Site icon Vistara News

Weather Report: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಮಂಗಳೂರು, ಚಿತ್ರದುರ್ಗದಲ್ಲಿ ಏರಲಿದೆ ಬಿಸಿಲ ತಾಪಮಾನ

ಬೆಂಗಳೂರು: ಮುಂಜಾನೆ ನೆತ್ತಿ ಸುಡುವ ಸೂರ್ಯ, ಸಂಜೆಯಾದರೆ ಸುರಿಯುವ ಮಳೆಗೆ ಜನರು ಹೈರಾಣಾಗಿದ್ದಾರೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದರೆ, ಇತ್ತ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಬಿಸಿಲ ತಾಪಮಾನ (weather report) ಹೆಚ್ಚಾಗಿದೆ.

ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ಹೊತ್ತು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಠಾಂಶ 38.3 ಡಿ.ಸೆ ದಾಖಲಾಗಿದೆ.

ಬೆಂಗಳೂರು ನಗರದಲ್ಲಿ ಸೋಮವಾರ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇದೆ. ಬೆಂಗಳೂರು ಗ್ರಾಮಾಂತರ (ಏರ್‌ಪೋರ್ಟ್ ಸುತ್ತಮುತ್ತ) ಗರಿಷ್ಠ ತಾಪಮಾನ 34 ಡಿಗ್ರಿ ಹಾಗೂ ಕನಿಷ್ಠ ತಾಪಮಾನ 22.6 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ. ಬೆಂಗಳೂರಿನ ಎಚ್‌ಎಲ್‌ಎಲ್‌ ಸುತ್ತಮುತ್ತ ಗರಿಷ್ಠ 33.6 ಹಾಗು ಕನಿಷ್ಠ 22 ಡಿಗ್ರಿ ತಾಪಮಾನ ಇರುವ ಸಾಧ್ಯತೆ ಇದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ ಮೂರು ದಿನ ಸುಡು ಸುಡು ಬಿಸಿಲು

ಮುಂದಿನ ಮೂರು ದಿನ ಬಿಸಿಲ ತಾಪಮಾನ ಏರಿಕೆ ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ ಹಾಗೂ ಮಂಗಳೂರಲ್ಲಿ ಗರಿಷ್ಠ ಉಷ್ಣಾಂಶವು 34ರಿಂದ 35 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ. ಇತ್ತ ಗದಗದಲ್ಲಿ ಗರಿಷ್ಠ ಉಷ್ಣಾಂಶವು 36ರಿಂದ 37 ಡಿ.ಸೆ ಹಾಗೂ ಚಿತ್ರದುರ್ಗದಲ್ಲಿ 36 ಡಿ.ಸೆಗೆ ಏರಿಕೆ ಆಗಲಿದೆ. ಇನ್ನು ಹೊನ್ನಾವರ, ಕಲಬುರಗಿ, ಬೆಳಗಾವಿ ಸೇರಿದಂತೆ ಕಾರವಾರದಲ್ಲಿ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Road Accident: ವೇಗವಾಗಿ ಚಲಿಸುತ್ತಿದ್ದಾಗಲೇ ಸಿಡಿದ ಸ್ಕೂಟರ್‌ ಟಯರ್‌: ಟೆಕ್ಕಿ ಮಹಿಳೆ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

Exit mobile version