Site icon Vistara News

Odisha Train Accident: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆ

Odisha Train Accident

#image_title

ಒಡಿಶಾದ ಬಾಲಾಸೋರ್​​ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೂರು ರೈಲುಗಳ ಮಧ್ಯೆಯ ಡಿಕ್ಕಿಯಿಂದ ಇಷ್ಟು ದೊಡ್ಡಮಟ್ಟದ ಅವಘಡ ಆಗಿದ್ದು, ಇತ್ತೀಚಿನ ವರ್ಷಗಳಲ್ಲೇ ಭೀಕರ ರೈಲು ಅಪಘಾತವಾಗಿದೆ. ಬೆಂಗಳೂರು-ಹೌರಾ ಸೂಪರ್​​ಫಾಸ್ಟ್​ ಎಕ್ಸ್​ಪ್ರೆಸ್​, ಶಾಲಿಮಾರ್​-ಚೆನ್ನೈ ಸೆಂಟ್ರಲ್​ ಕೋರಮಂಡಲ ಎಕ್ಸ್​​ಪ್ರೆಸ್​ ಮತ್ತು ಗೂಡ್ಸ್​ ರೈಲಿನ ಮಧ್ಯೆ ಅಪಘಾತವಾಗಿತ್ತು.

ಶಾಲಿಮಾರ್​-ಚೆನ್ನೈ ಸೆಂಟ್ರಲ್​ ಕೋರಮಂಡಲ ಎಕ್ಸ್​​ಪ್ರೆಸ್​​ ರೈಲು ಮತ್ತು ಒಂದು ಗೂಡ್ಸ್​ ರೈಲಿನ ಮಧ್ಯೆ ಬಾಲಾಸೋರ್​​ ಬಳಿ ಮೊದಲು ಡಿಕ್ಕಿಯಾಯಿತು. ಈ ಡಿಕ್ಕಿಯ ರಭಸಕ್ಕೆ ಕೋರಮಂಡಲ ರೈಲಿನ 10-12 ಬೋಗಿಗಳು ಕಳಚಿ ಅಕ್ಕ-ಪಕ್ಕದ ಹಳಿಗಳ ಮೇಲೆ ಉರುಳಿಬಿದ್ದವು. ಆದರೆ ಈ ಅಪಘಾತದ ಬಗ್ಗೆ ಗೊತ್ತಿಲ್ಲದೆ, ಪಕ್ಕದ ಹಳಿಯ ಮೇಲೆ ಬಂದ ಬೆಂಗಳೂರು-ಹೌರಾ ಸೂಪರ್​ಫಾಸ್ಟ್​ ರೈಲಿಗೂ ಅಪಾಯ ಕಾದಿತ್ತು. ಅದಾಗಲೇ ಹಳಿಯ ಮೇಲೆ ಬಿದ್ದಿದ್ದ ಕೋರಮಂಡಲ​ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದು, ಈ ರೈಲು ಕೂಡ ಅಪಘಾತಕ್ಕೀಡಾಗಿದೆ. ಒಡಿಶಾ ರಾಜ್ಯಾದ್ಯಂತ ಇದು ಒಂದು ದಿನದ ಶೋಕಾಚರಣೆಗೆ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: Odisha Rail Accident : ಅವಘಡ ತಡೆಯಲು ಕವಚ್​ ಇದ್ದರೂ ಒಡಿಶಾದಲ್ಲಿ ರೈಲು ಅಪಘಾತ ನಡೆದಿದ್ದು ಹೇಗೆ?

ರೈಲು ದುರಂತದ ಬಗ್ಗೆ ಪ್ರಧಾನಿ ಮೋದಿಯವರು ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಹಾಗೇ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರು ಪ್ರತಿಕ್ರಿಯೆ ನೀಡಿ ‘ಈ ದುರಂತ ನಿಜಕ್ಕೂ ವಿಷಾದನೀಯ. ಮೂರು ರೈಲುಗಳ ಮಧ್ಯೆ ಅಪಘಾತವಾಗುತ್ತಿದ್ದಂತೆ ಸ್ವಲ್ಪವೂ ತಡಮಾಡದೆ ರಕ್ಷಣಾ ಕಾರ್ಯಾಚರಣೆ ಶುರು ಮಾಡಲಾಯಿತು. ಈ ರೈಲು ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಯಾಣಿಕರ ಪರದಾಟ
ಒಡಿಶಾದಲ್ಲಿ ನಡೆದ ರೈಲು ದುರಂತದ ಹಿನ್ನೆಲೆಯಲ್ಲಿ ಬೆಂಗಳೂರು-ಗುವಾಹಟಿ ರೈಲು ಸಂಚಾರ ರದ್ದುಗೊಂಡಿದೆ. ಬರೀ ಇದೊಂದೇ ಅಲ್ಲ, ಅಪಘಾತವಾದ ಮಾರ್ಗದಲ್ಲಿ ಸಂಚರಿಸಬೇಕಿದ್ದ ಹಲವು ರೈಲುಗಳು ವಿಳಂಬವಾಗುತ್ತಿವೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬೆಂಗಳೂರು-ಗುವಾಹಟಿ ರೈಲು ರದ್ದಾದ ಬೆನ್ನಲ್ಲೇ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಟಿಕೆಟ್​ ವಾಪಸ್ ಕೊಡಿ ಎಂದು ಕೂಗಾಡುತ್ತಿದ್ದಾರೆ. ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

Exit mobile version