Site icon Vistara News

ಬಿಜೆಪಿಯಿಂದ ಬಂದಿತ್ತು ಸಿಎಂ ಪೋಸ್ಟ್​ ಆಫರ್​, ಶಾಸಕರಿಗೆ 20 ಕೋಟಿ ಆಮಿಷ: ಮನೀಷ್​ ಸಿಸೋಡಿಯಾ ಆರೋಪ

Delhi Liquor Policy Case judicial custody of Manish Sisodia Extended

ನವ ದೆಹಲಿ: ನೂತನ ಅಬಕಾರಿ ನೀತಿ ಅಕ್ರಮ ಹಗರಣದ ಆರೋಪದಡಿ ಸಿಬಿಐ ತನಿಖೆ ಎದುರಿಸುತ್ತಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಇಂದು ಬಿಜೆಪಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ‘ಬಿಜೆಪಿ ಪಕ್ಷ ಆಮ್​ ಆದ್ಮಿ ಪಕ್ಷದ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಿದೆ. ನೀವು ಆಮ್​ ಆದ್ಮಿ ಪಕ್ಷ ತೊರೆದರೆ 20 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಆಸೆ ತೋರಿಸಿತ್ತು. ಅವರು ಒಪ್ಪದೆ ಇದ್ದುದಕ್ಕೇ ಇಡಿ, ಸಿಬಿಐ ಮೂಲಕ ದಾಳಿ ನಡೆಸುತ್ತಿದೆ. ತನಿಖಾ ಏಜೆನ್ಸಿಗಳ ಮೂಲಕ ಪಿತೂರಿ ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಟ್ವೀಟ್​ ಮಾಡಿರುವ ಮನೀಷ್​ ಸಿಸೋಡಿಯಾ ‘ಅವರು ನನ್ನ ಧ್ವನಿ ಅಡಗಿಸಲು ಪ್ರಯತ್ನ ಮಾಡುತ್ತಿದ್ದಾರೆ. 20-20 ಕೋಟಿ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ. ಅದಕ್ಕೆ ಒಪ್ಪದೆ ಇರುವವರಿಗೆ ಇಡಿ-ಸಿಬಿಐ ಹೆಸರು ಹೇಳಿ ಹೆದರಿಸುತ್ತಿದ್ದಾರೆ. ಒಟ್ಟಾರೆ ನಮ್ಮನ್ನು ಹತ್ತಿಕ್ಕಲು ಎಲ್ಲ ರೀತಿಯ ಪಿತೂರಿ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಇಂಥ ಚಟುವಟಿಕೆಗಳನ್ನು ನಡೆಸುವುದು ಸರಿಯಲ್ಲ. ನಾವು ಅರವಿಂದ್ ಕೇಜ್ರಿವಾಲ್ ಗಡಿಯಲ್ಲಿ ಪಳಗಿದವರು ಮತ್ತು ಭಗತ್​ ಸಿಂಗ್​ ಅನುಯಾಯಿಗಳು. ನಾವು ಜೀವ ಬಿಡುತ್ತೇವೆ ಹೊರತು, ನಂಬಿಕೆ ದ್ರೋಹ ಮಾಡುವುದಿಲ್ಲ. ನಮ್ಮ ಎದುರು ಇಡಿ, ಸಿಬಿಐಗಳೆಲ್ಲ ಕೆಲಸಕ್ಕೆ ಬರುವುದಿಲ್ಲ’ ಎಂದು ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅಲ್ಲಿನ ಶಿಕ್ಷಣ ಸಚಿವ, ಅಬಕಾರಿ ಇಲಾಖೆ ಉಸ್ತುವಾರಿ ಹೊತ್ತಿದ್ದ ಮನೀಷ್​ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ಪ್ರಾರಂಭವಾಗಿದೆ. ಅವರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಅಷ್ಟೇ ಅಲ್ಲ, ಸಿಬಿಐ ಎಫ್​ಐಆರ್​ನಲ್ಲಿ ಮನೀಷ್​ ಸಿಸೋಡಿಯಾರನ್ನೇ ಆರೋಪಿ ನಂಬರ್​ 1 ಎಂದು ಉಲ್ಲೇಖಿಸಲಾಗಿದೆ. ಇಷ್ಟೆಲ್ಲದರ ಮಧ್ಯೆ ಆಪ್​ ಸಂಸದ ಸಂಜಯ್​ ಸಿಂಗ್​ ಅವರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ‘ನಮ್ಮ ಆಪ್​ ಪಕ್ಷದ ನಾಲ್ವರು ಶಾಸಕರಿಗೆ ಬಿಜೆಪಿಯಿಂದ ತಲಾ 20 ಕೋಟಿ ರೂಪಾಯಿ ಆಫರ್​ ಬಂದಿದೆ. ಅವರನ್ನು ಬಿಜೆಪಿಗೆ ಸೇರುವಂತೆ ಒತ್ತಾಯಿಸಲಾಗಿದೆ. ಆದರೆ ಅವರು ಒಪ್ಪಲಿಲ್ಲ. ಯಾರು ಬಿಜೆಪಿಗೆ ಸೇರುತ್ತಾರೋ ಅವರಿಗೆ 20 ಕೋಟಿ ಕೊಡುತ್ತೇವೆ. ಜತೆಗೆ ಮತ್ತೊಬ್ಬರನ್ನು ಕರೆದುಕೊಂಡು ಬರುವವರಿಗೆ 25 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು’ ಎಂಬುದಾಗಿ ತಿಳಿಸಿದ್ದರು.

ಸುದ್ದಿಗೋಷ್ಠಿ ನಡೆಸಿದ್ದ ಸಂಜಯ್​ ಸಿಂಗ್​, ‘ನಮ್ಮ ಪಕ್ಷದ ಅಜಯ್​ ದತ್ತ, ಸಂಜೀವ್​ ಝಾ, ಸೋಮನಾಥ್​ ಭಾರತಿ, ಕುಲದೀಪ್​ ಅವರಿಗೆ ಬಿಜೆಪಿಯಿಂದ 20 ಕೋಟಿ ರೂಪಾಯಿ ಆಫರ್​ ಬಂದಿತ್ತು. ಬಿಜೆಪಿಯ ಪ್ರಮುಖ ನಾಯಕರೇ ಅವರನ್ನು ಭೇಟಿಯಾಗಿ ಆಮಿಷವೊಡ್ಡಿದ್ದರು’ ಎಂದೂ ಹೇಳಿದ್ದಾರೆ. ಅಷ್ಟೇ ಅಲ್ಲ, ‘ಮನೀಷ್​ ಸಿಸೋಡಿಯಾ ಕೂಡ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಆಪ್​ ಬಿಟ್ಟರೆ ನನಗೆ ಸಿಎಂ ಪೋಸ್ಟ್​ ಕೊಡುವುದಾಗಿ ಬಿಜೆಪಿ ನಾಯಕರು ಆಮಿಷವೊಡ್ಡಿದ್ದರು’ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Manish Sisodia | ಮನೀಷ್‌ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಅಸ್ಸಾಂ ಕೋರ್ಟ್‌ ಸಮನ್ಸ್

Exit mobile version