Site icon Vistara News

ರಾಹುಲ್​ ಗಾಂಧಿ ಹೇಗೆಲ್ಲ ವರ್ತಿಸಿದ್ದಾರೆ ಎಂದು ಹೇಳಲಾಗದು; ಕಾಂಗ್ರೆಸ್​​ ಬಿಟ್ಟ ಮತ್ತೊಬ್ಬ ಹಿರಿಯ ನಾಯಕ !

Congress Leader Resigns

ಹೈದರಾಬಾದ್​: ಕಾಂಗ್ರೆಸ್​​ನಲ್ಲಿ 50 ವರ್ಷಗಳಿಂದ ಇದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಪಕ್ಷ ಬಿಟ್ಟು ಹೋದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಅವರ ಬೆಂಬಲಿಗರು ಹಲವರು ಕಾಂಗ್ರೆಸ್​ ತೊರೆದಿದ್ದಾರೆ. ಈಗ ತೆಲಂಗಾಣದ ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟಿದ್ದಾರೆ. ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ತನ್ನ ಮೊದಲಿನ ಘನತೆಯನ್ನು ವಾಪಸ್​ ಪಡೆಯುತ್ತದೆ, ಈ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಸಾರ್ವಜನಿಕರಲ್ಲಿ ಭರವಸೆ ಹುಟ್ಟಿಸುವಲ್ಲಿ ಪಕ್ಷದ ವರಿಷ್ಠರು ಸಂಪೂರ್ಣ ವಿಫಲವಾಗಿದ್ದಾರೆ’ ಎಂದು ಆರೋಪಿಸಿ ತೆಲಂಗಾಣ ರಾಜ್ಯಸಭಾ ಮಾಜಿ ಸದಸ್ಯ ಎಂ.ಎ.ಖಾನ್​ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ಪಕ್ಷವನ್ನು ತಳಮಟ್ಟದಿಂದ ಕಟ್ಟಿದವರನ್ನು ಮತ್ತೆ ಪಕ್ಷದಲ್ಲಿ ಸಕ್ರಿಯಗೊಳಿಸಿಕೊಳ್ಳುವಲ್ಲಿ ಕಾಂಗ್ರೆಸ್​​ ಸೋಲುತ್ತಿದೆ. ಪಂಡಿತ್​ ನೆಹರು, ಇಂದಿರಾ ಗಾಂಧಿ, ಸಂಜಯ್​ ಗಾಂಧಿ, ರಾಜೀವ್​ ಗಾಂಧಿ ಕಾಲದಲ್ಲಿ ಕಾಂಗ್ರೆಸ್​​​ಗೆ ಇದ್ದ ಬದ್ಧತೆ, ನಿಷ್ಠೆ ಈಗಿಲ್ಲ. ಇದೇ ಕಾರಣಕ್ಕೆ ಹಿರಿಯ ನಾಯಕರು ಕಾಂಗ್ರೆಸ್​ ಬಿಡುತ್ತಿದ್ದಾರೆ. ಹೀಗೆ ಬಿಟ್ಟು ಹೋಗುತ್ತಿರುವವರನ್ನು ತಡೆಯಲೂ ಪಕ್ಷದ ಹಿರಿಯರು ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ. ನನಗೆ ಕಾಂಗ್ರೆಸ್​ ಬಿಟ್ಟರೆ ಯಾವುದೇ ಆಯ್ಕೆಗಳಿಲ್ಲ. ಆದರೆ ಏನೇ ಆದರೂ ನಾನು ಪಕ್ಷಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ ಎಂದು ಎಂ.ಎ.ಖಾನ್​ ತಿಳಿಸಿದ್ದಾರೆ.

ಎಂ.ಎ. ಖಾನ್​​ ಅವರೂ ಕೂಡ ಪಕ್ಷದ ಅವನತಿಗೆ ರಾಹುಲ್​ ಗಾಂಧಿಯೇ ಕಾರಣ ಎಂದು ಆರೋಪಿಸಿದ್ದಾರೆ. ಯಾವಾಗ ರಾಹುಲ್​ ಗಾಂಧಿ ಕಾಂಗ್ರೆಸ್​ ಸಮಿತಿಯ ಉಪಾಧ್ಯಕ್ಷರಾದರೋ, ಆಗಿನಿಂದಲೇ ಕಾಂಗ್ರೆಸ್​​ಗೆ ಹೊಡೆತ ಬೀಳಲು ಪ್ರಾರಂಭವಾಯಿತು. ಎಲ್ಲರದ್ದೂ ಒಂದು ಅಭಿಪ್ರಾಯವಾದರೆ, ರಾಹುಲ್​ ವಿಚಾರಗಳೇ ಮತ್ತೊಂದು ಇರುತ್ತಿತ್ತು. ಅದು ಪಕ್ಷದಲ್ಲಿ ಇನ್ಯಾರ ಆಲೋಚನಾ ಕ್ರಮಕ್ಕೂ ಹೊಂದಿಕೆಯಾಗುತ್ತಿರಲಿಲ್ಲ. ಕಾಂಗ್ರೆಸ್ ಅವನತಿಯಾಗಲು ರಾಹುಲ್​ ಗಾಂಧಿಯವರ ಈ ವರ್ತನೆಯೇ ಕಾರಣವಾಯಿತು. ರಾಹುಲ್​ ಗಾಂಧಿ ಹಿರಿಯ ನಾಯಕರೊಂದಿಗೆ ಹೇಗೆಗೆಲ್ಲ ವರ್ತಿಸಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದೂ ಆಪಾದಿಸಿದ್ದಾರೆ.

ಗುಲಾಂ ನಬಿ ಆಜಾದ್​ ರಾಜೀನಾಮೆ ಪತ್ರದಲ್ಲಿ ರಾಹುಲ್​ ಗಾಂಧಿ ವಿರುದ್ಧ ದೊಡ್ಡ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಸೋನಿಯಾ ಗಾಂಧಿಯವರಿಗೆ ಐದು ಪುಟಗಳ ಪತ್ರ ಬರೆದು, ಇಡೀ ಪಕ್ಷ ಕೆಳಗೆ ಬಿದ್ದಿದ್ದೇ ರಾಹುಲ್​ ಗಾಂಧಿಯಿಂದ ಎಂದು ನೇರವಾಗಿ ಆರೋಪಿಸಿದ್ದಾರೆ. ಅವರು ಎತ್ತಿದ ಧ್ವನಿಗೆ ಇನ್ನಷ್ಟು ಬಲ ಬರುತ್ತಿದೆ.

ಇದನ್ನೂ ಓದಿ: Rahul Gandhi | ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷ, ಅವರಂಥ ಪ್ರಭಾವಿ ನಾಯಕರು ಯಾರಿದ್ದಾರೆ? ಖರ್ಗೆ ಪ್ರಶ್ನೆ

Exit mobile version