Site icon Vistara News

Excise policy | ಮನೀಷ್​ ಸಿಸೋಡಿಯಾ ವಿರುದ್ಧ ಕೇಸ್​ ದಾಖಲಿಸುವ ಮುನ್ನ ರಾಷ್ಟ್ರಪತಿ ಅನುಮೋದನೆ ಪಡೆದ ಸಿಬಿಐ

Manish Sisodia

ನವ ದೆಹಲಿ: ಅಬಕಾರಿ ನೀತಿ ಅಕ್ರಮದಡಿ ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ವಿರುದ್ಧ ಎಫ್​ಐಆರ್​ ದಾಖಲು ಮಾಡುವುದಕ್ಕೂ ಮುನ್ನ ಸಿಬಿಐ (ಕೇಂದ್ರೀಯ ತನಿಖಾ ದಳ) ರಾಷ್ಟ್ರಪತಿಯವರಿಂದ ಪೂರ್ವಾನುಮತಿ ಪಡೆದಿದೆ ಎಂದು ಮೂಲಗಳು ಹೇಳಿವೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್​ 17 ಎ ಅನ್ವಯ, ಕೇಂದ್ರಾಡಳಿತ ಪ್ರದೇಶಗಳಲ್ಲಿನ ಯಾವುದೇ ಶಾಸಕ/ಸಂಸದರನ್ನು ತನಿಖೆಗೆ ಒಳಪಡಿಸಬೇಕು ಎಂದರೆ ರಾಷ್ಟ್ರಪತಿ ಅನುಮತಿ ಕಡ್ಡಾಯ. ಅದನ್ನು ಸಿಬಿಐ ಪಾಲಿಸಿದೆ ಎಂದು ಹೇಳಲಾಗಿದೆ. ಹಾಗೇ, ಸಿಸೋಡಿಯಾ ಮತ್ತು ಇತರ 13 ಮಂದಿಯ ವಿರುದ್ಧ ಲುಕೌಟ್​ ನೋಟಿಸ್​ ಕೂಡ ಹೊರಡಿಸಲಾಗಿದೆ. (ಯಾರ ವಿರುದ್ಧ ಲುಕೌಟ್​ ನೋಟಿಸ್​ ಜಾರಿಯಾಗಿರುತ್ತದೆಯೋ ಅವರು ಪೊಲೀಸರಿಗೆ ಬೇಕಾದವರು ಎಂದರ್ಥ. ಯಾವುದೇ ಕೇಸ್​​ನಡಿ ವಿಚಾರಣೆಗೆ ಒಳಪಟ್ಟವರು ಹೇಳದೆ-ಕೇಳದೆ ವಿದೇಶಗಳಿಗೆ ಪ್ರಯಣಿಸಲು ಪ್ರಯತ್ನಿಸಿದರೆ, ಈ ಲುಕೌಟ್​ ಮೂಲಕ ಪತ್ತೆಹಚ್ಚಬಹುದು).

ದೆಹಲಿಯಲ್ಲಿ 2021ರಲ್ಲಿ ಜಾರಿಗೊಳಿದ್ದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಅಲ್ಲಿನ ಲೆಫ್ಟಿನೆಂಟ್​ ಗವರ್ನರ್​ ಧ್ವನಿ ಎತ್ತಿದ್ದರು. ಅದನ್ನೀಗ ಸಿಬಿಐ ತನಿಖೆಗೆ ವಹಿಸಲಾಗಿದೆ. ನೂತನ ಅಬಕಾರಿ ನೀತಿಯಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಪರವಾನಗಿ ನೀಡುವಾಗ ಅವರಿಗೆ ಹಲವು ಅನುಕೂಲಗಳನ್ನು ಕಾನೂನು ಬಾಹಿರವಾಗಿ ಮಾಡಿಕೊಡಲಾಗಿದೆ. ಮದ್ಯದ ವ್ಯಾಪಾರಿ, ಇಂಡೋಸ್ಪಿರಿಟ್​​ ಮಾಲೀ ಸಮೀರ್​ ಮಹೇಂದ್ರು ಎಂಬುವರು ಈ ನೂತನ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದಲ್ಲಿ ಆಳವಾದ ಹಸ್ತಕ್ಷೇಪ ಮಾಡಿದ್ದಾರೆ. ತಮಗೆ ಬೇಕಾದಂತೆ ಮದ್ಯದ ನೀತಿ ರೂಪಿಸಿಕೊಳ್ಳಲು ಮನೀಷ್​ ಸಿಸೋಡಿಯಾಗೆ ಹಣ ಸಂದಾಯ ಮಾಡಿದ್ದಾರೆ. ಸಿಸೋಡಿಯಾ ಆಪ್ತರಿಗೆ ಕೋಟಿ ಲೆಕ್ಕಾಚಾರದಲ್ಲಿ ಎರಡು ಬಾರಿ ಹಣ ಪಾವತಿಯಾಗಿದೆ ಎಂದು ಸಿಬಿಐ ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: Excise Policy Case | 2024ರ ಚುನಾವಣೆಯಲ್ಲಿ ಆಪ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಎಂದ ಮನೀಷ್‌ ಸಿಸೋಡಿಯಾ

Exit mobile version