Site icon Vistara News

‘ನಾವು ಎತ್ತಿನ ಹಾಲು ಹಿಂಡಿದ್ದೇವೆ’-ಗುಜರಾತ್​​ನಲ್ಲಿ ಆಪ್​ 5 ಸೀಟ್​ ಗೆದ್ದಿದ್ದನ್ನು ಹೀಗೆ ವಿಶ್ಲೇಷಿಸಿದ ಅರವಿಂದ್ ಕೇಜ್ರಿವಾಲ್​

Aravind Kejriwal and Karnataka Election

ನವ ದೆಹಲಿ: ಆಮ್​ ಆದ್ಮಿ ಪಕ್ಷ ಗುಜರಾತ್​​ ವಿಧಾನಸಭೆ ಚುನಾವಣೆಯಲ್ಲಿ ಶೇ.14ರಷ್ಟು ಮತಗಳಿಕೆ ಮೂಲಕ 5 ಸೀಟ್​​ ಗೆದ್ದಿದ್ದು ಸುಲಭದ ಮಾತಲ್ಲ ಎಂದು ಆಪ್​ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ. ಆದರೆ ಇದನ್ನವರು ವಿಚಿತ್ರವಾಗಿ ಪ್ರಸ್ತುತ ಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್​, ‘ಕಳೆದ ಒಂದು ವರ್ಷದಲ್ಲಿ ನಾವು ಪಂಜಾಬ್ ಗೆದ್ದೆವು. ದೆಹಲಿ ಮಹಾನಗರ ಪಾಲಿಕೆಯಲ್ಲಿ ನಮ್ಮ ಆಡಳಿತ ಬಂತು. ಗೋವಾದಲ್ಲಿ ಇಬ್ಬರು ಶಾಸಕರು ನಮ್ಮವರಿದ್ದಾರೆ. ಗುಜರಾತ್​​ನಲ್ಲಿ ಶೇ.14ರಷ್ಟು ಮತ ಗಳಿಕೆ ಮಾಡಿ, ಐದು ಕ್ಷೇತ್ರ ಗೆದ್ದುಕೊಂಡೆವು. ಆದರೆ ಈ ಗುಜರಾತ್​ನಲ್ಲಿ ಈ ಗೆಲುವು ಸುಲಭದ್ದಲ್ಲ. ನನ್ನ ಬಳಿ ಬಂದವರೊಬ್ಬರು, ಗುಜರಾತ್​​ನಲ್ಲಿ ನಾವು ಇಷ್ಟು ಸೀಟ್​ ಪಡೆದಿದ್ದನ್ನು ಉಲ್ಲೇಖಿಸಿ, ‘ಹಸುವಿನಿಂದ ಹಾಲನ್ನು ಯಾರು ಬೇಕಾದರೂ ಹಿಂಡುತ್ತಾರೆ. ಆದರೆ ನೀವು ಎತ್ತಿನ ಹಾಲು ಕರೆದಿರಿ’ ಎಂದು ಹೇಳಿದರು. ಇಲ್ಲಿ ಅರವಿಂದ್ ಕೇಜ್ರಿವಾಲ್​ ಅವರು, ಅಸಾಧ್ಯವಾಗಿದ್ದನ್ನು ನಾವು ಸಾಧ್ಯ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಹೀಗೆ ‘ಎತ್ತಿನ ಹಾಲು ಹಿಂಡಿದ’ ವಿಶೇಷಣ ಬಳಸಿದ್ದಾರೆ.

ಇನ್ನು ಇದೇ ವೇಳೆ ಅರವಿಂದ್ ಕೇಜ್ರಿವಾಲ್​ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಗಡಿಯಲ್ಲಿ ಚೀನಾ ಸೈನಿಕರು ಭಾರತದ ಯೋಧರ ಮೇಲೆ ಇಷ್ಟು ದಾಳಿ ನಡೆಸುತ್ತಿದ್ದಾರೆ. ಆ ದೇಶ ಕುತಂತ್ರ ಮಾಡುತ್ತಿದ್ದರೂ ಚೀನಾದ ವಸ್ತುಗಳನ್ನು ಯಾಕೆ ನಮ್ಮ ದೇಶದಲ್ಲಿ ಬಳಸಲಾಗುತ್ತಿದೆ? ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇಕೆ ಇದಕ್ಕೆ ಕಡಿವಾಣ ಹಾಕುತ್ತಿಲ್ಲ? ಎಂದು ಪ್ರಶ್ನಿಸಿದರು. ಹಾಗೇ, ಇಡೀ ದೇಶದಲ್ಲಿ ಪ್ರಾಮಾಣಿಕವಾಗಿ ಇರುವುದು ಆಪ್​ ಪಕ್ಷ ಮಾತ್ರ. ಅದು ಜನರಿಗೂ ಗೊತ್ತಿದೆ. ಉಳಿದಂತೆ ಒಂದು ರಾಷ್ಟ್ರೀಯ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಇನ್ನೊಂದು ಪಕ್ಷ ಗೂಂಡಾ ಸಂಸ್ಕೃತಿ ಉತ್ತೇಜಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Bhagwant Marriage: ಪಂಜಾಬ್‌ ಸಿಎಂ ಮಾನ್‌ ಮದುವೆ ಸಂಭ್ರಮ, ಅರವಿಂದ್‌ ಕೇಜ್ರಿವಾಲ್‌ ಸಹಿತ ಹಲವರು ಭಾಗಿ

Exit mobile version