Site icon Vistara News

Bharat Jodo Yatra | ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್​; ಭಾರತ್ ಜೋಡೊ ಯಾತ್ರೆಗೆ ರಾಹುಲ್​ ಗಾಂಧಿ ಚಾಲನೆ

Congress Bharat Jodo Yatra Begins

ನವದೆಹಲಿ: ಕಾಂಗ್ರೆಸ್​​ನ ಬಹು ನಿರೀಕ್ಷಿತ ಭಾರತ್ ಜೋಡೋ ಯಾತ್ರೆ (Bharat Jodo Yatra)ಗೆ ಇಂದು ರಾಹುಲ್ ಗಾಂಧಿ ಚಾಲನೆ ನೀಡಿದರು. ಕನ್ಯಾಕುಮಾರಿಯ ಗಾಂಧಿ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​, ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ಛತ್ತೀಸ್​ಗಢ್​ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌​ ಮತ್ತು ಇತರ ಹಲವು ಪ್ರಮುಖ ನಾಯಕರು ಇದ್ದರು. ಭಾರತ್ ಜೋಡೋ ಯಾತ್ರೆಗೆ ಚಾಲನೆ ವೇಳೆ ಇಂದು ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಅವರು ರಾಷ್ಟ್ರಧ್ವಜವನ್ನು ರಾಹುಲ್​ ಗಾಂಧಿಯವರಿಗೆ ನೀಡಿದರು. ಬಳಿಕ ಇವರಿಬ್ಬರೂ ನಾಯಕರು ತ್ರಿವರ್ಣ ಧ್ವಜಕ್ಕೆ ನಮಿಸಿದರು.

ಇಂದು ಬೆಳಗ್ಗೆ ರಾಹುಲ್​ ಗಾಂಧಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ರಾಜೀವ್​ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ, ನಮಿಸಿದರು. ಅದಾದ ಬಳಿಕ ಕನ್ಯಾಕುಮಾರಿಗೆ ಹೋಗಿ ಅಲ್ಲಿನ ವಿವೇಕಾನಂದ ಮೆಮೋರಿಯಲ್​​ಗೆ ಭೇಟಿ ನೀಡಿದ್ದರು. ಇಂದು ಯಾತ್ರೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ನಾಳೆ (ಸೆಪ್ಟೆಂಬರ್​ 8) ಮುಂಜಾನೆಯಿಂದ ಕಾಂಗ್ರೆಸ್ ನಾಯಕರ ಕಾಲ್ನಡಿಗೆ ಪ್ರಾರಂಭವಾಗಲಿದೆ.

ಕನ್ಯಾಕುಮಾರಿಯಿಂದ ಹೊರಡಲಿರುವ ಭಾರತ್​ ಜೋಡೋ ಯಾತ್ರೆ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ, 20 ಪ್ರಮುಖ ಪ್ರದೇಶಗಳಲ್ಲಿ ಹಾದು ಹೋಗಲಿದೆ. ಅದರಲ್ಲಿ ಕರ್ನಾಟಕದ ಮೈಸೂರು, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಿಗೂ ಜೋಡೋ ಯಾತ್ರೆ ಪ್ರವೇಶ ಮಾಡಲಿದೆ. ಅದರ ಹೊರತಾಗಿ ತಿರುವನಂತಪುರಂ, ಕೊಚ್ಚಿ, ನಿಲಂಬೂರ್​, ವಿಕಾರಾಬಾದ್​, ನಂದೇಡ್​, ಜಲಗಾಂವ್​, ಜಾಮೋದ್​, ಇಂಧೋರ್​, ಕೋಟಾ, ದೌಸಾ, ಅಲ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್, ಜಮ್ಮು, ಶ್ರೀನಗರ ಮೂಲಕ ಕಾಶ್ಮೀರ ತಲುಪಲಿದೆ. ಐದು ತಿಂಗಳಲ್ಲಿ ಈ ಎಲ್ಲ ಪ್ರದೇಶಗಳಲ್ಲಿ ಯಾತ್ರೆ ಸುತ್ತಲಿದೆ.

ಇದನ್ನೂ ಓದಿ: Bharat Jodo Yatra | ಪೋಸ್ಟರ್​​ನಲ್ಲಿ ಕಂಡುಬಂತು ರಾಬರ್ಟ್​ ವಾದ್ರಾ ಫೋಟೋ; ಬಿಜೆಪಿಯಿಂದ ಟೀಕೆ

Exit mobile version