Site icon Vistara News

Bharat Jodo Yatra | ಮಹಾರಾಷ್ಟ್ರ ಪ್ರವೇಶಿಸಿದ ಕಾಂಗ್ರೆಸ್ ಪಾದಯಾತ್ರೆ; ಗುರುದ್ವಾರಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿ

ದೇಗಲೂರ್​: ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ನವೆಂಬರ್​ 7 (ಮಂಗಳವಾರ)ರಂದು ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಕಾಲಿಟ್ಟಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರಿಗಳು ಮಹಾರಾಷ್ಟ್ರದ ನಾಂದೇಡ್​ ಜಿಲ್ಲೆಗೆ ಪ್ರವೇಶ ಮಾಡಿದ್ದು, ಇಂದು (ನ.8) ಗುರುನಾನಕ್​ ಜಯಂತಿ ನಿಮಿತ್ತ ಯಾದಗಾರಿ ಬಾಬಾ ಜೋರಾವರ್​ ಸಿಂಗ್​ ಜೀ ಫತೇಹ್​ ಸಿಂಗ್​ ಜಿ ಗುರುದ್ವಾರಕ್ಕೆ ಭೇಟಿ ನೀಡಿದರು.

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಸಿಖ್​ ಸಂಪ್ರದಾಯದಂತೆ ತಲೆಗೆ ಟೋಪಿ (ಶಿರವಸ್ತ್ರ) ಧರಿಸಿ, ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ಗುರುದ್ವಾರಕ್ಕೆ ಭೇಟಿ ಕೊಟ್ಟ ಫೋಟೋವನ್ನು ಕಾಂಗ್ರೆಸ್​ ಟ್ವೀಟ್ ಮಾಡಿದೆ. ‘ಈ ದೇಶದಲ್ಲಿ ಸಾಮರಸ್ಯ ಮತ್ತು ಸಮಾನತೆ ಮೂಡಲಿ ಎಂದು ರಾಹುಲ್ ಗಾಂಧಿ ಪ್ರಾರ್ಥನೆ ಮಾಡಿದ್ದಾರೆ’ ಎಂದು ಕಾಂಗ್ರೆಸ್​ ಹೇಳಿದೆ.

ಸೋಮವಾರ ರಾತ್ರಿ, ಕೈಯಲ್ಲಿ ಮಶಾಲ್​ (ಪಂಜು) ಹಿಡಿದು ಮಹಾರಾಷ್ಟ್ರ ಪ್ರವೇಶ ಮಾಡಿದ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​​ನ ಇತರ ಪಾದಯಾತ್ರಿಗಳು ಬಳಿಕ ವಿಶ್ರಾಂತಿ ತೆಗೆದುಕೊಂಡರು. ಬೆಳಗ್ಗೆ ಭಾರತ್​ ಜೋಡೋ ಯಾತ್ರೆಯನ್ನು ನಾಂದೇಡ್​ ಜಿಲ್ಲೆಯ ಬಿಲೋಲಿ ಸಿಟಿಯಲ್ಲಿರುವ ಅಟ್ಕಾಲಿಯಿಂದ ಪ್ರಾರಂಭ ಮಾಡಿದ್ದಾರೆ. ರಾಹುಲ್​ ಗಾಂಧಿಯವರಿಗೆ ರಾಹುಲ್​ ಗಾಂಧಿಗೆ ಮಹಾರಾಷ್ಟ್ರ ಕಾಂಗ್ರೆಸ್​ ನಾಯಕರಾದ ಸುಶೀಲ್​ಕುಮಾರ್​ ಶಿಂಧೆ, ಅಶೋಕ್​ ಚೌವಾಣ್​, ಮಹಾರಾಷ್ಟ್ರದ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥ ನಾನಾ ಪಟೋಲೆ, ಬಾಳಾಸಾಹೇಬ್​ ಥೋರಟ್​ ಇತರರು ಜತೆಯಾಗಿದ್ದಾರೆ. ಇಂದು ರಾತ್ರಿ ರಾಹುಲ್​ ಗಾಂಧಿ ಮತ್ತು ಅವರ ಸಹಚರರು ಇಲ್ಲಿನ ಗೋದಾವರಿ ಮನಾರ್​ ಸಕ್ಕರೆ ಕಾರ್ಖಾನೆ ಇರುವ ಬಯಲಿನಲ್ಲಿಯೇ ತಂಗಲಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರತ್​ ಜೋಡೋ ಯಾತ್ರೆ ಸಮಯದಲ್ಲಿ ರಾಹುಲ್​ ಗಾಂಧಿ ಅವರು ಎರಡು ಱಲಿ ನಡೆಸಲಿದ್ದು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: Bharath jodo | ಗೊರವರ ಕುಣಿತಕ್ಕೆ ಮನಸೋತು ಹೆಜ್ಜೆ ಹಾಕಿದ ಸಿದ್ದರಾಮಯ್ಯ, ನೋಡಲು ನೂಕುನುಗ್ಗಲು

Exit mobile version