Site icon Vistara News

ಪತಿ ಮಾಡಿದ್ದನ್ನೆಲ್ಲ ಹೆಂಡತಿ ಅನುಸರಿಸಲೇಬೇಕಾ?; ಪ್ರಣೀತ್​ ಕೌರ್ ಬಗ್ಗೆ ಕೇಳಿದ್ದಕ್ಕೆ ಕ್ಯಾಪ್ಟನ್​ ಸಿಡಿಮಿಡಿ

Amarinder Singh reacts to Question Wife Not Joining BJP

ನವ ದೆಹಲಿ: ಕಾಂಗ್ರೆಸ್​​ ವಿರುದ್ಧ ಅಸಮಾಧಾನಗೊಂಡು, ಆ ಪಕ್ಷವನ್ನು ಬಿಟ್ಟು ಪಂಜಾಬ್​ ಲೋಕ್​ ಕಾಂಗ್ರೆಸ್​ ಪಕ್ಷ ಕಟ್ಟಿದ್ದ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ತಮ್ಮ ಪಿಎಲ್​​ಸಿ ಪಕ್ಷವನ್ನೀಗ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ. ಹಾಗೇ, ತಮ್ಮ ಪುತ್ರ ರಣೀಂದರ್​ ಸಿಂಗ್​, ಪುತ್ರಿ ಜೈ ಇಂದರ್ ಕೌರ್​, ಮೊಮ್ಮಗ ನಿರ್ವಣ್​ ಸಿಂಗ್​ ಜತೆ ಬಿಜೆಪಿ ಸೇರ್ಪಡೆಯಾಗಿ, ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ. ಇಷ್ಟಾದ ಬಳಿಕ ಅಮರಿಂದರ್​ ಸಿಂಗ್​​ಗೆ ಪ್ರಶ್ನೆಯೊಂದು ಎದುರಾಗಿದೆ. ‘ನೀವೆಲ್ಲರೂ ಬಿಜೆಪಿಗೆ ಬಂದರೂ ನಿಮ್ಮ ಪತ್ನಿ ಪ್ರಣೀತ್ ಕೌರ್​ ಕಾಂಗ್ರೆಸ್​ನಲ್ಲೇ ಉಳಿಯುತ್ತಾರಾ?’-ಈ ಪ್ರಶ್ನೆಯನ್ನು ಮಾಧ್ಯಮದವರು, ರಾಜಕೀಯ ವಲಯದಲ್ಲೇ ಹಲವರು ಅಮರಿಂದರ್ ಸಿಂಗ್​ಗೆ ಕೇಳಿದ್ದಾರೆ. ಇದಕ್ಕೆ ಅಮರಿಂದರ್​ ಸಿಂಗ್​ ತುಸು ಕಟುವಾಗಿಯೇ ಉತ್ತರ ನೀಡಿದ್ದು, ‘ಪತಿ ಏನೆಲ್ಲ ಮಾಡುತ್ತಾನೋ ಅದನ್ನು ಹೆಂಡತಿಯೂ ಅನುಸರಿಸಲೇಬೇಕೆಂಬ ನಿಯಮ ಎಲ್ಲಿಯೂ ಇಲ್ಲ’ ಎಂದಿದ್ದಾರೆ.

ಪ್ರಣೀತ್​ ಕೌರ್​​ ಸದ್ಯ ಪಟಿಯಾಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಸಂಸದೆ. ಇವರು 2009ರಿಂದ 2014ರವರೆಗೆ ಮನಮೋಹನ್​ ಸಿಂಗ್​ ಪ್ರಧಾನಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಿರಿಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಮರಿಂದರ್​ ಸಿಂಗ್​ ಕಾಂಗ್ರೆಸ್​ ಬಿಟ್ಟಾಗಿನಿಂದಲೂ ಅವರ ಪತ್ನಿ ಪ್ರಣೀತ್​ ಕೌರ್​ ಮೇಲೆ ಒಂದು ಕಣ್ಣು ನೆಟ್ಟಿದೆ. ಅವರು ಪಕ್ಷ ಬಿಡುತ್ತಾರಾ? ಪತಿಯ ದಾರಿಯನ್ನೇ ತುಳಿಯುತ್ತಾರಾ? ಎಂಬ ಕುತೂಹಲ ಇದ್ದೇಇದೆ. ಈಗ ಅಮರಿಂದರ್​ ಸಿಂಗ್​ ಕುಟುಂಬವೇ ಬಿಜೆಪಿ ಸೇರ್ಪಡೆಯಾದ ಮೇಲೆ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಹಾಗಂತ ಪ್ರಣೀತ್​ ಕೌರ್​ ಕಾಂಗ್ರೆಸ್​​ಗೆ ರಾಜೀನಾಮೆ ನೀಡುವ ಯಾವ ಮಾತನ್ನೂ ಆಡಿಲ್ಲ.

ಕಾಂಗ್ರೆಸ್​ ಬಿಟ್ಟು ಅದರ ರಾಜಕೀಯ ಸ್ಪರ್ಧಿ ಬಿಜೆಪಿ ಸೇರಿದ ಕ್ಯಾಪ್ಟನ್​ ಅಮರಿಂದರ್ ಸಿಂಗ್​ರನ್ನು ಇತ್ತೀಚೆಗೆ ಕಾಂಗ್ರೆಸ್​ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ಟೀಕಿಸಿದ್ದರು. ಕ್ಯಾಪ್ಟನ್​​ಗಿಂತ ಅವರ ಪತ್ರನಿ ಕೌರ್​ ತುಂಬ ಸಂವೇದನೆ ಇರುವ ವ್ಯಕ್ತಿ ಎಂದು ಹೇಳಿದ್ದರು. ಮೊದಲು ಶಿರೋಮಣಿ ಅಕಾಲಿ ದಳದಲ್ಲಿದ್ದ ಅಮರಿಂದರ್​ ಸಿಂಗ್​ 1998ರಲ್ಲಿ ಕಾಂಗ್ರೆಸ್ ಸೇರಿದರು. ಅವರಿಗೆ ಪಂಜಾಬ್​ ಸಿಎಂ ಪಟ್ಟವೂ ದೊರೆಯಿತು. ಅದಾದ ಮೇಲೆ ಅಲ್ಲಿನ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧುವಿನೊಂದಿಗಿನ ಮನಸ್ತಾಪ ದೊಡ್ಡದಾಗಿ ಇವರು ಕಾಂಗ್ರೆಸ್​ನ್ನೇ ತೊರೆದರು.

ಇವರ ಬಿಜೆಪಿ ಸೇರ್ಪಡೆಗೆ ಕಾಂಗ್ರೆಸ್ಸಿಗರು ಬೇರೆಯದ್ದೇ ಆಯಾಮ ಕೊಟ್ಟಿದ್ದಾರೆ. ಅಮರಿಂದರ್​ ಸಿಂಗ್​ ಮತ್ತು ಅವರ ಕುಟುಂಬದ ವಿರುದ್ಧ ವಿವಿಧ ಕೇಸ್​ಗಳು ಇವೆ. ಬಿಜೆಪಿ ಸೇರಿದರೆ ಅವುಗಳಿಂದ ಪಾರಾಗಬಹುದು. ಎಲ್ಲ ಪಾಪಗಳಿಂದಲೂ ಮುಕ್ತರಾಗಬಹುದು ಎಂಬ ಒಂದೇ ಕಾರಣಕ್ಕೆ ಕುಟುಂಬ ಸಮೇತ ಅವರು ಬಿಜೆಪಿ ಸೇರಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಟೀಕಿಸಿದ್ದಾರೆ.

ಇದನ್ನೂ ಓದಿ: Amarinder Singh | ವಿಲೀನ ಅಮರಿಂದರ್‌ ಸಿಂಗ್‌ಗೆ ಅಸ್ತ್ರ, ಬಿಜೆಪಿಗೆ ಬ್ರಹ್ಮಾಸ್ತ್ರ?

Exit mobile version