Site icon Vistara News

Gujarat Election Results| ಕುತ್ತಿಗೆಗೆ ನೇಣಿನ ಕುಣಿಕೆ ಬಿಗಿದುಕೊಂಡು ಹತಾಶೆಯಿಂದ ಕೂಗಾಡಿದ ಕಾಂಗ್ರೆಸ್​ ಅಭ್ಯರ್ಥಿ

Congress candidate ties noose and alleges EVM

ಗುಜರಾತ್​​ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಸನ್ನದ್ಧವಾಗಿದೆ. ಸದ್ಯ 159 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಅಂತಿಮವಾಗಿ ಎಷ್ಟು ಸೀಟ್​ ಗೆಲ್ಲಲಿದೆ ಎಂಬುದು ಮತ ಎಣಿಕೆ ನಂತರ ಸ್ಪಷ್ಟವಾಗಲಿದೆ. ಹೀಗೆ ಬಿಜೆಪಿ ಗೆಲುವಿನ ಓಟದಲ್ಲಿರುವ ಮಧ್ಯೆ ಕಾಂಗ್ರೆಸ್​ ಅಭ್ಯರ್ಥಿಯೊಬ್ಬರು ತಮ್ಮ ಕುತ್ತಿಗೆಗೆ ಶಾಲನ್ನು ನೇಣಿನಂತೆ ಬಿಗಿದುಕೊಂಡು, ಹತಾಶೆ-ಕೋಪದಿಂದ ರೌದ್ರಾವತಾರ ತಾಳಿದ ಘಟನೆ ನಡೆದಿದೆ. ಗಾಂಧಿಧಾಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಭರತ್​ಭಾಯ್​ ವೆಲ್ಜಿಭಾಯ್​ ಸೋಲಂಕಿ ಅವರು ಕುತ್ತಿಗೆಗೆ ನೇಣಿನ ಕುಣಿಕೆ ಬಿಗಿದುಕೊಂಡು, ಇವಿಎಂ ಸರಿಯಿಲ್ಲ ಎಂದು ಆರೋಪ ಮಾಡುತ್ತ ಹೈಡ್ರಾಮಾವನ್ನೇ ಮಾಡಿದ್ದಾರೆ.

ಸೋಲಂಕಿ ಅವರು ಗಾಂಧಿಧಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಲ್ತಿ ಕಿಶೋರ್​ ಮಹೇಶ್ವರಿ ಅವರಿಗಿಂತಲೂ 12 ಸಾವಿರ ಮತಗಳ ಹಿನ್ನಡೆಯಲ್ಲಿದ್ದಾಗ ಅತಿಯಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಹೊದ್ದಿದ್ದ ಶಾಲನ್ನೇ ಕುತ್ತಿಗೆಗೆ ನೇಣಿನ ಮಾದರಿಯಲ್ಲಿ ಬಿಗಿದುಕೊಂಡು, ‘ಇದೆಲ್ಲದಕ್ಕೂ ಇವಿಎಂ ಕಾರಣ. ಹಲವು ಇವಿಎಂ ಯಂತ್ರಗಳನ್ನು ಸರಿಯಾಗಿ ಸೀಲ್​ ಮಾಡಿರಲಿಲ್ಲ’ ಎಂದು ಕೂಗಾಡಿದ್ದಾರೆ. ಅಷ್ಟೇ ಅಲ್ಲ, ಇವಿಎಂ ದೋಷದ ವಿರುದ್ಧ ಧರಣಿಯನ್ನೂ ಕುಳಿತಿದ್ದರು. ಅವರು ಅತಿಯಾಗಿ ಹತಾಶೆಗೆ ಒಳಗಾದ ಮುಖಭಾವ ಹೊತ್ತಿದ್ದರು. ಮತ ಎಣಿಕೆ ಕೇಂದ್ರದ ಬಳಿಯೇ ಅವರು ಇಷ್ಟೆಲ್ಲ ರಾದ್ಧಾಂತ ಸೃಷ್ಟಿಸಿದ್ದರು. ಬಳಿಕ ಜತೆಗಿದ್ದವರು ಸೋಲಂಕಿಯವರನ್ನು ಸಮಾಧಾನ ಪಡಿಸಿದ್ದಾರೆ.

ಇದನ್ನೂ ಓದಿ: Gujarat Election Result | ಇಂದು ಗುಜರಾತ್‌ ಚುನಾವಣೆ ಫಲಿತಾಂಶ, ಯಾರಿಗೆ ಗೆಲುವಿನ ಸಂತೋಷ?

Exit mobile version