Site icon Vistara News

ಬ್ರಾಹ್ಮಣರನ್ನು ಅಪಮಾನಿಸಿದ ಬಿಜೆಪಿ ನಾಯಕನ ಉಚ್ಚಾಟನೆ; ಸಹಿಸೋದೇ ಇಲ್ಲವೆಂದ ಪ್ರಧಾನ ಕಾರ್ಯದರ್ಶಿ

Madhya Pradesh

ಭೋಪಾಲ್​: ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನ ಮಾಡಿದ್ದ ಗ್ವಾಲಿಯರ್​-ಚಂಬಲ್​ನ ಬಿಜೆಪಿ ಮುಖಂಡ ಪ್ರೀತಮ್​ ಸಿಂಗ್​ ಲೋಧಿ (Pritam Singh Lodhi)ಯನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ವಿವಾದಾತ್ಮಕ ಭಾಷಣ ಮಾಡಿದ್ದ ಅವರನ್ನು ಇಂದು ಬೆಳಗ್ಗೆ ಭೋಪಾಲ್​​ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಕರೆಸಲಾಗಿತ್ತು. ಬಳಿಕ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡಲಾಗಿದೆ. ಇವರು ಬ್ರಾಹ್ಮಣರಿಗೆ ಅಪಮಾನ ಮಾಡಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಹಾಗೇ, ಅಪಾರ ವಿರೋಧವೂ ವ್ಯಕ್ತವಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅವಂತಿ ಬಾಯಿ ಲೋಧಿ ಜನ್ಮದಿನದ ನಿಮಿತ್ತ ಶಿವಪುರಿಯ ಖರೈಹ್ ಎಂಬ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರೀತಮ್​ ಸಿಂಗ್​ ಲೋಧಿ, ‘ಬ್ರಾಹ್ಮಣರು ಧರ್ಮದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಮತ್ತು ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಹೇಳಿದ್ದರು. ಅಷ್ಟೇ ಅಲ್ಲ, ‘ಯಾವುದೇ ಒಳ್ಳೆಯ ಕುಟುಂಬದಲ್ಲಿ ಒಬ್ಬ ಚೆಂದನೆಯ ಹೆಣ್ಣುಮಗಳು ಕಂಡರೆ ಸಾಕು, ಆ ಮನೆಯಲ್ಲಿ ಊಟ ಮಾಡಲು ಅವರು ಬಯಸುತ್ತಾರೆ. ಹಾಗೆ, ಊಟಕ್ಕೆ ಕುಳಿತಾಗ, ಯುವತಿಯರೆಲ್ಲ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು, ವಯಸ್ಸಾದವರೆಲ್ಲ ಹಿಂದೆ ಕೂರಬೇಕು ಎನ್ನುತ್ತಾರೆ’ ಎಂದೂ ವ್ಯಂಗ್ಯ ಮಾಡಿದ್ದರು. ಅವರು ಈ ಮಾತುಗಳನ್ನಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಬಿಜೆಪಿಯ ಯುವಮೋರ್ಚಾ ನಾಯಕ ಪ್ರವೀಣ್​ ಮಿಶ್ರಾ ಪೊಲೀಸರಿಗೆ ದೂರು ನೀಡಿ, ‘ಲೋಧಿ ಸಮುದಾಯಗಳ ಮಧ್ಯೆ, ಜನರ ಮಧ್ಯೆ ದ್ವೇಷ ಹರಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

ಪ್ರೀತಮ್​ ಸಿಂಗ್​ ಲೋಧಿ, ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರ ಆಪ್ತವಲಯದಲ್ಲಿ ಇದ್ದವರು. ಶಿವಪುರಿಯ ಪಿಚ್ಚೋರೆ ವಿಧಾನಸಭಾ ಕ್ಷೇತ್ರದಲ್ಲಿ 2013ರಲ್ಲಿ ಮತ್ತು 2018ರಲ್ಲಿ ಸೋತಿದ್ದಾರೆ. ಆದರೂ ಗ್ವಾಲಿಯರ್-ಚಂಬಲ್​ ಪ್ರದೇಶಗಳಲ್ಲಿ ಇವರು ಪ್ರಬಲ ನಾಯಕ. ತುಂಬ ಸಭ್ಯರೇನೂ ಅಲ್ಲ, ನಾಲ್ಕು ಕೊಲೆಯತ್ನ, ಎರಡು ಕೊಲೆ ಪ್ರಕರಣ ಸೇರಿ ಒಟ್ಟು 37 ಕೇಸ್​​ಗಳು ಇವರ ವಿರುದ್ಧ ದಾಖಲಾಗಿವೆ.

ಲೋಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭಗವಾನ್​ ದಾಸ್​ ಸಬ್ನಾನಿ,‘ಲೋಧಿಯವರು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಆರೋಪ ಮಾಡಿದ್ದಾರೆ. ಇಂಥದ್ದನ್ನೆಲ್ಲ ನಾವು ಸಹಿಸಿಕೊಳ್ಳೋದೇ ಇಲ್ಲ. ನಮ್ಮ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಾವು ಮೊದಲು ಅವರಿಗೆ ನೋಟಿಸ್​ ಕೊಟ್ಟೆವು. ಅದಕ್ಕೆ ಪ್ರತಿಯಾಗಿ ಲೋಧಿ ಕ್ಷಮಾಪಣೆಯನ್ನೂ ಕೋರಿದರು. ಆದರೆ ಅವರು ಕೊಟ್ಟ ಸ್ಪಷ್ಟನೆ ತೃಪ್ತಿದಾಯಕವಾಗಿಲ್ಲ. ಹಾಗಾಗಿ ಆರು ವರ್ಷಗಳ ಕಾಲದವರೆಗೆ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Egg episode| ಆಪರೇಷನ್‌ ಕಮಲ ಶಾಸಕರಿಗಷ್ಟೇ ಅಲ್ಲ, ಪುಂಡರಿಗೂ ಇದ್ಯಾ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

Exit mobile version