Site icon Vistara News

ಅನುಬ್ರತಾ ಮಂಡಲ್​​ ಕೇಸ್​ ವಿಚಾರಣೆ ನಡೆಸುತ್ತಿರುವ ಸಿಬಿಐ ಜಡ್ಜ್​​ಗೆ ಬೆದರಿಕೆ; ಎನ್​ಡಿಪಿಎಸ್ ಉಲ್ಲೇಖಿಸಿ ಎಚ್ಚರಿಕೆ

Anubrata Mondal

ಕೋಲ್ಕತ್ತ: ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶಕ್ಕೆ ಹಸುಗಳ ಕಳ್ಳ ಸಾಗಣೆ ಪ್ರಕರಣದಡಿ ಸಿಬಿಐನಿಂದ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮಂಡಲ್​ ಕೇಸ್​ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರುತ್ತಿವೆಯಂತೆ !

ಅನುಬ್ರತಾ ಮಂಡಲ್​ ಕೇಸ್​ನ್ನು ಅಸಾನ್ಸೋಲ್​​ನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಕೇಶ್​ ಚಕ್ರವರ್ತಿ ಎಂಬುವರು ವಿಚಾರಣೆ ನಡೆಸುತ್ತಿದ್ದು, ತಮಗೆ ಬೆದರಿಕೆ ಪತ್ರ ಬರುತ್ತಿರುವುದುದಾಗಿ ಅವರೇ ಹೇಳಿಕೊಂಡಿದ್ದಾರೆ. ‘ಬಪ್ಪಾ ಚಟರ್ಜಿ ಎಂಬುವರ ಹೆಸರಿನಿಂದ ಬೆದರಿಕೆ ಪತ್ರ ಬಂದಿದೆ. ಆತನೂ ತಾನೊಬ್ಬ ಟಿಎಂಸಿ ನಾಯಕ ಎಂದೇ ಹೇಳಿಕೊಂಡಿದ್ದಾನೆ. ಅನುಬ್ರತಾ ಮಂಡಲ್​​ರನ್ನು ಬಿಡುಗಡೆ ಮಾಡದೆ ಇದ್ದರೆ, ನಿಮ್ಮಿಡೀ ಕುಟುಂಬದ ವಿರುದ್ಧ ಎನ್​ಡಿಪಿಎಸ್ (Narcotic Drugs and Psychotropic Substances Act-ಮಾದಕ ದ್ರವ್ಯಗಳು ಮತ್ತು ಅಮಲು ವಸ್ತುಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಸುಳ್ಳು ಕೇಸ್​ ದಾಖಲಿಸಿ, ಜೈಲಿಗೆ ಕಳಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಹಾಗೇ, ದೂರು ಕೂಡ ಕೊಟ್ಟಿದ್ದಾರೆ. ತಮಗೆ ಬಂದ ಬೆದರಿಕೆ ಪತ್ರವನ್ನೂ ದೂರಿನೊಂದಿಗೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಈ ಕೇಸ್​​ನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಕೋಲ್ಕತ್ತ ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ.

ಬಿಜೆಪಿ ಖಂಡನೆ
ಅನುಬ್ರತಾ ಮಂಡಲ್​ರನ್ನು ಬಿಡುಗಡೆ ಮಾಡುವಂತೆ ತಮಗೆ ಬೆದರಿಕೆ ಬರುತ್ತಿರುವುದಾಗಿ ಅಸಾನ್ಸೋಲ್​ ಸಿಬಿಐ ಕೋರ್ಟ್​ ನ್ಯಾಯಾಧೀಶ ರಾಕೇಶ್​ ಚರ್ಕವರ್ತಿ ದೂರು ನೀಡಿದ ಬೆನ್ನಲ್ಲೇ, ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳ್ವಿಯಾ ಟ್ವೀಟ್ ಮಾಡಿ ‘ಕ್ರಿಮಿನಲ್​ ಅನುಬ್ರತಾ ಮಂಡಲ್​ ಬಿಡುಗಡೆ ಮಾಡುವಂತೆ ನ್ಯಾಯಾಧೀಶರಿಗೇ ಬೆದರಿಕೆ ಹಾಕಲಾಗಿದೆ. ಸಿಬಿಐ ಕೋರ್ಟ್​ ನ್ಯಾಯಾಧೀಶರು ಈ ಬಗ್ಗೆ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್​ ಎರಡಕ್ಕೂ ಪತ್ರ ಬರೆದಿದ್ದಾರೆ. ಇಷ್ಟೆಲ್ಲ ಆದರೂ ಸಿಎಂ ಮಮತಾ ಬ್ಯಾನರ್ಜಿ ತನ್ನ ಆಪ್ತನನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ’ ಎಂದು ಆರೋಪ ಮಾಡಿದ್ದಾರೆ.

ಅನುಬ್ರತಾ ಮಂಡಲ್​ ಮಮತಾ ಬ್ಯಾನರ್ಜಿಯ ಅತ್ಯಾಪ್ತರಾಗಿದ್ದರು. ಬೀರ್​ಭೂಮ್​​​ ಜಿಲ್ಲೆಯ ಅತ್ಯಂತ ಪ್ರಭಾವಿ ನಾಯಕ. ವಿವಾದಕ್ಕೆ ಪರ್ಯಾಯ ಎಂಬಂತೆ ಬದುಕಿದವರು. 2013ರ ಪಂಚಾಯತ್​ ಚುನಾವಣೆಯ ವೇಳೆ ಮಂಡಲ್​ ತಮ್ಮ ಕಾರ್ಯಕರ್ತರಿಗೆ ವಿಚಿತ್ರ ಆದೇಶ ಕೊಟ್ಟು ಸುದ್ದಿಯಾಗಿದ್ದರು. ಚುನಾವಣೆಯ ಸ್ವತಂತ್ರ ಅಭ್ಯರ್ಥಿಗಳ ಮನೆ ಮೇಲೆ ಮುಲಾಜಿಲ್ಲದೆ ಬಾಂಬ್​ ಹಾಕಿ ಎಂದು ಸೂಚಿಸಿದ್ದರು. ಅದೇ ಕೆಲಸವನ್ನೇ ಟಿಎಂಸಿ ಕಾರ್ಯಕರ್ತರು ಮಾಡಿ, ವ್ಯಕ್ತಿಯೊಬ್ಬರ ಜೀವ ಹೋಗಿತ್ತು. ಚುನಾವಣೆ ಸಂದರ್ಭ ಬಂತು ಎಂದರೆ ಸಾಕು ಈ ವ್ಯಕ್ತಿಯ ಮೇಲೆ ಕಣ್ಣಿಡುವುದೇ ಒಂದು ಕೆಲಸವಾಯಿತು. ಟಿಎಂಸಿ ವಿರೋಧಿಸುವವರ ಮನೆ ಮೇಲೆ ರಾತ್ರಿ ದಾಳಿ ಮಾಡಿಸುವುದು, ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಹಠದಿಂದ ಗಲಭೆ ಎಬ್ಬಿಸುವುದೇ ಇವರ ಕಾಯಕವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಮಂಡಲ್​ ದಾಂಧಲೆ ಎಬ್ಬಿಸದಂತೆ ಕಣ್ಣಿಡುವ ಸಲುವಾಗಿಯೇ ನ್ಯಾಯಾಲಯ, ವಿಶೇಷ ಅಧಿಕಾರಿಗಳನ್ನು ನೇಮಕ ಕೂಡ ಮಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, 2021ರ ವಿಧಾನಸಭೆ ಚುನಾವಣೆ ವೇಳೆ, ಮಮತಾ ಬ್ಯಾನರ್ಜಿಯವರ khela hobe (ಆಟ ಶುರುವಾಗಿದೆ-The game is On) ಎಂಬ ಘೋಷಣೆಯನ್ನು ಅತ್ಯಂತ ಜನಪ್ರಿಯಗೊಳಿಸಿದವರು ಇವರು.

ಇದನ್ನೂ ಓದಿ: Bengal Coal Scam Case | ಮಮತಾ ನಾಡಿಗೆ ತನಿಖಾ ದಳಗಳ ಲಗ್ಗೆ; 8 ಐಪಿಎಸ್​ ಅಧಿಕಾರಿಗಳಿಗೆ ಇಡಿ ಸಮನ್ಸ್​​

Exit mobile version