Site icon Vistara News

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ; ಟಿಎಂಸಿ ಕಚೇರಿಗಳಿಗೆ ಬೆಂಕಿ ಹಚ್ಚಿದ ಐಎಸ್​ಎಫ್​ ಕಾರ್ಯಕರ್ತರು, ಪೊಲೀಸರ ಮೇಲೂ ಹಲ್ಲೆ

Clash breaks Outs Between ISF And Police In Kolkata

ಕೋಲ್ಕತ್ತದಲ್ಲಿ ನಡೆದ ಹಿಂಸಾಚಾರದ ದೃಶ್ಯ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಳೆದ ವರ್ಷವಷ್ಟೇ ಅಸ್ತಿತ್ವಕ್ಕೆ ಬಂದಿರುವ ಇಂಡಿಯನ್​ ಸೆಕ್ಯೂಲರ್​ ಫ್ರಂಟ್​ (ISF) ಪಕ್ಷದ ಕಾರ್ಯಕರ್ತರು ಮತ್ತು ಅಲ್ಲಿನ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (TMC)​ ಕಾರ್ಯಕರ್ತರ ನಡುವೆ ಮಾರಾಮಾರಿ ಉಂಟಾದ ಬೆನ್ನಲ್ಲೇ, ಐಎಸ್​ಎಫ್​ ಸದಸ್ಯರು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ಸಂಘರ್ಷದಲ್ಲಿ ಸುಮಾರು 19 ಪೊಲೀಸರು ಗಾಯಗೊಂಡಿದ್ದು, ಐಎಸ್​ಎಫ್​​ನ 17ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಜನವರಿ 21ರಂದು ಪೂರ್ವ ಕೋಲ್ಕತ್ತದ ಭಂಗೋರೆ ಎಂಬಲ್ಲಿ ಇಂಡಿಯನ್​ ಸೆಕ್ಯೂಲರ್​ ಫ್ರಂಟ್ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜ ಹಾರಿಸಲು ಮುಂದಾದರು. 2021ರ ಜನವರಿ 21ರಂದು ಈ ಪಕ್ಷ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ, ಅದರ ಒಂದನೇ ವರ್ಷದ ಸಂಸ್ಥಾಪನಾ ದಿನ ಆಚರಣೆಗಾಗಿ ಅವರು ಧ್ವಜ ಹಾರಿಸಲು ಹೊರಟಿದ್ದರು. ಆಗ ಅದನ್ನು ಟಿಎಂಸಿ ಕಾರ್ಯಕರ್ತರು/ನಾಯಕರು ವಿರೋಧಿಸಿದರು. ಇದೇ ವಿಷಯ ದೊಡ್ಡದಾಗಿ ಮಾತಿನ ಚಕಮಕಿಯಿಂದ ಮಾರಾಮಾರಿಯವರೆಗೆ ತಲುಪಿತ್ತು. ಭಂಗೋರೆಯ ವಿವಿಧ ಭಾಗಗಳಲ್ಲಿ ಎರಡೂ ಪಕ್ಷಗಳವರು ಪರಸ್ಪರ ರಾಡ್​, ಬಡಿಗೆ, ಕಲ್ಲು, ಇಟ್ಟಿಗೆಯಲ್ಲಿ ಬಡಿದಾಡಿಕೊಂಡರು. ಅಷ್ಟೇ ಅಲ್ಲ ಕಚ್ಚಾ ಬಾಂಬ್​​ ದಾಳಿಯನ್ನೂ ನಡೆಸಿದ್ದಾರೆ. ಹತಿಶಾಲಾದಲ್ಲಿರುವ ಟಿಎಂಸಿಯ ಮೂರು ಕಚೇರಿಗಳು, ಅವರ ಹಲವು ವಾಹನಗಳಿಗೆ ಐಎಸ್​ಎಫ್​ ಕಾರ್ಯಕರ್ತರು ಬೆಂಕಿ ಕೂಡ ಹಚ್ಚಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಶ್ರುವಾಯು ಪ್ರಯೋಗ ಕೂಡ ನಡೆಸಿದ್ದರು.

ಇದನ್ನೂ ಓದಿ:ಕೋಲ್ಕತ್ತದಲ್ಲಿ ಗುಂಡಿನ ದಾಳಿ ನಡೆಸಿ, ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌ ಕಾನ್‌ಸ್ಟೆಬಲ್‌

ಇಷ್ಟೆಲ್ಲದರ ಮಧ್ಯೆ ಮರುದಿನ ಐಎಸ್​ಎಫ್​​ನ ನೂರಾರು ಕಾರ್ಯಕರ್ತರು ಕೋಲ್ಕತ್ತಕ್ಕೆ ತೆರಳಿ, ಅಲ್ಲಿ ಟಿಎಂಸಿ ಪಕ್ಷದ ವಿರುದ್ಧ ದೊಡ್ಡಮಟ್ಟದ ಪ್ರತಿಭಟನಾ ಮೆರವಣಿಗೆ ನಡೆಸಲು ಶುರು ಮಾಡಿದರು. ‘ನಾವು ನಮ್ಮ ಪಕ್ಷದ ಧ್ವಜ ಹಾರಿಸಲು ಮುಂದಾದಾಗ ಟಿಎಂಸಿಯವರು ಹಲ್ಲೆ ನಡೆಸಿದ್ದಾರೆ. ನಮ್ಮ ಮೇಲೆ ಅಟ್ಯಾಕ್​ ಮಾಡಿಸಿದ್ದೇ ಟಿಎಂಸಿ ನಾಯಕ ಅಬ್ದುಲ್​ ಇಸ್ಲಾಮ್​. ಆತನನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆ ಶುರುವಿಟ್ಟುಕೊಂಡರು.
ಹೀಗೆ ಪ್ರತಿಭಟನೆ ಪ್ರಾರಂಭಿಸಿದ ISF ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಮುಂದಾದಾಗ ಅವರ ಮೇಲ ಕೂಡ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಪೊಲೀಸರು ಆ ಪಕ್ಷದ ಏಕೈಕ ಶಾಸಕ ನೌಶಾದ್​ ಸಿದ್ದಿಕಿ ಸೇರಿ, 17 ಮಂದಿಯನ್ನು ಬಂಧಿಸಿದ್ದಾರೆ.

Exit mobile version