಂಕಟಪ್ಪನಾಯಕ, ತಹಸೀಲ್ದಾರ್ ಗಿರೀಶಬಾಬು ಸೇರಿ ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version