Site icon Vistara News

ಪ್ರಜಾ ಸಂಗ್ರಾಮ ಯಾತ್ರೆಗೆ ಹೊರಟಿದ್ದ ತೆಲಂಗಾಣ ಬಿಜೆಪಿ ನಾಯಕ ಬಂಡಿ ಸಂಜಯ್​ಗೆ ಗೃಹ ಬಂಧನ; ಹೈಕೋರ್ಟ್ ಮೆಟ್ಟಿಲೇರಿದ ಪಕ್ಷ

Bandi Sanjay under house arrest BJP Moves Telangana High Court

ತೆಲಂಗಾಣ ಬಿಜೆಪಿ ಘಟಕದ ಮುಖ್ಯಸ್ಥ ಬಂಡಿ ಸಂಜಯ್​ ಅವರು ಐದನೇ ಹಂತದ ಪ್ರಜಾ ಸಂಗ್ರಾಮ ಯಾತ್ರೆಯನ್ನು ಪ್ರಾರಂಭಿಸಲು ನಿರ್ಮಲ್​ ಜಿಲ್ಲೆಗೆ ತೆರಳುತ್ತಿದ್ದಾಗ, ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಲ್ಲದೆ, ಸದ್ಯ ಗೃಹ ಬಂಧನದಲ್ಲಿ ಇರಿಸಲಾಗಿದೆ. ಇಂದಿನಿಂದ (ನವೆಂಬರ್​ 28) ಅವರು ನಿರ್ಮಲ್​ ಜಿಲ್ಲೆಯ ಬೈಂಸಾದಿಂದ ಪ್ರಜಾ ಸಂಗ್ರಾಮ ಯಾತ್ರೆ ಪ್ರಾರಂಭಿಸಲು ನಿರ್ಧರಿಸಿದ್ದರು. ಇಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಸಭೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಪಾಲ್ಗೊಳ್ಳುವವರಿದ್ದರು.

ಆದರೆ ತೆಲಂಗಾಣ ಪೊಲೀಸರು ಈ ಪಾದಯಾತ್ರೆಗೆ ಮತ್ತು ಸಾರ್ವಜನಿಕ ಸಭೆಗೆ ಅನುಮತಿ ನೀಡಲಿಲ್ಲ. ಅಲ್ಲಿಗೆ ಹೊರಟಿದ್ದ ಸಂಜಯ್​ ಬಂಡಿ ಮತ್ತು ಬಿಜೆಪಿ ಕಾರ್ಯಕರ್ತರನ್ನು ಮಾರ್ಗ ಮಧ್ಯೆಯೇ ಅಂದರೆ ಜಗ್ತಿಯಾಲ್‌ ಜಿಲ್ಲೆಯ ತಾಟಿಪಲ್ಲಿ ಎಂಬಲ್ಲಿ ತಡೆದು ವಶಕ್ಕೆ ಪಡೆದಿದ್ದಾರೆ. ಹೀಗೆ ನಿರ್ಮಲ್​​ಗೆ ಹೊರಟಿದ್ದವರನ್ನು ಪೊಲೀಸರು ತಡೆದ ವೇಳೆ ಅಲ್ಲಿ ಗಲಾಟೆ ನಡೆದಿತ್ತು. ತಡೆಯಲು ಬಂದ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಒಂದಷ್ಟು ಜನರಂತೂ ರಸ್ತೆಯ ಮೇಲೆ ಮಲಗಿ, ಪ್ರತಿರೋಧ ಒಡ್ಡಿದರು. ಬಂಡಿ ಸಂಜಯ್​ ಅರೆಸ್ಟ್ ಆಗುತ್ತಿದ್ದಂತೆ ರಸ್ತೆ ಮೇಲೆ ಟೈರ್​ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಆಕ್ರೋಶಗೊಂಡಿದ್ದ ಬಿಜೆಪಿ ನಾಯಕ ಬಂಡಿ ಸಂಜಯ್,​ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಟ್ವೀಟ್ ಮಾಡಿದ ಅವರು ‘ಬೈಂಸಾ ಪ್ರದೇಶ ನಿರ್ಬಂಧಿತ ಸ್ಥಳವಾ? ನಾವ್ಯಾಕೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ? ನಾವು ಶಾಂತಿಯುತವಾಗಿ ಸಭೆ ನಡೆಸಲು ಬಿಡದ ಮುಖ್ಯಮಂತ್ರಿ, ಈ ರಾಜ್ಯ ರಕ್ಷಣೆ ಮಾಡುತ್ತಾರಾ? ರಾಜ್ಯದಲ್ಲಿ ಶಾಂತಿ ಸ್ಥಾಪಿಸುತ್ತಾರಾ? ನಾವು 5ನೇ ಹಂತದ ಪ್ರಜಾ ಸಂಗ್ರಾಮ ಯಾತ್ರೆಯನ್ನು ನಡೆಸಲು ಅವಕಾಶ ಕೊಡುತ್ತಿಲ್ಲ. ತೆಲಂಗಾಣ ಸಿಎಂ ಕೆಸಿಆರ್​ ಒಬ್ಬ ಸರ್ವಾಧಿಕಾರಿ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?’ ಎಂದು ಕಿಡಿ ಕಾರಿದ್ದಾರೆ. ಹಾಗೇ, ಕೋರ್ಟ್​ಗೆ ಹೋಗುವುದಾಗಿಯೂ ತಿಳಿಸಿದ್ದಾರೆ.

ಹೈಕೋರ್ಟ್​ ಮೆಟ್ಟಿಲೇರಿದ ಬಿಜೆಪಿ
ಪ್ರಜಾ ಸಂಗ್ರಾಮ ಯಾತ್ರೆ ಮತ್ತು ಸಾರ್ವಜನಿಕ ಸಭೆ ನಡೆಸಲು ಅವಕಾಶ ಕೊಡದ ತೆಲಂಗಾಣ ಸರ್ಕಾರ, ಪೊಲೀಸ್​ ವಿರುದ್ಧ ಬಿಜೆಪಿಯವರು ಅಲ್ಲಿನ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇನ್ನು ಅರ್ಜಿಯನ್ನು ಹೈಕೋರ್ಟ್​ ಇಂದೇ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: BL Santosh | SIT ನೋಟಿಸ್‌ಗೆ ತೆಲಂಗಾಣ ಹೈಕೋರ್ಟ್‌ ತಡೆಯಾಜ್ಞೆ, ಸದ್ಯಕ್ಕಿಲ್ಲ ಬಿ.ಎಲ್. ಸಂತೋಷ್‌ ವಿಚಾರಣೆ

Exit mobile version