Site icon Vistara News

ಮಣಿಪುರ ಸಿಎಂ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು; ಉದ್ವಿಗ್ನತೆ

Violence again in Manipur; army, paramilitary forces deployed

ಮಣಿಪುರದ ಚುರಚಾಂದ್​​ಪುರ ಜಿಲ್ಲೆಯಲ್ಲಿ ಮುಖ್ಯಮಂತ್ರಿ (Manipur Chief Minister) ಎನ್​.ಬಿರೆನ್​ ಸಿಂಗ್​ ಅವರ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಕಾರಣ, ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಚುರಚಾಂದ್​ಪುರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಹಾಗೇ, ಇಂಟರ್​​ನೆಟ್​ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಮಣಿಪುರ ರಾಜ್ಯಾದ್ಯಾಂತ ಕಳೆದ ಎರಡು ಮೂರು ತಿಂಗಳಿಂದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತೀಕ್ಷ್ಣವಾಗಿ ನಡೆಸಲಾಗುತ್ತಿದೆ. ಸರ್ಕಾರಿ ಭೂಮಿಯನ್ನು, ಮೀಸಲು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರು ಕಟ್ಟಿಕೊಂಡ ಮನೆ, ಇನ್ನಿತರ ಕಟ್ಟಡಗಳು, ನಿರ್ಮಿಸಲಾದ ತೋಟಗಳನ್ನೆಲ್ಲ ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತಿದೆ. ಸರ್ಕಾರದ ಈ ಕ್ರಮವನ್ನು ವಿರೋಧಿಸಿ ರಾಜ್ಯದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಈಗ ರಾಜ್ಯ ಸರ್ಕಾರವು ಧಾರ್ಮಿಕ ಸ್ಥಳವಾದ ಚರ್ಚ್​​ನ್ನೂ ಕೂಡ ಕೆಡವಿದೆ ಎಂದು ಆರೋಪಿಸಿ ಸ್ಥಳೀಯಬುಡಕಟ್ಟು ನಾಯಕರ ವೇದಿಕೆ ನೇತೃತ್ವದಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ತೀವ್ರ ಸ್ವರೂಪ ತಳೆದಿದೆ.

ಚುರಚಾಂದ್​​ಪುರ ಜಿಲ್ಲೆಯ ನ್ಯೂ ಲಮ್ಕಾ ಏರಿಯಾದಲ್ಲಿ ಇಂದು ಕಾರ್ಯಕ್ರಮ ಇತ್ತು. ಮುಖ್ಯಮಂತ್ರಿ ಬಿರೆನ್​ ಸಿಂಗ್​ ಅವರು ಪಾಲ್ಗೊಳ್ಳಲಿದ್ದರು. ಆದರೆ ಮುನ್ನಾದಿನ ರಾತ್ರಿ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಅಲ್ಲಿ ಹಾಕಿದ್ದ ಪೆಂಡಾಲ್​​, ಇಟ್ಟಿದ್ದ ಸುಮಾರು 100 ಕುರ್ಚಿಗಳು ಬೆಂಕಿಗೆ ಆಹುತಿ ಆಗಿವೆ. ಅಷ್ಟೇ ಅಲ್ಲ, ನ್ಯೂ ಲಮ್ಕಾದ ಪಿಟಿ ಸ್ಪೋರ್ಟ್ಸ್​ ಸಂಕೀರ್ಣದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಜಿಮ್​​ ಕೇಂದ್ರಕ್ಕೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಆ ಜಿಮ್​ ಕೇಂದ್ರ ಭಾಗಶಃ ಸುಟ್ಟು ಬೂದಿಯಾಗಿದೆ. ಇಂದು ಮುಖ್ಯಮಂತ್ರಿ ಈ ಜಿಮ್​​ನ್ನು ಕೂಡ ಉದ್ಘಾಟನೆ ಮಾಡಲಿದ್ದರು. ಅದಾದ ಮೇಲೆ ಸದ್ಭಾವನಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರದಲ್ಲೂ ಅವರು ಪಾಲ್ಗೊಳ್ಳಬೇಕಿತ್ತು. ಸದ್ಯ ಸಿಎಂ ಕಾರ್ಯಕ್ರಮ ರದ್ದಾಗಿದೆ.

ಇದನ್ನೂ ಓದಿ: Ballari News: ಮುಷ್ಟಗಟ್ಟೆಯಲ್ಲಿ ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳದ ಬೆಳೆ ಭಸ್ಮ

ಸರ್ಕಾರ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತ ಬಂದಿರುವ ಬುಡಕಟ್ಟು ನಾಯಕರ ವೇದಿಕೆ, ಚುರಚಾಂದ್​ಪುರಕ್ಕೆ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಬಳಿಕ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿತ್ತು. ಏಪ್ರಿಲ್​ 27ರಂದು ಬೆಳಗ್ಗೆ 8ಗಂಟೆಯಿಂದ ಸಂಜೆ 4ಗಂಟೆವರೆಗೆ ಜಿಲ್ಲೆಯಾದ್ಯಂತ್ ಬಂದ್​ಗೆ ಕರೆ ನೀಡಿತ್ತು. ‘ರಾಜ್ಯಸರ್ಕಾರವು ಮೀಸಲು ಅರಣ್ಯ ಪ್ರದೇಶವನ್ನು ಸರಿಯಾಗಿ ಗುರುತಿಸದೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಇದರಿಂದ ಸಂತ್ರಸ್ತರಾಗುವ ರೈತರು ಮತ್ತು ಬುಡಕಟ್ಟು ಜನಾಂಗದವರಿಗೆ ಏನೂ ಪರಿಹಾರ ನೀಡುವ ಯೋಚನೆ ಮಾಡುತ್ತಿಲ್ಲ’ ಎಂದು ಬುಡಕಟ್ಟು ನಾಯಕರ ವೇದಿಕೆ ಆರೋಪಿಸಿದೆ. ಮಾರ್ಚ್​ ತಿಂಗಳಲ್ಲಿ ಕೂಡ ಇವರು ಪ್ರತಿಭಟನೆ ನಡೆಸಿದ್ದರು.

Exit mobile version