Site icon Vistara News

ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನು ಹತ್ಯೆ ಮಾಡಿದ ಉಗ್ರರು; ಆತನ ಸಹೋದರನಿಗೆ ಗಂಭೀರ ಗಾಯ

Kashmiri Pandit Murder

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಸರಣಿ (Kashmiri Pandit shot dead) ಮುಂದುವರಿದಿದೆ. ಈ ಸಮುದಾಯಕ್ಕೆ ಸೇರಿದ ಸುನೀಲ್​ ಕುಮಾರ್​ ಎಂಬಾತನನ್ನು ಉಗ್ರರು ಇಂದು ಹತ್ಯೆ ಮಾಡಿದ್ದಾರೆ. ಹಾಗೇ, ಈತನ ಸಹೋದರ ಪಿಂಟು ಕುಮಾರ್​ ಮೇಲೆ ಕೂಡ ಅಟ್ಯಾಕ್​ ಆಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

ಸುನೀಲ್​ ಕುಮಾರ್ ಹತ್ಯೆಯನ್ನು ಜಮ್ಮು-ಕಾಶ್ಮೀರ ಪೀಪಲ್ಸ್​ ಕಾನ್ಫರೆನ್ಸ್​ ಮುಖ್ಯಸ್ಥ ಸಜಾದ್​ ಲೋನ್​​ ಖಂಡಿಸಿ ಟ್ವೀಟ್ ಮಾಡಿದ್ದಾರೆ. ಹೇಡಿ ಉಗ್ರರು ಶೋಪಿಯಾನ್​​ದಲ್ಲಿ ಇನ್ನೊಂದು ಭೀಕರ ದಾಳಿ ಮಾಡಿದ್ದಾರೆ. ಈ ಹಿಂಸಾಚಾರವನ್ನು ನಾವೆಲ್ಲರೂ ಖಂಡಿಸುತ್ತೇವೆ. ಮೃತ ಸುನೀಲ್​ ಕುಮಾರ್​ ಕುಟುಂಬಕ್ಕೆ ನಮ್ಮ ಸಾಂತ್ವನಗಳು ಎಂದಿದ್ದಾರೆ. ಆಲ್​ ಇಂಡಿಯಾ ಮಜ್ಲಿಸ್​ ಇ ಇತ್ತೇಹಾದುಲ್​ ಮುಸ್ಲಿಮೀನ್​ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಮಾತನಾಡಿ, ‘ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರು ಸುರಕ್ಷಿತರಲ್ಲ. ಬಿಜೆಪಿ ನೇಮಕ ಮಾಡಿದ ಲೆಫ್ಟಿನೆಂಟ್​ ಗವರ್ನರ್​ ನೇತೃತ್ವದ ಸರ್ಕಾರ ಮತ್ತು ಪ್ರಧಾನಿ ಮೋದಿ ಆಡಳಿತ ವಿಫಲವಾಗಿದೆ. ಆರ್ಟಿಕಲ್​ 370ನ್ನು ತೆಗೆಯುವಾಗ ಕಾಶ್ಮೀರ ಪಂಡಿತರಿಗೆ ನೀವೆಲ್ಲ ಇನ್ನು ಮುಂದೆ ಸುರಕ್ಷಿತರಾಗುತ್ತೀರಿ ಎಂದೇ ಭರವಸೆ ಕೊಡಲಾಗಿತ್ತು. ಆದರೆ ಅವರ ಹತ್ಯೆ ಸರಣಿ ಮುಂದುವರಿದಿದೆ. ಈ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವರು ಮತ್ತ ಇಡೀ ಬಿಜೆಪಿ ಪಕ್ಷ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

ನ್ಯಾಷನಲ್​ ಕಾನ್ಫರೆನ್ಸ್​ ಮುಖಂಡ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ ಟ್ವೀಟ್ ಮಾಡಿ, ‘ದಕ್ಷಿಣ ಕಾಶ್ಮೀರದಿಂದ ಇಂದು ಕೆಟ್ಟ ಸುದ್ದಿಗಳೇ ಬರುತ್ತಿವೆ. ಸೈನಿಕರು ಪ್ರಯಾಣ ಮಾಡುತ್ತಿದ್ದ ಬಸ್ ನದಿಗೆ ಬಿದ್ದು, 6 ಯೋಧರು ಮೃತಪಟ್ಟಿದ್ದಾರೆ. ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರ ಬೆನ್ನಲ್ಲೇ ಕಾಶ್ಮೀರಿ ಪಂಡಿತ ಸುನೀಲ್​ ಕುಮಾರ್​ ಹತ್ಯೆ ಸುದ್ದಿ ಕೇಳಿಬಂತು. ಅವರ ಸೋದರನೂ ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನಗಳು ಎಂದು ಹೇಳಿದ್ದಾರೆ.

ಸೋಮವಾರ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಹೊತ್ತಲ್ಲೇ ಬಡ್​ಗಾಂವ್​​ನ ಮನೆಯೊಂದರ ಮೇಲೆ ಉಗ್ರರು ಗ್ರೆನೇಡ್​ ದಾಳಿ ನಡೆಸಿದ್ದರು. ಅದರಲ್ಲಿ ಕಾಶ್ಮೀರಿ ಪಂಡಿತ್​ ಕುಟುಂಬಕ್ಕೆ ಸೇರಿದ ಕರಣ್​ ಕುಮಾರ್​ ಸಿಂಗ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗೇ, ಅವರು ನಿನ್ನೆ ಶ್ರೀನಗರದ ಬಾಟಾಮಾಲೂ ಏರಿಯಾದ ಪೊಲೀಸ್​ ಠಾಣೆ ಮೇಲೆ ಕೂಡ ಗ್ರೆನೇಡ್​ ದಾಳಿ ನಡೆಸಿದ್ದರು. ಅದರಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಮೇ ತಿಂಗಳಲ್ಲಿ ಕಾಶ್ಮೀರಿ ಪಂಡಿತ್​ ರಾಹುಲ್​ ಭಟ್​ ಎಂಬುವರ ಹತ್ಯೆಯಾಗಿತ್ತು. ಅವರು ಕಂದಾಯ ಇಲಾಖೆ ಉದ್ಯೋಗಿಯಾಗಿದ್ದರು.

ಇದನ್ನೂ ಓದಿ: ಕಾಶ್ಮೀರಿ ಪಂಡಿತ್‌ ರಾಹುಲ್‌ ಭಟ್‌ ಹತ್ಯೆ; ಎಲ್ಲೆಡೆ ಪ್ರತಿಭಟನೆ, ಬಿಜೆಪಿ ವಿರುದ್ಧ ಆಕ್ರೋಶ

Exit mobile version