Site icon Vistara News

ಸರ್ಕಾರದ ಯೋಜನಾ ಭವನದ ನೆಲಮಾಳಿಗೆಯಲ್ಲಿ ಕಂತೆ ಹಣ, ಕೆಜಿ ಚಿನ್ನ; ಫೈಲ್​ಗಾಗಿ ಕಪಾಟು ಒಡೆದರೆ ಸಿಕ್ಕಿದ್ದು ಈ ಬ್ಯಾಗ್​​

Cash and Gold found in Yojana Bhawan Of Rajasthan

#image_title

ರಾಜಸ್ಥಾನ ರಾಜ್ಯ ಸರ್ಕಾರದ (Rajasthan Government) ಯೋಜನಾ ಭವನದಲ್ಲಿ ಅಪಾರ ಪ್ರಮಾಣದ ನಗದು-ಬಂಗಾರ ಸಿಕ್ಕಿದ್ದು ಈಗ ಕುತೂಹಲ ಹುಟ್ಟಿಸಿದೆ. ಜೈಪುರದಲ್ಲಿರುವ ಯೋಜನಾ ಭವನದ ನೆಲಮಾಳಿಗೆಯಲ್ಲಿರುವ ಒಂದು ಲಾಕ್​ ಆದ ಕಪಾಟಿನಲ್ಲಿ 2.31 ಕೋಟಿ ರೂಪಾಯಿ ನಗದು ಮತ್ತು ಒಂದು ಕೆಜಿ ಚಿನ್ನದ ಬಿಸ್ಕಿಟ್​​ಗಳು ಪತ್ತೆಯಾಗಿವೆ. ರಾಜಸ್ಥಾನ ಯೋಜನಾ ಆಯೋಗಕ್ಕೆ ಸೇರಿದ ಈ ಭವನ ಅಲ್ಲಿನ ಸರ್ಕಾರಿ ಸಚಿವಾಲಯದ ಸಮೀಪವೇ ಇದೆ. ಇದೀಗ ಸಿಕ್ಕಿರುವ ನಗದಿನಲ್ಲಿ ಬಹುತೇಕ 2000 ರೂ. ಮತ್ತು 500 ರೂಪಾಯಿ ನೋಟುಗಳೇ ಇವೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ರಾಜಸ್ಥಾನ ಅಧಿಕಾರಶಾಹಿ ವರ್ಗದಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿದೆ.

ರಾಜಸ್ಥಾನ ಯೋಜನಾ ಭವನದಲ್ಲಿ ಅಪಾರ ಮೊತ್ತದ ನಗದು, ಬಂಗಾರ ಪತ್ತೆಯಾದ ಬೆನ್ನಲ್ಲೇ ಅಲ್ಲಿನ ಸಿಎಸ್​ (ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ) ಉಶಾ ಶರ್ಮಾ, ಡಿಜಿಪಿ ಉಮೇಶ್ ಮಿಶ್ರಾ ಮತ್ತು ಜೈಪುರ ಪೊಲೀಸ್ ಆಯುಕ್ತ ಆನಂದ್ ಶ್ರೀವಾತ್ಸವ್ ಅವರು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಈ ಮಧ್ಯೆ ರಾಜಸ್ಥಾನದ ಪ್ರತಿಪಕ್ಷವಾದ ಬಿಜೆಪಿ ನಾಯಕರು ಕಾಂಗ್ರೆಸ್​ ನಾಯಕರನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ. 2000 ರೂಪಾಯಿ ನೋಟುಗಳನ್ನು ಆರ್​ಬಿಐ ಹಿಂಪಡೆದ ಬೆನ್ನಲ್ಲೇ, ರಾಜಸ್ಥಾನ ಯೋಜನಾ ಭವನದಲ್ಲಿ ಈ ನಗದು, ಚಿನ್ನ ಸಿಕ್ಕಿದೆ.

ಶೋಧ ಮಾಡಿದ್ದೇಕೆ?
ಯೋಜನಾ ಭವನವನ್ನು ಶೋಧ ಮಾಡಬೇಕು ಎಂದು ಪೊಲೀಸರು ಅಲ್ಲೇನೂ ಹೋಗಿರಲಿಲ್ಲ. ಅಲ್ಲಿನ ಹಳೇಹಳೇ ಫೈಲ್​​ಗಳನ್ನು ಗಣಕೀಕೃತಗೊಳಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಯೋಜನಾ ಭವನದ ನೆಲಮಾಳಿಗೆಯಲ್ಲಿರುವ ಎರಡು ಬೀರುಗಳ ಲಾಕ್ ಓಪನ್ ಮಾಡಲು ಕೀ ಕಾಣಿಸಿರಲಿಲ್ಲ. ಎಷ್ಟು ಹುಡುಕಿದರೂ ಕೀ ಕಾಣದೆ ಇದ್ದಾಗ ಆ ಬೀರುಗಳನ್ನು ಒಡೆಯಲಾಗಿದೆ. ಒಂದು ಕಪಾಟಿನಲ್ಲಿ ಫೈಲ್​​ಗಳು ಸಿಕ್ಕಿವೆ. ಆದರೆ ಮತ್ತೊಂದು ಕಪಾಟಿನಲ್ಲಿ ಒಂದು ಬ್ಯಾಗ್ ಮತ್ತು ಲ್ಯಾಪ್​ಟಾಪ್ ಪತ್ತೆಯಾಗಿದೆ. ಬ್ಯಾಗ್​​ನಲ್ಲಿ ಫೈಲ್​​ಗಳು ಇರಬಹುದು ಎಂದು ತೆರೆದಾಗ ಈ ನಗದು ಮತ್ತು ಚಿನ್ನದ ಬಿಸ್ಕಿಟ್​​ಗಳು ಸಿಕ್ಕಿವೆ. ಅದನ್ನು ನೋಡುತ್ತಿದ್ದಂತೆ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಅಧಿಕಾರಿ ಮಹೇಶ್ ಗುಪ್ತಾ ಎಂಬುವವರು ತಮ್ಮ ಮೇಲಧಿಕಾರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಅಲ್ಲಿಗೆ ಹೋಗಿ ನಗದು, ಚಿನ್ನದ ಬಿಸ್ಕಿಟ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಎಂ ಅಶೋಕ್​ ಗೆಹ್ಲೋಟ್​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Rajasthan Budget: ವಿಧಾನಸಭೆಯಲ್ಲಿ ಹಳೇ ಬಜೆಟ್​ ಓದಿ ಎಡವಟ್ಟು ಮಾಡಿಕೊಂಡ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​!

ಈ ಚಿನ್ನ-ಹಣದ ಹೊಣೆಯನ್ನು ಯಾರೊಬ್ಬರೂ ಹೊರಲು ಸಿದ್ಧರಿರಲಿಲ್ಲ. ಹೀಗಾಗಿ ಅಧಿಕೃತ ತನಿಖೆ ಶುರುವಾಗಿದ್ದು ಪೊಲೀಸ್ ವಿಶೇಷ ತಂಡ ರಚನೆಗೊಂಡಿದೆ. 7-8 ಶಂಕಿತರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲಿನ ಸಿಸಿಟಿವಿ ಫೂಟೇಜ್​​ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version