Site icon Vistara News

ಕರೆನ್ಸಿ ನೋಟುಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಮುದ್ರಿಸಬೇಕು ಎಂದ ಬಿಜೆಪಿ ನಾಯಕ

Ram Kadam BJP Leader

ನವ ದೆಹಲಿ: ಭಾರತದ ನೋಟುಗಳ ಕರೆನ್ಸಿಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮುದ್ರಿಸಬೇಕು ಎಂದು ಬಿಜೆಪಿ ನಾಯಕ ರಾಮ್ ಕದಮ್​ ಆಗ್ರಹಿಸಿದ್ದಾರೆ. ಈಗ ನೋಟುಗಳ ಮೇಲೆ ಅವರ ಚಿತ್ರ ಮುದ್ರಿಸಬೇಕು, ಇವರ ಫೋಟೋ ಹಾಕಬೇಕು ಎಂದು ಒಬ್ಬೊಬ್ಬರೂ, ಒಂದೊಂದು ಬೇಡಿಕೆಯನ್ನು ಇಡುತ್ತಿದ್ದಾರೆ. ಭಾರತದ ಆರ್ಥಿಕತೆ ಸುಧಾರಣೆಯಾಗಬೇಕು, ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿಯುವುದು ತಪ್ಪಿಸಬೇಕು ಎಂದರೆ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಫೋಟೋದೊಂದಿಗೆ ಲಕ್ಷ್ಮೀ ದೇವಿ ಮತ್ತು ಗಣೇಶನ ಫೋಟೋ ಮುದ್ರಿಸಿ ಎಂದು ಅರವಿಂದ್ ಕೇಜ್ರಿವಾಲ್​ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು.

ಹೀಗೆ ಲಕ್ಷ್ಮೀ-ಗಣೇಶನ ಫೋಟೋ ಹಾಕಿ ಎಂದಿದ್ದ ಅರವಿಂದ್ ಕೇಜ್ರಿವಾಲ್​​ಗೆ ಮಹಾರಾಷ್ಟ್ರ ಬಿಜೆಪಿ ನಾಯಕ ನಿತೀಶ್ ರಾಣೆ ಪ್ರತ್ಯುತ್ತರ ಕೊಟ್ಟಿದ್ದರು. ಶಿವಾಜಿ ಚಿತ್ರ ಇರುವ ಒಂದು ನೋಟಿನ ಫೋಟೋ ಶೇರ್ ಮಾಡಿಕೊಂಡು, ಇದು ಪರ್ಫೆಕ್ಟ್​ ಎಂದಿದ್ದರು. ಈ ಮೂಲಕ ನೋಟಿನ ಮೇಲೆ ಶಿವಾಜಿ ಮಹಾರಾಜರ ಚಿತ್ರ ಹಾಕಬೇಕು ಎಂದು ಬೇಡಿಕೆ ಇಟ್ಟಿದ್ದರು.

ಇದೀಗ ಬಿಜೆಪಿ ನಾಯಕ ರಾಮ್ ಕದಮ್​ ಅವರು ಟ್ವಿಟರ್​ನಲ್ಲಿ 500 ರೂಪಾಯಿ ಮುಖಬೆಲೆಯ ನಾಲ್ಕು ನೋಟುಗಳ ಫೋಟೋ ಹಂಚಿಕೊಂಡಿದ್ದಾರೆ. ಅಂಬೇಡ್ಕರ್​, ನರೇಂದ್ರ ಮೋದಿ, ಶಿವಾಜಿ ಮಹಾರಾಜ ಮತ್ತು ವಿಡಿ ಸಾವರ್ಕರ್​ ಫೋಟೋಗಳಿರುವ ನೋಟುಗಳನ್ನು ಶೇರ್​ ಮಾಡಿಕೊಂಡು ನಯಾ ಭಾರತ್​, ಮಹಾನ್ ಭಾರತ್​, ಜೈ ಶ್ರೀರಾಮ್​, ಜೈ ಮಾತಾ ದಿ..’ ಎಂದು ಟ್ವೀಟ್ ಮಾಡಿದ್ದಾರೆ.

ಹಾಗೇ, ಯಾರ ಬೇಡಿಕೆಯೇ ಆಗಲಿ, ನ್ಯಾಯಸಮ್ಮತವಾಗಿದ್ದರೆ ದೇಶ ಅದನ್ನು ಒಪ್ಪಿಕೊಳ್ಳುತ್ತದೆ. ಆದರೆ ಅರವಿಂದ್​ ಕೇಜ್ರಿವಾಲ್​ನಂಥವರು ಚುನಾವಣೆ ವೇಳೆಯಲ್ಲಿ ಮಾತ್ರ ದೇವರನ್ನು ನೆನಪಿಸಿಕೊಳ್ಳುತ್ತಾರೆ ಎಂದಿದ್ದಾರೆ. ಹಾಗೇ, ನರೇಂದ್ರ ಮೋದಿ ಭಾವಚಿತ್ರ, ಶಿವಾಜಿ, ಅಂಬೇಡ್ಕರ್​, ಸಾವರ್ಕರ್​ ಫೋಟೋಗಳನ್ನು ನೋಟ್​ ಮೇಲೆ ಮುದ್ರಿಸಿದರೆ ಯಾರೂ ಆಕ್ಷೇಪಿಸಲಾರರು ಎಂದು ಹೇಳಿದ್ದಾರೆ.

ಇದನ್ನೂ ಓದಿ: Note Politics | ನೋಟಿನ ಮೇಲೆ ಲಕ್ಷ್ಮೀ, ಗಣೇಶ ಚಿತ್ರ, ಕೇಜ್ರಿವಾಲ್‌ ಹೇಳಿಕೆಗೆ ಬಿಜೆಪಿ ‘ಶಿವಾಜಿ ಫೋಟೊ’ ತಿರುಗೇಟು

Exit mobile version