Site icon Vistara News

12ನೇ ಪತ್ನಿಯನ್ನು ಹೊಡೆದು ಕೊಂದ ಕುಡುಕ; ಮಕ್ಕಳು ಬರುವವರೆಗೂ ರಕ್ತದ ಮಡುವಲ್ಲಿ ಬಿದ್ದು ನರಳುತ್ತಿದ್ದ ಮಹಿಳೆ

Jharkhand man kills 12th wife

#image_title

ಕುಡುಕರು ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿ ಪತ್ನಿಯನ್ನು ಮನಬಂದಂತೆ ಥಳಿಸುವುದು, ಹಿಂಸೆ ಮಾಡುವ ಪ್ರಕರಣಗಳ ಸಂಖ್ಯೆ ಬೇಕಾದಷ್ಟು ಸಿಗುತ್ತವೆ. ಅದೆಷ್ಟೋ ಮಂದಿ ಕುಡಿದ ಮತ್ತಿನಲ್ಲಿ ಪತ್ನಿ/ಮಕ್ಕಳನ್ನು ಹತ್ಯೆಗೈದಿದ್ದೂ ಇದೆ. ಅಂತೆಯೇ ಜಾರ್ಖಂಡ್​​ನ ಬೊಕಾರೋದಲ್ಲಿ ಕುಡುಕನೊಬ್ಬ ಮದ್ಯದ ಅಮಲಿನಲ್ಲಿ, ಪತ್ನಿಯನ್ನು ಹೊಡೆದು ಕೊಂದಿದ್ದಾನೆ. ಅದೂ ಆಕೆ ಅವನ 12ನೇ ಪತ್ನಿ!

ಬೊಕಾರೋದ ಈ ವ್ಯಕ್ತಿಯ ಹೆಸರು ರಾಮ್​ ಚಂದ್ರ ತುರಿ. ಈತ ತನ್ನ ಯೌವ್ವನದ ಕಾಲದಲ್ಲಿ 11 ಮದುವೆಯಾಗಿದ್ದ. ಆದರೆ ಒಬ್ಬರೂ ಆತನೊಂದಿಗೆ ಬದುಕಿ ಬಾಳಲಿಲ್ಲ. ತುರಿಯ ಕುಡಿತ, ಆತ ಮಾಡುತ್ತಿದ್ದ ಜಗಳ/ಹಿಂಸೆಯನ್ನು ತಾಳಲಾರದೆ ಎಲ್ಲರೂ ಅವನನ್ನು ಬಿಟ್ಟು ಹೋಗಿದ್ದರು. ಕೆಲವರಂತೂ ನಾಲ್ಕು ದಿನವೂ ಅವನೊಂದಿಗೆ ಇಲ್ಲ. ಅದಾದ ಬಳಿಕ 12ನೇ ಬಾರಿಗೆ ಸಾವಿತ್ರಿ ದೇವಿಯನ್ನು ಮದುವೆಯಾದ. ಈಕೆ ಇಷ್ಟು ದಿನ ಜತೆಗಿದ್ದಳು. ಈಗ ಅವಳನ್ನೂ ಕೊಂದ ಎಂದು ನೆರೆಹೊರೆಯವರು ಹೇಳಿದ್ದಾರೆ.

ರಾಮ್​ ಚಂದ್ರ ತುರಿ ಮತ್ತು ಸಾವಿತ್ರಿ ದೇವಿ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಅದರಲ್ಲಿ ಒಬ್ಬಾತ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನು ಮೂವರೂ ಮನೆಯಲ್ಲೇ ಇದ್ದು, ಘಟನೆ ನಡೆದ ದಿನ ಎಲ್ಲರೂ ಹತ್ತಿರದ ಸಂಬಂಧಿಯೊಬ್ಬರ ಮದುವೆಗೆ ಹೋಗಿದ್ದರು. ಎಂದಿನಂತೆ ಕುಡಿದು ಬಂದಿದ್ದ ತುರಿ, ಮನೆಗೆ ಬಂದ ಮೇಲೆಯೂ ಮದ್ಯದ ಬಾಟಲಿ ತೆಗೆದು ಸೇವನೆ ಶುರು ಮಾಡಿದ. ಆಗ ಸಾವಿತ್ರಿ ದೇವಿ ಆತನನ್ನು ತಡೆಯಲು ಮುಂದಾದಳು. ಕ್ರೋಧಗೊಂಡ ತುರಿ, ಕೋಲಿನಿಂದ ಆಕೆಗೆ ಮನಬಂದಂತೆ ಥಳಿಸಿದ್ದಾನೆ. ಹೊಡೆತ ತಾಳಲಾರದೆ ಅವಳು ಎಚ್ಚರ ತಪ್ಪಿದರೂ, ಅವನು ಹೊಡೆಯುವುದನ್ನು ಮುಂದುವರಿಸಿದ. ಇದರಿಂದ ತೀವ್ರವಾಗಿ ಗಾಯಗೊಂಡ ಸಾವಿತ್ರಿ ದೇವಿ ರಕ್ತದ ಮಡುವಲ್ಲಿ ಬಿದ್ದಿದ್ದರು. ಮದುವೆಗೆ ಹೋದ ಮಕ್ಕಳು ಬರುವಷ್ಟರಲ್ಲಿ ಆಕೆ ಸ್ಥಿತಿ ಹದಗೆಟ್ಟಿತ್ತು. ಸಹಾಯಕ್ಕಾಗಿ ಅಂಗಲಾಚುತ್ತ, ನರಳುತ್ತಿದ್ದರು.

ಇದನ್ನೂ ಓದಿ: Domestic violence | ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಎರಡು ಕಾಯಿದೆಗಳಡಿ ಜೀವನಾಂಶ ಪಡೆಯಬಹುದು

ಮಕ್ಕಳು ಕೂಡಲೇ ಸಾವಿತ್ರಿ ದೇವಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರೆಲ್ಲ ಇವರ ಮನೆ ಬಳಿ ಸೇರಿದ್ದರು. ಚಿಕಿತ್ಸೆ ನೀಡಲಾಯಿತು ಆದರೂ, ರಕ್ತಸ್ರಾವ ಆಗಿದ್ದರಿಂದ ಅವರು ಬದುಕುಳಿಯಲಿಲ್ಲ. ಪೊಲೀಸರು ರಾಮ್​ ಚಂದ್ರ ತುರಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

Exit mobile version