Site icon Vistara News

Adipurush Row: ಕುರಾನ್​ ಬಗ್ಗೆ ಸಾಕ್ಷ್ಯಚಿತ್ರ ಮಾಡಿ ನೋಡೋಣ; ‘ಆದಿಪುರುಷ್​‘ ತಂಡಕ್ಕೆ ಹೈಕೋರ್ಟ್​ ತರಾಟೆ

Allahabad high court And Adipurush Poster

ಆದಿಪುರುಷ್​ ಸಿನಿಮಾದಲ್ಲಿ (Adipurush Movie), ಹಿಂದುಗಳ ಪವಿತ್ರ ಗ್ರಂಥಗಳಲ್ಲಿ ಒಂದಾದ ರಾಮಾಯಣವನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ (Adipurush Row) ಎಂಬ ಆಕ್ರೋಶ ಬಲವಾಗಿ ಕೇಳಿಬಂದಿದೆ. ಅದರ ಮಧ್ಯೆಯೇ ಅಲಹಾಬಾದ್​ ಹೈಕೋರ್ಟ್​ನ (Allahabad High Court) ಲಖನೌ ಪೀಠ ಈ ವಿಚಾರದಲ್ಲಿ ಆದಿಪುರುಷ್ ಸಿನಿಮಾ ನಿರ್ಮಾಪಕ/ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದೆ.

ಆದಿಪುರುಷ್ ಸಿನಿಮಾ ಬ್ಯಾನ್ ಮಾಡಬೇಕು ಎಂದು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್​ ಮತ್ತು ಶ್ರೀ ಪ್ರಕಾಶ್ ಸಿಂಗ್ ಅವರನ್ನು ಒಳಗೊಂಡ ಪೀಠ, ‘ಸಿನಿಮಾ ಮಾಡುವವರು ಧಾರ್ಮಿಕ ಪುಸ್ತಕಗಳು, ಕಥೆಗಳಿಂದ ದೂರವೇ ಇದ್ದುಬಿಡಿ. ಧಾರ್ಮಿಕ, ಪೌರಾಣಿಕ ಕತೆಗಳನ್ನು ಹೇಗೆಂದರೆ ಹಾಗೆ ಬಿಂಬಿಸಿ ಸಿನಿಮಾ ಮಾಡಲೇಬೇಡಿ’ ಎಂದು ಸಿನಿಮಾ ತಯಾರಿಕರಿಗೆ ಸೂಚನೆ ನೀಡಿದೆ. ಹಾಗೇ, ಆದಿಪುರುಷ್​ ಸಿನಿಮಾ ನಿಷೇಧ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಅಫಿಡಿವಿಟ್​ ಸಲ್ಲಿಕೆ ಮಾಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಸೂಚನೆ ನೀಡಿದೆ.

ರಾಮಾಯಣವನ್ನೇನೋ ಹೀಗೆ ಚಿತ್ರೀಕರಿಸಿದ್ದೀರಿ. ಅದೇ ಕುರಾನ್ ಗ್ರಂಥವನ್ನು ನೀವು ಹೀಗೆ ಚಿತ್ರಿಸಲು ಸಾಧ್ಯವೇ? ಹಾಗೊಮ್ಮೆ ಕುರಾನ್​-ಬೈಬಲ್ ಮೇಲೆ ನೀವು ಹೀಗೆ ಒಂದು ಸಿನಿಮಾವನ್ನೋ, ಸಾಕ್ಷ್ಯಚಿತ್ರವನ್ನೋ ಮಾಡಿದರೆ ಮುಂದಿನ ಪರಿಣಾಮ ಏನಾಗಬಹುದು?-ಊಹಿಸಿದ್ದೀರಾ?. ಕೋರ್ಟ್ ಯಾವುದೇ ಧರ್ಮದ ಪರವಾಗಿಲ್ಲ. ಆದರೂ ಹಿಂದು ದೇವರು-ದೇವತೆಗಳನ್ನು ಸಿನಿಮಾಗಳಲ್ಲಿ ಬಿಂಬಿಸುವ ಬಗ್ಗೆ ಆಕ್ಷೇಪವಿದೆ. ಆದಿಪುರುಷ್ ಸಿನಿಮಾ ಕೂಡ ಇದನ್ನೇ ಮಾಡಿತು. ನಾವಿವತ್ತು ಆದಿಪುರುಷ್​ ಸಿನಿಮಾದಲ್ಲಿ ದೇವರನ್ನು ತಮಾಷೆಯಾಗಿ ಬಿಂಬಿಸಿದ್ದನ್ನು ನೋಡಿಯೂ ಸುಮ್ಮನಿದ್ದರೆ, ಮುಂಬರುವ ದಿನಗಳಲ್ಲಿ ಇಂಥವು ಹೆಚ್ಚುತ್ತವೆ. ನಾವೂ ಸಿನಿಮಾ ನೋಡಿದ್ದೇವೆ. ಅದರಲ್ಲಿ ಶಿವ ತ್ರಿಶೂಲ ಹಿಡಿದುಕೊಂಡು ಓಡುತ್ತಾನೆ. ಇದು ಜೋಕ್ ಅಲ್ಲದೆ ಇನ್ನೇನು?’ ಎಂದು ಹೈಕೋರ್ಟ್ ಪೀಠ ಪ್ರಶ್ನಿಸಿದೆ.

ಇದನ್ನೂ ಓದಿ: Adipurush Movie: ಕಟ್ಟಪ್ಪ ಬಾಹುಬಲಿ ಕೊಂದಿದ್ದು ಯಾಕೆ ಅಂತ ಗೊತ್ತಾಯ್ತು; ಸೆಹ್ವಾಗ್ ಟ್ವೀಟ್‌ ವೈರಲ್‌!

ಆದಿಪುರುಷ್ ಸಿನಿಮಾವನ್ನು ನಿಷೇಧಿಸಬೇಕು ಎಂದು ಕುಲದೀಪ್ ತೇವಾರಿ ಮತ್ತು ಬಂದಾನಾ ಕುಮಾರ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಬಾದ್ ಹೈಕೋರ್ಟ್​ಗೆ ಸಲ್ಲಿಸಿದ್ದಾರೆ. ವಕೀಲರಾದ ರಂಜನಾ ಅಗ್ನಿಹೋತ್ರಿ ಮತ್ತು ಸುಧಾ ಶರ್ಮಾ ಅವರು ಈ ಅರ್ಜಿದಾರರ ಪರ ವಾದ ಮಂಡನೆ ಮಾಡುತ್ತಿದ್ದಾರೆ. ಹಾಗೇ ಇನ್ನೊಂದೆಡೆ ಕೇಂದ್ರದ ಪರ ಸಾಲಿಸಿಟರ್ ಜನರಲ್​ ಎಸ್​.ಬಿ.ಪಾಂಡೆ ವಾದ ಮಂಡನೆ ಮಾಡಿದ್ದರು. ‘ಇಂಥ ಸಿನಿಮಾಗಳನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ’ ಎಂದು ಕೋರ್ಟ್​ ಪಾಂಡೆ ಬಳಿ ಪ್ರಶ್ನಿಸಿದೆ. ಅದಕ್ಕೆ ಪಾಂಡೆ ‘ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಲ್ಲಿರುವ ಸಂಸ್ಕಾರವಂತ ಸದಸ್ಯರೇ ಈ ಸಿನಿಮಾಕ್ಕೆ ಅನುಮೋದನೆ ನೀಡಿದ್ದಾರೆ’ ಎಂದು ಹೇಳಿದ್ದಾರೆ. ಅದಕ್ಕೆ ಕೋರ್ಟ್​ ಮತ್ತಷ್ಟು ವ್ಯಂಗ್ಯವಾಗಿ ‘ಸಂಸ್ಕಾರವಂತರೇ ಈ ಸಿನಿಮಾವನ್ನು ಪಾಸ್ ಮಾಡಿರುವುದು ಅಚ್ಚರಿ. ನಿಜಕ್ಕೂ ಈ ಸಿನಿಮಾ ಅನುಮೋದನೆ ಮಾಡಿದವರಿಗೆ ದೇವರ ಆಶೀರ್ವಾದ ಸಿಗುತ್ತದೆ’ ಎಂದು ಹೇಳಿದೆ.

Exit mobile version