Site icon Vistara News

ಬಿಜೆಪಿ ತೊರೆದ ಗುಜರಾತ್​ ಮಾಜಿ ಸಚಿವ; 2 ಆಲದ ಮರಗಳು ಇನ್ಯಾವುದೇ ಮರಗಳನ್ನು ಬೆಳೆಯಲು ಬಿಡುತ್ತಿಲ್ಲವೆಂದು ಆರೋಪ

BJP Leader Jay Narayan Vyas joins Congress

ಗುಜರಾತ್​​ ವಿಧಾನಸಭೆ ಚುನಾವಣೆಗೆ ಇನ್ನು 2 ದಿನ ಮಾತ್ರ ಬಾಕಿ ಇರುವಾಗ ಬಿಜೆಪಿ ಮಾಜಿ ಸಚಿವ ಮತ್ತು ಹಿರಿಯ ನಾಯಕ ಜಯನಾರಾಯಣ್​ ವ್ಯಾಸ್​ ಮತ್ತು ಅವರ ಪುತ್ರ ಸಮೀರ್​ ವ್ಯಾಸ್​ ಇಬ್ಬರೂ ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ. ಜಯನಾರಾಯಣ್​ ವ್ಯಾಸ್​ ಅವರು ಕಾಂಗ್ರೆಸ್​​ಗೆ ಸೇರ್ಪಡೆಯಾಗುವ ಸಮಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಉಪಸ್ಥಿತರಿದ್ದರು.

ಜಯನಾರಾಯಣ್​ ವ್ಯಾಸ್ ಅವರು ನವೆಂಬರ್​ 5ರಂದು ಬಿಜೆಪಿ ತೊರೆದಿದ್ದರು. ಗುಜರಾತ್​​ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ, 2007ರಿಂದ 2012ರವರೆಗೆ ಸಚಿವರಾಗಿದ್ದ ಇವರು ಈಗ ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದರು. ನನ್ನ ಹಿರಿತನ, ಅನುಭವವನ್ನು ಬಿಜೆಪಿ ಮುಖಂಡರು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪ ಮಾಡಿ ಬಿಜೆಪಿ ಬಿಟ್ಟಿದ್ದರು. ವ್ಯಾಸ್​ ಅವರು ಕಾಂಗ್ರೆಸ್​ ಸೇರುತ್ತಾರೆಂಬ ಮಾತು ಅಂದಿನಿಂದಲೂ ಕೇಳಿಬರುತ್ತಿತ್ತು. ಆದರೆ ದೃಢಪಟ್ಟಿರಲಿಲ್ಲ. ಇಂದು ಬೆಳಗ್ಗೆ ತನ್ನ ಮಗನೊಂದಿಗೆ ಗುಜರಾತ್​​ನ ಪ್ರದೇಶ ಕಾಂಗ್ರೆಸ್​ ಸಮಿತಿ ಕಚೇರಿಗೆ ಆಗಮಿಸಿದ ಅವರು, ಅಲ್ಲಿ ಕಾಂಗ್ರೆಸ್​​ಗೆ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತಿದ್ದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವ್ಯಾಸ್​ ‘ಗುಜರಾತ್​​ನಲ್ಲಿ ನರ್ಮದಾ ಸೇರಿ ಎಲ್ಲ ನೀರಾವರಿ ಯೋಜನೆಗಳೂ 1960ಕ್ಕೂ ಮೊದಲೇ ರೂಪುಗೊಂಡಿವೆ. ಎಲ್ಲವೂ ಕಾಂಗ್ರೆಸ್​​ನ ಯೋಜನೆಗಳೇ ಆಗಿವೆ’ ಎಂದು ಹೇಳಿದರು. ಬಿಜೆಪಿಯ ಯಾವುದೇ ನಾಯಕರ ಹೆಸರು ಹೇಳದೆ ಆಕ್ರೋಶ ವ್ಯಕ್ತಪಡಿಸಿದ ಅವರು ‘ಬಿಜೆಪಿಯಲ್ಲಿ ಎರಡು ಆಲದ ಮರಗಳು ಇವೆ. ಇನ್ಯಾವುದೇ ಮರಗಳು(ನಾಯಕರು) ಬೆಳೆಯಲೂ ಆ ಮರಗಳು ಅವಕಾಶ ಕೊಡುವುದಿಲ್ಲ. ಮೊದಲು ಒಂದು ಆಲದ ಮರ ದೊಡ್ಡದಾಗಿ ಬೆಳೆಯುತ್ತ ಹೋಯಿತು. ಅದಕ್ಕೆ ಇನ್ನೊಂದು ಆಲದ ಮರ ಸೇರಿತು. ಆ ಬೃಹತ್ ಆಲದ ಮರಗಳ ಕೆಳಗೆ ಇನ್ಯಾವುದೇ ಮರ-ಗಿಡಗಳೂ ಬೆಳೆಯುವುದಿಲ್ಲ. ಇಂಥ ನಾಯಕರು ಇರುವ ಬಿಜೆಪಿಯಿಂದ ಗುಜರಾತ್​ ಆಳಲ್ಪಟ್ಟರೆ, ಅದು ಈ ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ಇರುವುದಿಲ್ಲ’ ಎಂದು ಹೇಳಿದರು.

ಇದನ್ನೂ ಓದಿ: Gujarat Election | ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 125 ಸೀಟು: ಗೆಹ್ಲೋಟ್ ವಿಶ್ವಾಸ

Exit mobile version