Site icon Vistara News

ಸಾರ್ವಜನಿಕ ಸಭೆ ಮಧ್ಯೆಯೇ ಕುರ್ತಾ ಬಿಚ್ಚಿ, ಬಾಟಲಿ ನೀರಿನಿಂದ ಮೈ ತೊಳೆದುಕೊಂಡ ಬಿಜೆಪಿ ಸಚಿವ; ತುರಿಕೆಯೇ ಕಾರಣ!

BJP Minister Removes Kurta Washes Himself In Madhya Pradesh

#image_title

ಭೋಪಾಲ್​: ಮಧ್ಯಪ್ರದೇಶದ ಬಿಜೆಪಿ ಸಚಿವ (Madhya Pradesh BJP Minitster)ರೊಬ್ಬರು ಸಾರ್ವಜನಿಕ ಸ್ಥಳದಲ್ಲಿ ತಮ್ಮ ಕುರ್ತಾವನ್ನು ತೆಗೆದು ಬಿಸಾಕಿ, ಬಾಟಲಿಯ ನೀರಿನಿಂದ ಮೈ ತೊಳೆದುಕೊಂಡ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವರಾಚಿ ಗ್ರಾಮದಲ್ಲಿ ನಡೆದಿದೆ. ಈ ವಿಡಿಯೊ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

ಬಿಜೆಪಿ ವಿಕಾಸ ರಥ ಯಾತ್ರೆ ನಿಮಿತ್ತ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅವರು ಅಶೋಕ ನಗರ ಜಿಲ್ಲೆಯಲ್ಲಿರುವ ತಮ್ಮ ವಿಧಾನಸಭಾ ಕ್ಷೇತ್ರ ಮುಂಗೋಲಿ ವ್ಯಾಪ್ತಿಯಲ್ಲಿರುವ ದೇವರಾಚಿ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸುತ್ತಿದ್ದರು. ಈ ವೇಳೆ ಯಾರೋ ಕಿಡಿಗೇಡಿಗಳು ಸಚಿವರ ಮೇಲೆ ಅದೇನೋ ಪೌಡರ್​ ಎಸೆದಿದ್ದಾರೆ. ಪುಡಿ ಮೈಮೇಲೆ ಬೀಳುತ್ತಿದ್ದಂತೆ ಸಚಿವರ ಮೈಯೆಲ್ಲ ತುರಿಕೆ ಬರಲು ಶುರುವಾಗಿದೆ. ಅದ್ಯಾವ ಪರಿ ತುರಿಕೆ ಉಂಟಾಯಿತು ಎಂದರೆ, ಸಚಿವರು ಕೂಡಲೇ ತಮ್ಮ ಕುರ್ತಾವನ್ನು ಬಿಚ್ಚಿ, ಕೈ, ಮೈ ತೊಳೆದುಕೊಂಡಿದ್ದಾರೆ.

ಇದನ್ನೂ ಓದಿ: Cow Urine Row | ʼಗೋಮೂತ್ರದಿಂದ ಬಾಯಿ ತೊಳೆಯಿರಿʼ, ವಿವಾದ ಸೃಷ್ಟಿಸಿದ ತ್ರಿಪುರ ಬಿಜೆಪಿ ಸಚಿವ ರತನ್‌ ಲಾಲ್‌ ನಾಥ್

ಬಿಜೆಪಿ ವಿಕಾಸ ಯಾತ್ರೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಫೆ.12ರಂದು ಚಾಲನೆ ಕೊಟ್ಟಿದ್ದು, ಫೆ.25ರವರೆಗೆ ರಾಜ್ಯದೆಲ್ಲೆಡೆ ನಡೆಯಲಿದೆ. ರಾಜ್ಯಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರ ಮಾಡುವ ಸಲುವಾಗಿ, ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಅರಿವು ಮೂಡಿಸುವ ಸಲುವಾಗಿ ಈ ಯಾತ್ರೆ ಹಮ್ಮಿಕೊಂಡಿದ್ದಾಗಿ ಪಕ್ಷ ಹೇಳಿದೆ.

Exit mobile version