ಹುಚ್ಚಮ್ಮ ಚೌದ್ರಿ ಅವರ ಕಿರು ಪರಿಚಯ ಇಲ್ಲಿದೆ;
ಬಿಸಿಯೂಟ ತಯಾರಕಿ, ಮಕ್ಕಳ ಶಿಕ್ಷಣಕ್ಕಾಗಿ ಎರಡು ಎಕರೆ ಭೂಮಿ ದಾನ ಮಾಡಿದವರು, ಕೊಪ್ಪಳ
ಪರರ ಮಕ್ಕಳನ್ನು ತಮ್ಮ ಮಕ್ಕಳೆಂದೇ ಭಾವಿಸಿ, ಅವರ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಈ ತಾಯಿಯ ಹೆಸರು ಶ್ರೀಮತಿ ಹುಚ್ಚಮ್ಮ ಚೌದ್ರಿ.
ಕೊಪ್ಪಳ ತಾಲೂಕಿನ ಕುಣಕೇರಿ ಗ್ರಾಮದ ಇವರು ತಮ್ಮೂರ ಶಾಲೆಗೆ ಲಕ್ಷಾಂತರ ರೂ. ಬೆಲೆಬಾಳುವ ಎರಡು ಎಕರೆ ಸ್ವಂತ ಭೂಮಿಯನ್ನು ದಾನ ಮಾಡಿ ಶಿಕ್ಷಣಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. 40 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡ ಹುಚ್ಚಮ್ಮ ಚೌದ್ರಿ ಅವರಿಗೆ ಮಕ್ಕಳಿಲ್ಲ. ಅನಾಥ ಹೆಣ್ಣು ಮಗುವನ್ನು ಸಾಕಿ ಸಲಹುತ್ತಿದ್ದಾರೆ. ಜತೆಗೆ ಶಾಲೆಯ ಎಲ್ಲ ಮಕ್ಕಳು ತಮ್ಮ ಮಕ್ಕಳು ಎಂಬ ಭಾವನೆಯಿಂದ ನೋಡುತ್ತ, ಅವರ ಕಲಿಕೆಯನ್ನು ನೋಡಿ ತಾವು ಖುಷಿಪಡುತ್ತಿದ್ದಾರೆ.
ಅನಕ್ಷರಸ್ಥೆಯಾಗಿರುವ ಹುಚ್ಚಮ್ಮ ಭೂದಾನ ಮಾಡಿದ ಶಾಲೆಯಲ್ಲಿಯೇ ಬಿಸಿಯೂಟ ಯೋಜನೆಯ ಮುಖ್ಯ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. 60 ವರ್ಷವಾಗಿದ್ದರಿಂದ ಅವರಿಗೆ ನಿವೃತ್ತಿ ನೀಡಲಾಗಿದ್ದರೂ, ಇವರ ಕಾಯಕ ನಿಂತಿಲ್ಲ. ಮಕ್ಕಳ ಮೇಲಿನ ಪ್ರೇಮದಿಂದ ಸೇವೆ ಮುಂದುವರಿಸಿದ್ದಾರೆ. ಈ ನಿಜ ಶಿಕ್ಷಣ ಪ್ರೇಮಿ, ನಮ್ಮೆಲ್ಲರ ಹೆಮ್ಮೆಯ ತಾಯಿಯಂತಿರುವ ಇವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇಲ್ಲಿ ಓದಿ | Vistara News Launch | ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಗೈದ ನೆಕ್ಕಂಟಿ ಸೂರಿಬಾಬುಗೆ ವಿಸ್ತಾರ ಕಾಯಕ ಯೋಗಿ ಗರಿ!