Site icon Vistara News

Chandra Shekhar Aazad: ಭೀಮ್ ಆರ್ಮಿ ಮುಖ್ಯಸ್ಥನ ಮೇಲೆ ಗುಂಡಿನ ದಾಳಿ; ನಾಲ್ವರು ಪೊಲೀಸ್ ವಶಕ್ಕೆ

Chandrashekhar Azad Injured

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ (Bhim Army chief Chandra Shekhar Aazad) ಅವರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಸಹರಾನ್​ಪುರದಲ್ಲಿ, ಚಂದ್ರಶೇಖರ್ ಆಜಾದ್​ (Chandra Shekhar Aazad) ಅವರು ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಈ ಗನ್​ಮೆನ್​ಗಳೂ ಕೂಡ ಕಾರಿನಲ್ಲಿಯೇ ಬಂದಿದ್ದರು. ಚಂದ್ರಶೇಖರ್ ಆಜಾದ್ ಅವರ ಕಾರಿನ ಕಿಟಕಿ ಗಾಜನ್ನು ತೂರಿಕೊಂಡು ಬಂದ ಒಂದು ಗುಂಡು, ಅವರ ಸೊಂಟದ ಭಾಗಕ್ಕೆ ತಗುಲಿ ಗಾಯವಾಗಿದೆ. ಇದೀಗ ಸಹರಾನ್​ಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನು ಗನ್​ಮೆನ್​ಗಳು ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಶೇಖರ್ ಆಜಾದ್​ ಅವರು ಸದ್ಯ ಸಹರಾನ್​ಪುರದ ಎಸ್​ಬಿಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಂದ್ರಶೇಖರ್ ಆಜಾದ್ ಅವರು ತಮ್ಮ ಟೊಯೊಟಾ ಫಾರ್ಚುನರ್​ ಕಾರಿನಲ್ಲಿ ದೆಹಲಿಗೆ ತೆರಳುತ್ತಿದ್ದರು. ಅವರೊಂದಿಗೆ ಸಹೋದರ ಸೇರಿ ಒಟ್ಟು ನಾಲ್ವರು ಇದ್ದರು. ಗನ್​ಮೆನ್​ಗಳು ಮಾರುತಿ ಸ್ವಿಫ್ಟ್​​ ಕಾರಿನಲ್ಲಿ ಬಂದಿದ್ದಾರೆ. ಅವರ ಕಾರಿನ ಮೇಲೆ ಹರ್ಯಾಣದ ಲೈಸೆನ್ಸ್​ ನಂಬರ್​ ಪ್ಲೇಟ್​ ಇತ್ತು. ಚಂದ್ರಶೇಖರ್ ಆಜಾದ್ ಕಾರಿಗೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಮೂರು ಗುಂಡು ಕಾರಿಗೆ ಬಿದ್ದಿದೆ. ಕಾರಿನ ಹಿಂಬದಿಯ ಗಾಜು ಕೂಡ ಪುಡಿಪುಡಿಯಾಗಿದೆ. ಪೊಲೀಸ್ ಹೇಳಿಕೆ ಕೊಟ್ಟಿದ್ದ ಚಂದ್ರಶೇಖರ್ ಆಜಾದ್​ ‘ನನಗೆ ಗುಂಡು ಹಾರಿಸಿದವರ ಮುಖ ಕಾಣಿಸಲಿಲ್ಲ. ನನ್ನ ಜತೆಗೆ ಇದ್ದವರು ಅವರನ್ನು ಗುರುತಿಸಬಹುದು’ ಎಂದು ಹೇಳಿದ್ದರು.

ಇದನ್ನೂ ಓದಿ: Chandrashekhar Azad: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್​ಗೆ ಗುಂಡೇಟು; ಆಸ್ಪತ್ರೆಗೆ ದಾಖಲು

ಭೀಮ್ ಆರ್ಮಿ ಎಂಬುದು ಅಂಬೇಡ್ಕರ್ ಅನುಯಾಯಿಗಳ ಒಂದು ಸಂಘಟನೆ. ದಲಿತರ ಹಕ್ಕು ರಕ್ಷಣೆಗಾಗಿ 2015ರಲ್ಲಿ ಸ್ಥಾಪಿತಗೊಂಡಿದೆ. ಚಂದ್ರಶೇಖರ್ ಆಜಾದ್ ರಾವಣ್​ ಮತ್ತು ವಿನಯ್​ ರತನ್​ ಸಿಂಗ್ ಇದರ ಸಂಸ್ಥಾಪಕರು. ಈ ಸಂಘಟನೆ ಸ್ಥಾಪಿತಗೊಂಡಿದ್ದು ಉತ್ತರ ಪ್ರದೇಶದಲ್ಲಿ. ಆದರೆ ಇಡೀ ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ದಲಿತರ ಮೇಲಾಗುವ ದೌರ್ಜನ್ಯ, ಮೇಲ್ಜಾತಿಯವರು ತೋರಿಸುವ ತಾರತಮ್ಯದ ವಿರುದ್ಧ ಇವರು ನಿರಂತರವಾಗಿ ಹೋರಾಡಿಕೊಂಡು ಬಂದಿದ್ದಾರೆ.

Exit mobile version