Site icon Vistara News

ಉತ್ತರ ಪ್ರದೇಶದಲ್ಲಿ ಯಮುನಾ ನದಿಯಲ್ಲಿ ಮುಳುಗಿದ ದೋಣಿ; 20 ಮಂದಿ ದುರ್ಮರಣ

Yamuna Boat

ಬಾಂದಾ: ಉತ್ತರ ಪ್ರದೇಶ ಬಾಂದಾದಲ್ಲಿ ಯಮನಾ ನದಿಯಲ್ಲಿ ದೋಣಿಯೊಂದು ಮುಳುಗಿ (Boat Capsizes In Yamuna) ಸುಮಾರು 20 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ಕು ಮೃತದೇಹ ಸಿಕ್ಕಿದೆ. ಈ ಬೋಟ್​​ ಮರ್ಕಾ ಘಾಟ್​​​ನಿಂದ ಫತೇಹ್​ಪುರಕ್ಕೆ ಹೋಗುತ್ತಿತ್ತು. 40ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಿದ್ದರು. ಅದೆಷ್ಟೋ ಮಹಿಳೆಯರು ತಮ್ಮ ಪತಿಯ ಮನೆಯಿಂದ ತವರು ಮನೆಗೆ, ಸೋದರರಿಗೆ ರಕ್ಷಾ ಬಂಧನ ಕಟ್ಟಲು ಹೋಗುತ್ತಿದ್ದರು. ಆದರೆ ದೋಣಿ ಮಾರ್ಗ ಮಧ್ಯೆ ನದಿಯಲ್ಲಿ ಮುಳುಗಿದೆ. ಮೃತದೇಹಗಳನ್ನು ನದಿಯಿಂದ ಹೊರಗೆ ತೆಗೆಯುವ, ನಾಪತ್ತೆಯಾದವರನ್ನು ಹುಡುಕಿ, ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈ ಬೋಟ್​​ನ ಸಾಮರ್ಥ್ಯಕ್ಕಿಂತಲೂ ಹೆಚ್ಚು ಜನರನ್ನು ತುಂಬಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

ತುಂಬಿ ಹರಿಯುತ್ತಿರುವ ಯಮುನೆ
ಮಾನ್ಸೂನ್​ ಪ್ರಾರಂಭವಾದ ಮೇಲೆ ಇದೇ ಮೊದಲ ಬಾರಿಗೆ ಯಮುನಾ ನದಿ ತುಂಬಿ ಹರಿಯುತ್ತಿದೆ. ನದಿ ಹರಿಯುವ ಸುತ್ತಲಿನ ಪರ್ವತ ಪ್ರದೇಶಗಳಲ್ಲಿ ಆಗಸ್ಟ್​ 10ರ ರಾತ್ರಿ ಸುರಿದ ವಿಪರೀತ ಮಳೆಯಿಂದಾಗಿ ಬೆಳಗ್ಗೆ ಏಕಾಏಕಿ ನದಿ ನೀರಿನ ಮಟ್ಟ 182 ಕ್ಯೂಸೆಕ್ಸ್​​ನಿಂದ 295 ಕ್ಯೂಸೆಕ್ಸ್​​ಗೆ ಏರಿಕೆಯಾಗಿದೆ. ​​ ಹೀಗಾಗಿ ಯಮುನಾ ನದಿಯ ಸಮೀಪ ಇರುವ ಎಲ್ಲ ಹಳ್ಳಿಗಳ ಜನರಿಗೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಅಷ್ಟೇ ಅಲ್ಲ, ಈ ನದಿ ಹರಿಯುವ ಭಾಗಗಳ ಸ್ಥಳೀಯ ಆಡಳಿತಗಳು ಕೂಡ ಅಲರ್ಟ್​ ಆಗಿರುವಂತೆ ತಿಳಿಸಿತ್ತು.

ಇದನ್ನೂ ಓದಿ: Sunday read | 110 ವರ್ಷಗಳ ಹಿಂದೆ, ಒಂದು ಹಡಗು ಮುಳುಗುವ ಮುನ್ನ

Exit mobile version