Site icon Vistara News

NIA Raid: ಕೊಯಮತ್ತೂರ್​ ಸ್ಫೋಟದ ತನಿಖೆ ಚುರುಕು; ಕರ್ನಾಟಕ ಸೇರಿ 3 ರಾಜ್ಯಗಳ 60 ಪ್ರದೇಶಗಳಲ್ಲಿ ಎನ್​ಐಎ ದಾಳಿ

NIA raid

ನವ ದೆಹಲಿ: 2022ರ ಅಕ್ಟೋಬರ್​ 23ರಂದು ತಮಿಳುನಾಡಿನ ಕೊಯಮತ್ತೂರಿನ ಕೊಟ್ಟಾಮೇಡು ಸಂಗಮೇಶ್ವರ ದೇವಸ್ಥಾನದ ಸಮೀಪ ಮಾರುತಿ 800 ಕಾರೊಂದರಲ್ಲಿ ಉಂಟಾಗಿದ್ದ ಗ್ಯಾಸ್​ ಸಿಲಿಂಡರ್ ಸ್ಫೋಟ ಭಯೋತ್ಪಾದನಕಾ ಕೃತ್ಯವೆಂದು ಸಾಬೀತಾಗಿದ್ದು, ಈ ಕೇಸ್​​ನ್ನು ರಾಷ್ಟ್ರೀಯ ತನಿಖಾ ದಳ ಈಗಾಗಲೇ ಕೈಗೆತ್ತಿಕೊಂಡಿದೆ. ಈ ಕೊಯಮತ್ತೂರ್​​ ಸಿಲಿಂಡರ್​ ಸ್ಫೋಟಕ್ಕೆ ಸಂಬಂಧಪಟ್ಟಂತೆ ಇದೀಗ ಎನ್​ಐಎ ತಮಿಳುನಾಡು-ಕೇರಳ ಮತ್ತು ಕರ್ನಾಟಕ ಸೇರಿ ಒಟ್ಟು 60 ಪ್ರದೇಶಗಳಲ್ಲಿ ದಾಳಿ (NIA Raid) ಮಾಡಿದೆ. ಈ ಹಿಂದೆ ನವೆಂಬರ್​​ನಲ್ಲಿ ತಮಿಳುನಾಡಿನಲ್ಲಿ ಚೆನ್ನೈ ಸೇರಿ 45 ಪ್ರದೇಶಗಳಲ್ಲಿ ತನಿಖಾ ದಳ ರೇಡ್​ ಮಾಡಿತ್ತು.

ಅಕ್ಟೋಬರ್​​ 23ರಂದು ಕೊಯಮತ್ತೂರಿನಲ್ಲಿ ಕಾರಲ್ಲಿ ನಡೆದ ಸ್ಫೋಟದಲ್ಲಿ ಜಮೇಶಾ ಮುಬೀನ್​ ಎಂಬಾತ ಮೃತಪಟ್ಟಿದ್ದ. ಈತನೇ ಸ್ಫೋಟದ ರೂವಾರಿ ಎಂದು ಹೇಳಲಾಗಿದೆ. ಕಾರು ಸ್ಫೋಟಗೊಂಡ ರಭಸಕ್ಕೆ ಅವನ ದೇಹ ಕಾರಿನಿಂದ ಸ್ವಲ್ಪದೂರ ಹೋಗಿ ಬಿದ್ದಿತ್ತು. ಪೊಲೀಸರ ಪ್ರಾರಂಭಿಕ ಹಂತದ ತನಿಖೆಯಲ್ಲೇ ಇದೊಂದು ಉಗ್ರಕೃತ್ಯ ಎಂದು ಸಾಬೀತಾಗಿತ್ತು. ಹೀಗಾಗಿ ಎನ್​ಐಎ ತನಿಖೆ ಕೈಗೆತ್ತಿಕೊಂಡಿದೆ. ಇದುವರೆಗೆ ಈ ಕೇಸ್​​ಗೆ ಸಂಬಂಧಪಟ್ಟಂತೆ 6 ಮಂದಿಯನ್ನು ಬಂಧಿ, ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Coimbatore Blast | ಕೊಯಮತ್ತೂರು ಸ್ಫೋಟ ಕೇಸಿನಲ್ಲಿ ನಾಲ್ವರ ಬಂಧನ, ಮುಬಿನ್ ಮನೆಗೆ ಕರೆದೊಯ್ದು ತನಿಖೆ

ಇನ್ನು ಮುಬೀನ್​ ಮೃತಪಟ್ಟ ನಂತರ ಆತನಿಗೆ ಸಂಬಂಧಪಟ್ಟಂತ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅವನ ಮನೆಯಲ್ಲಿದ್ದ 75 ಕೆಜಿ ಸ್ಫೋಟಕ. ಐಸಿಸ್​ ಉಗ್ರ ಸಂಘಟನೆಯ ಧ್ವಜವನ್ನು ಹೋಲುವ ರೇಖಾಚಿತ್ರ, ಅಲ್ಲಾನ ಹೆಸರಿಗೆ ಅವಮಾನ ಮಾಡಿದವರನ್ನು ಜೀವಸಹಿತ ಬಿಡುವುದಿಲ್ಲ ಎಂಬ ಬರಹಗಳುಳ್ಳ ದಾಖಲೆಗಳನ್ನು ತನಿಖಾ ದಳ ವಶಪಡಿಸಿಕೊಂಡಿದೆ. ಹೀಗಾಗಿ ಕೊಯಮತ್ತೂರು ಸ್ಫೋಟಕ್ಕೆ ಐಸಿಸ್​ ಲಿಂಕ್​ ಇರುವುದು ಸಾಬೀತಾಗಿದೆ. ಆದರೆ ಈ ಲಿಂಕ್​ನ ಆಳ ಎಷ್ಟಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Exit mobile version