ಕೋಲ್ಕತ್ತ: ಶ್ರೀರಾಮನವಮಿ ದಿನದಂದು ಪಶ್ಚಿಮ ಬಂಗಾಳದಲ್ಲಿ ನಡೆದ ಕೋಮು ಹಿಂಸಾಚಾರ (West Bengal Ram Navami Violence) ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA Probe)ಕ್ಕೆ ವಹಿಸಿ, ಕೋಲ್ಕತ್ತ ಹೈಕೋರ್ಟ್ ಇಂದು ತೀರ್ಪು ನೀಡಿದೆ. ಇದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತೀವ್ರ ಹಿನ್ನಡೆ. ಮಾರ್ಚ್ 30ರಂದು ಶ್ರೀರಾಮನವಿ ದಿನ ಪಶ್ಚಿಮ ಬಂಗಾಳದ ಹೌರಾ ಮತ್ತು ಹೂಗ್ಲಿಯಲ್ಲಿ ದೊಡ್ಡಮಟ್ಟದ ಕೋಮುಗಲಭೆಯಾಗಿತ್ತು. ಹಿಂದುಗಳು ರಾಮನವಮಿ ನಿಮಿತ್ತ ಆಯೋಜಿಸಿದ್ದ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲು ತೂರಿದ್ದರು. ಈ ಗಲಾಟೆ ಮಿತಿಮೀರಿ ಹಿಂಸಾಚಾರಕ್ಕೆ ತಿರುಗಿತ್ತು. ಅಂಗಡಿ-ಮುಂಗಟ್ಟುಗಳು, ವಾಹನಗಳಿಗೆಲ್ಲ ಬೆಂಕಿಯಿಡಲಾಗಿತ್ತು.
ಹೌರಾ ಮತ್ತು ಹೂಗ್ಲಿ ಹಿಂಸಾಚಾರದ ತನಿಖೆಯನ್ನು ಎನ್ಐಗೆ ವಹಿಸುವಂತೆ ಮನವಿ ಮಾಡಿ, ಪಶ್ಚಿಮ ಬಂಗಾಳ ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಅವರು ಪ್ರಧಾನಿ ಮೋದಿಗೆ ಪತ್ರವನ್ನೂ ಬರೆದಿದ್ದರು. ಇನ್ನೊಂದೆಡೆ ಸಿಎಂ ಮಮತಾ ಬ್ಯಾನರ್ಜಿಯವರು ಘಟನೆಯನ್ನು ಹಗುರವಾಗಿ ತೆಗೆದುಕೊಂಡಿದ್ದರು. ಮುಸ್ಲಿಮರ ಪ್ರಾಬಲ್ಯ ಇರುವಲ್ಲಿ, ಹಿಂದುಗಳೇಕೆ ಮೆರವಣಿಗೆ ನಡೆಸಬೇಕು ಎಂದು ಪ್ರಶ್ನಿಸಿದ್ದರು. ಅವರ ಈ ಮಾತುಗಳು ಆಕ್ರೋಶಕ್ಕೆ ಕಾರಣವಾಗಿದ್ದವು.
ಹೀಗೆ ಶ್ರೀರಾಮನವಮಿ ದಿನದಂದು ಹೌರಾ ಮತ್ತು ಹೂಗ್ಲಿ ಹಿಂಸಾಚಾರವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲು ಆಗ್ರಹಿಸಿ ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಆಡಳಿತ ನೀತಿಯನ್ನೂ ಅವರು ಪ್ರಶ್ನಿಸಿದ್ದರು. ಆದರೆ ಕೇಂದ್ರ ತನಿಖಾ ದಳಗಳ ಹಸ್ತಕ್ಷೇಪವನ್ನು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಇತರ ನಾಯಕರು ವಿರೋಧಿಸಿದ್ದರು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋಲ್ಕತ್ ಹೈಕೋರ್ಟ್ ಇಂದು ಅಂತಿಮ ತೀರ್ಪು ನೀಡಿದೆ.
ಘಟನೆಗೆ ಸಂಬಂಧಪಟ್ಟಂತೆ ಸಮಗ್ರ ತನಿಖೆ ನಡೆಸಲು ಹೈಕೋರ್ಟ್ನಿಂದ ಒಂದು ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ಅದರ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ಎಲ್.ನರಸಿಂಹ ರೆಡ್ಡಿ ವಹಿಸಿದ್ದರು. ಈ ಸಮಿತಿ ಕೋರ್ಟ್ಗೆ ಒಂದು ಮಧ್ಯಂತರ ವರದಿಯನ್ನು ಇತ್ತೀಚೆಗೆ ನೀಡಿತ್ತು. ಶ್ರೀರಾಮನವಮಿ ದಿನದಂದು ಹೌರಾ, ಹೂಗ್ಲಿ, ರಿಶ್ರಾ ಮತ್ತು ಇತರ ಪ್ರದೇಶಗಳಲ್ಲಿ ನಡೆದ ಹಿಂಸಾಚಾರ ಪೂರ್ವನಿಯೋಜಿತ ಎಂದು ಆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿತ್ತು.