Site icon Vistara News

Amritpal Singh: ‘ಅಮೃತ್​ಪಾಲ್​ ಸಿಂಗ್ ಶರಣಾಗಿಲ್ಲ’; ಕಾರ್ಯಾಚರಣೆಯ ಸಂಪೂರ್ಣ ವಿವರ ಬಿಚ್ಚಿಟ್ಟ ಪಂಜಾಬ್ ಪೊಲೀಸ್​

Amritpal Singh

Spy Cam, Mobile, Bluetooth Device Recovered from Khalistani Leader Amritpal Singh's Cell in Assam

ಖಲಿಸ್ತಾನಿ ನಾಯಕ, ದೇಶಭ್ರಷ್ಟ ಅಮೃತ್​ಪಾಲ್ ಸಿಂಗ್ (Amritpal Singh) ಇಂದು ಅರೆಸ್ಟ್ ಆಗಿದ್ದಾನೆ. ಪಂಜಾಬ್​ನ ಮೊಗಾ ಜಿಲ್ಲೆಯ ರೊಡಿ ಎಂಬ ಹಳ್ಳಿಯಲ್ಲಿ ಆತ ಪೊಲೀಸರಿಗೆ ಶರಣಾಗಿದ್ದಾನೆ. ಬಳಿಕ ಅವನನ್ನು ಬಂಧಿಸಲಾಗಿದೆ (Amritpal Singh Arrested )ಎಂದು ಹೇಳಲಾಗಿತ್ತು. ​ ಆದರೆ ಇದೀಗ ಪೊಲೀಸರು ಸುದ್ದಿಗೋಷ್ಠಿ ನಡೆಸಿ, ‘ಅಮೃತ್​ಪಾಲ್ ಸಿಂಗ್ ಆತನಾಗಿಯೇ ಬಂದು ಶರಣಾಗಿಲ್ಲ. ಬದಲಾಗಿ ನಾವೇ ಅವನನ್ನು ಬಂಧಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಜಾಬ್​ ಐಜಿಪಿ ಸುಖ್​ಚೇನ್​ ಸಿಂಗ್​ ಗಿಲ್​ ಅವರು ‘ ಅಮೃತ್​ಪಾಲ್ ಸಿಂಗ್​ ರೊಡೆ ಹಳ್ಳಿಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿಯನ್ನು ಪಂಜಾಬ್ ಪೊಲೀಸ್​ನ ಗುಪ್ತಚರ ವಿಭಾಗ ನೀಡಿತ್ತು. ಅಮೃತ್​ಸರ್ ಪೊಲೀಸರು ಮತ್ತು ಗುಪ್ತಚರ ದಳದ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ 6.45ರ ಹೊತ್ತಿಗೆ ಅಮೃತ್​ಪಾಲ್ ಸಿಂಗ್​​ನನ್ನು ಬಂಧಿಸಿದ್ದಾರೆ. ಆತ ಅಲ್ಲಿನ ರೊಡೆವಾಲ್​ ಗುರುದ್ವಾರ್​ನಲ್ಲಿಯೇ ಇದ್ದ. ಅವನು ಅಲ್ಲಿಂದ ಹೊರಬರುವಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು. ನಾವು ಪಾವಿತ್ರ್ಯತೆ ದೃಷ್ಟಿಯಿಂದ ಗುರುದ್ವಾರವನ್ನು ಪ್ರವೇಶ ಮಾಡಲಿಲ್ಲ. ಅಮೃತ್​ಪಾಲ್ ಸಿಂಗ್​ ಅವನಾಗೇ ಬಂದು ಶರಣಾಗಿಲ್ಲ. ಅವನು ಇದ್ದ ಜಾಗವನ್ನು ತಿಳಿದುಕೊಂಡು, ನಾವೇ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Amritpal Singh: ಇದು ಅಂತ್ಯವಲ್ಲ ಎನ್ನುತ್ತ ಪೊಲೀಸರ ಎದುರು ಬಂದ ಅಮೃತ್​ಪಾಲ್​ ಸಿಂಗ್​; ಆತ ಶರಣಾಗಿದ್ದು ಯಾರ ಹುಟ್ಟೂರಲ್ಲಿ?

‘ರೊಡೆ ಹಳ್ಳಿಯಲ್ಲಿ ಅಮೃತ್​ಪಾಲ್​ ಸಿಂಗ್ ಇರುವ ಬಗ್ಗೆ ಗುಪ್ತಚರ ಇಲಾಖೆ ವಿಶೇಷ ಮಾಹಿತಿ ಸಿಗುತ್ತಿದ್ದಂತೆ ಇಡೀ ಹಳ್ಳಿಯನ್ನು ಪೊಲೀಸರು ಸುತ್ತುವರಿದಿದ್ದರು. ಅವನು ಅದೇನು ಮಾಡಿದರೂ ಅಲ್ಲಿಂದ ಹೊರಹೋಗಲು ಸಾಧ್ಯವೇ ಆಗುತ್ತಿರಲಿಲ್ಲ. ಶರಣಾಗದೆ ಬೇರೆ ದಾರಿ ಅವನಿಗೆ ಇರಲಿಲ್ಲ. ಅಮೃತ್​ಪಾಲ್ ಅಡಗಿದ್ದ ಜಾಗ ಗುಪ್ತಚರ ಇಲಾಖೆಗೆ ಹೇಗೆ ತಿಳಿಯಿತು ಎಂಬುದನ್ನು ಬಹಿರಂಗ ಪಡಿಸಲು ಸಾಧ್ಯವೇ ಇಲ್ಲ. ಕಳೆದ ಹಲವು ತಿಂಗಳಿಂದಲೂ ಪಂಜಾಬ್​ ಪೊಲೀಸ್​ನ ವಿವಿಧ ಘಟಕಗಳು ಪರಸ್ಪರ ಸಹಕಾರದಲ್ಲಿ ಅಮೃತ್​ಪಾಲ್ ಪತ್ತೆ ಕಾರ್ಯ ನಡೆಸುತ್ತಿದ್ದರು. ಕೊನೆಗೂ ನಮ್ಮ ಕಾರ್ಯಾಚರಣೆ ಯಶಸ್ವಿಯಾಗಿದೆ’ ಎಂದು ಐಜಿಪಿ ಸುಖ್​ಚೇನ್​ ಸಿಂಗ್​ ಗಿಲ್ ಹೇಳಿದ್ದಾರೆ.

ಅಸ್ಸಾಂ ಜೈಲಿಗೆ ಕರೆದೊಯ್ದಿದ್ದೇಕೆ?
ಅಮೃತ್​ಪಾಲ್ ಸಿಂಗ್​ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಅಸ್ಸಾಂನ ದಿಬ್ರುಗರ್​ ಜೈಲಿಗೆ ಕರೆದೊಯ್ಯಲಾಗಿದೆ. ಈಗಾಗಲೇ ಬಂಧಿತರಾಗಿರುವ ಅಮೃತ್​ಪಾಲ್​ ಸಿಂಗ್​​ನ ಸಹಾಯಕರಾದ ದಲ್ಜಿತ್​ ಸಿಂಗ್​ ಕಲ್ಸಿ, ಪಾಪಲ್​ಪ್ರೀತ್ ಸಿಂಗ್​, ಕುಲವಂತ್ ಸಿಂಗ್​ ಧಲಿವಾಲ್​, ವರೀಂದರ್​ ಸಿಂಗ್ ಜೋಹಾಲ್​, ಗುರ್ಮೀತ್ ಸಿಂಗ್​ ಬುಕ್ಕನ್​ವಾಲಾ, ಹರ್ಜಿತ್​ ಸಿಂಗ್​, ಭಗವಂತ್​ ಸಿಂಗ್, ಬಸಂತ್ ಸಿಂಗ್ ಮತ್ತು ಗುರಿಂದರ್​ಪಾಲ್ ಸಿಂಗ್​ ಔಜ್ಲಾರನ್ನೂ ಕೂಡ ದಿಬ್ರುಗಢ್​​​ ಜೈಲಿನಲ್ಲಿಯೇ ಇಡಲಾಗಿದೆ.

ಅಮೃತ್​ಪಾಲ್ ಸಿಂಗ್​​ ಮತ್ತು ಆತನ ಆಪ್ತರನ್ನು ಅಸ್ಸಾಂನ ದಿಭ್ರುಗಢ್​ ಜೈಲಿಗೆ ಸಾಗಿಸಿದ್ದೇಕೆ ಎಂಬ ಬಗ್ಗೆ ನಿಖರ ವಿವರವನ್ನು ಪೊಲೀಸರು ಕೊಟ್ಟಿಲ್ಲ. ಆದರೆ ದಿಭ್ರುಗಢ್​​ನ ಜೈಲು ಅತ್ಯಂತ ಭದ್ರವಾಗಿದೆ. ಅಸ್ಸಾಂನಲ್ಲಿ 1990ರ ದಶಕದಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ULFA)ಭಯೋತ್ಪಾದಕರ ಹಾವಳಿ ಜಾಸ್ತಿಯಿದ್ದ ಸಂದರ್ಭದಲ್ಲಿ ಆ ಸಂಘಟನೆಯ ಉನ್ನತ ಮಟ್ಟದ ಉಗ್ರರನ್ನು ಇದೇ ಜೈಲಿನಲ್ಲಿಯೇ ಇಡಲಾಗುತ್ತಿತ್ತು. ಉಗ್ರರನ್ನು ಇಡುವ ಜೈಲಾಗಿದ್ದರಿಂದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಉತ್ತರ ಭಾರತದಲ್ಲೇ ಅತ್ಯಂತ ಹಳೆಯ ಮತ್ತು ಸುರಕ್ಷಿತವಾದ ಜೈಲು ಇದು. ಹೀಗಾಗಿ ಅಮೃತ್​ಪಾಲ್​ ಸಿಂಗ್ ಮತ್ತು ಇತರ ಖಲಿಸ್ತಾನಿ ಹೋರಾಟಗಾರರನ್ನು ಇಲ್ಲಿಯೇ ಇಡಲಾಗಿದೆ ಎಂದು ಹೇಳಲಾಗಿದೆ.

Exit mobile version