Site icon Vistara News

ತುಮಕೂರಲ್ಲಿ ಕರೆ ಮಾಡಿ ತಾಸು ಕಳೆದರೂ ಬಾರದ ಆ್ಯಂಬುಲೆನ್ಸ್​; ಮನೆಯಲ್ಲೇ ಮೃತಪಟ್ಟ ಮಹಿಳೆ

ambulance in karnataka

ತುಮಕೂರು: ತಾಂತ್ರಿಕ ದೋಷದಿಂದ ಸೆಪ್ಟೆಂಬರ್ 24ರ ರಾತ್ರಿಯಿಂದಲೂ ರಾಜ್ಯದಲ್ಲಿ ಆ್ಯಂಬುಲೆನ್ಸ್​ ಸೇವೆ (Ambulance Service) ಯಲ್ಲಿ ವ್ಯತ್ಯಯವಾಗಿದೆ. ನೂರಾರು ರೋಗಿಗಳು ಸಕಾಲದಲ್ಲಿ ಆ್ಯಂಬುಲೆನ್ಸ್​ ಸೇವೆ ಸಿಗದೆ ಪರದಾಡುತ್ತಿದ್ದಾರೆ. ಅದರಲ್ಲೀಗ ತುಮಕೂರಿನ ಮಧುಗಿರಿ ತಾಲೂಕಿನ ಐಡಿ ಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಗದ ಪರಿಣಾಮ ಮೃತಪಟ್ಟಿದ್ದಾರೆ.

ಜಯಮ್ಮ (65) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕುಟುಂಬಸ್ಥರು 108 ಆ್ಯಂಬುಲೆನ್ಸ್​ಗೆ ಕರೆ ಮಾಡಿದರು. ಆದರೆ ಒಂದು ಗಂಟೆ ಕಾದರೂ ಆ್ಯಂಬುಲೆನ್ಸ್ ಬರಲಿಲ್ಲ. ಕಾದುಕಾದು ಬೇಸತ್ತ ಕುಟುಂಬದವರು ತಾಲೂಕು ಆರೋಗ್ಯಾಧಿಕಾರಿಗೆ (ಟಿಎಚ್​ಒ) ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಜಯಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಬಳಿಕ ಟಿಎಚ್​ಒ ಅವರೇ ಖುದ್ದಾಗಿ ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ.

ಆದರೆ ಆ್ಯಂಬುಲೆನ್ಸ್​ ಜಯಮ್ಮನವರ ಮನೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದರು. ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರೆ ಬದುಕುತ್ತಿದ್ದರು. ಆ್ಯಂಬುಲೆನ್ಸ್​ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ. ಹಾಗೇ, ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಸ್ಯೆ ಸರಿಯಾದ್ರೂ ಕರೆ ಸ್ವೀಕರಿಸ್ತಿಲ್ಲ !
ರಾಜ್ಯಾದ್ಯಂತ ಸೆ.24ರ ರಾತ್ರಿಯಿಂದ ಆ್ಯಂಬುಲೆನ್ಸ್ ಸೇವೆ ಸಿಗುತ್ತಿಲ್ಲ. ಫೋನ್​ ಸಂಪರ್ಕ ಸಿಗುತ್ತಿಲ್ಲ, ಅದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗಿತ್ತು. ಆದರೆ ಈಗೀಗ ಅತ್ತ ಫೋನ್​ ರಿಂಗ್​ ಆಗುತ್ತಿದ್ದರೂ ಅದನ್ನು ಸ್ವೀಕರಿಸುತ್ತಿಲ್ಲ. ಭಾನುವಾರ ಆಗಿದ್ದರಿಂದ ಆರೋಗ್ಯ ಇಲಾಖೆ ತಾಂತ್ರಿಕ ದೋಷ ಪರಿಹಾರ ಮಾಡುತ್ತಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ. ಇದುವರೆಗೆ 108 ಆ್ಯಂಬುಲೆನ್ಸ್​ ಬೇಕೆಂದು ಸುಮಾರು 8000 ಕರೆಗಳು ಹೋಗಿವೆ. ಅದರಲ್ಲಿ 2000 ಕರೆಗಳಂತೂ, ತುಂಬ ಗಂಭೀರ ಪರಿಸ್ಥಿತಿ ಇದೆ ಎಂದೇ ಹೇಳಿದ್ದವು.

ಇದನ್ನೂ ಓದಿ: ರಾಜ್ಯದಲ್ಲಿ ರಾತ್ರಿಯಿಂದ 108 ಆ್ಯಂಬುಲೆನ್ಸ್​ ಸೇವೆ ಸ್ಥಗಿತ; ರೋಗಿಗಳಿಗೆ ಸಂಕಷ್ಟ

Exit mobile version