Site icon Vistara News

ಶಶಿ ತರೂರ್​ ಕಲ್ಪನೆಯ ಭಾರತದಲ್ಲಿ ಜಮ್ಮು-ಕಾಶ್ಮೀರ, ಲಡಾಖ್​​ಗಳು ಇಲ್ಲವೇ ಇಲ್ಲ; ಮತ್ತೆ ಅದೇ ಮಹಾ ಪ್ರಮಾದ!

Shashi Tharoor

ನವ ದೆಹಲಿ: ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಶಶಿ ತರೂರ್​, ಅದಾದ ಕೆಲವೇ ಹೊತ್ತಲ್ಲಿ ವಿವಾದ ಹುಟ್ಟುಹಾಕಿದ್ದಾರೆ. ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಶಶಿ ತರೂರ್​ ಆ ಪ್ರಣಾಳಿಕೆ ಪುಸ್ತಕದ ಎರಡನೇ ಪುಟದಲ್ಲಿ ಒಂದು ಎಡವಟ್ಟು ಮಾಡಿದ್ದರು. ಅದನ್ನವರು ಒಂದು ತಾಸಿನಲ್ಲಿ ಸರಿಪಡಿಸಿಕೊಂಡರೂ ಕೂಡ ಅನೇಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಶಶಿ ತರೂರ್​ ಬಿಡುಗಡೆ ಮಾಡಿದ ‘Think Tomorrow, Think Tharoor’ ಎಂಬ ಹೆಸರಿನ​ ಚುನಾವಣಾ ಪ್ರಣಾಳಿಕೆಯ ಪುಸ್ತಕದಲ್ಲಿ ಭಾರತದ ನಕಷೆಯೊಂದಿದೆ. ಆ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್​ ಭಾಗಗಳನ್ನೇ ಚಿತ್ರಿಸಿರಲಿಲ್ಲ. ಇವೆರಡೂ ಪ್ರದೇಶಗಳು ಇಲ್ಲದ ಭಾರತದ ಚಿತ್ರ ಅದಾಗಿತ್ತು. ಭಾರತವನ್ನು ಅಸಂಬದ್ಧವಾಗಿ ಚಿತ್ರಿಸಿರುವ ಈ ಪ್ರಣಾಳಿಕೆಯನ್ನು ಅವರು ಟ್ವಿಟರ್​ನಲ್ಲಿ ಶೇರ್​ ಮಾಡುತ್ತಿದ್ದಂತೆ ಅನೇಕಾನೇಕರು ಶಶಿ ತರೂರ್​ ವಿರುದ್ಧ ಕಿಡಿಕಾರಿದ್ದರು. ‘ಶಶಿ ತರೂರ್​ ಒಬ್ಬ ದೇಶ ವಿಭಜಕ’ ‘ನಾಚಿಕೆ ಇಲ್ಲದವನು’ ಎಂಬಿತ್ಯಾದಿ ಕಮೆಂಟ್​​ಗಳನ್ನು ಮಾಡಿದ್ದರು.
ಹೀಗೆ ಚಿತ್ರಿಸಲಾದ ಭಾರತದ ನಕ್ಷೆಯ ಬಗ್ಗೆ ಅನೇಕಾನೇಕರು ಅಸಮಾಧಾನ ಹೊರಹಾಕಿ, ಬೈಯ್ಯುತ್ತಿದ್ದಂತೆ ಶಶಿ ತರೂರ್​ ಕಚೇರಿ ತಪ್ಪು ತಿದ್ದಿಕೊಂಡಿದೆ. ಭಾರತವನ್ನು ಸಂಪೂರ್ಣವಾಗಿ ಚಿತ್ರಿಸಿ ಅಂದರೆ, ಬಿಟ್ಟು ಹೋದ ಜಮ್ಮು-ಕಾಶ್ಮೀರ, ಲಡಾಖ್​ನ್ನೂ ಸೇರಿಸಿದ ಹೊಸ ನಕ್ಷೆಯುಳ್ಳ ಪರಿಷ್ಕೃತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಇಂದು ಶಶಿ ತರೂರ್​ ಶೇರ್ ಪ್ರಣಾಳಿಕೆಯಲ್ಲಿದ್ದ ಭಾರತದ ನಕ್ಷೆ

ಇದೇ ಮೊದಲಲ್ಲ !
ಶಶಿ ತರೂರ್​ ಭಾರತದ ನಕ್ಷೆ ವಿಚಾರದಲ್ಲಿ ಎಡವುತ್ತಿರುವುದು ಇದೇ ಮೊದಲೇನೂ ಅಲ್ಲ. 2019ರಲ್ಲೂ ಇಂಥದ್ದೇ ಒಂದು ಮಹಾನ್​ ಎಡವಟ್ಟು ಮಾಡಿದ್ದರು. ಆಗ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿತ್ತು. ಕೇರಳದ ಕೊಯಿಕ್ಕೊಡ್​​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಶಿ ತರೂರ್​ ಅದರ ಫೋಟೋವನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿಕೊಳ್ಳುವ ವೇಳೆ ಭಾರತದ ಚಿತ್ರವನ್ನೂ ಹಂಚಿಕೊಂಡಿದ್ದರು. ಆಗ ಅವರು ಶೇರ್​ ಮಾಡಿಕೊಂಡಿದ್ದ ಭಾರತದ ನಕ್ಷೆಯಲ್ಲೂ ಜಮ್ಮು-ಕಾಶ್ಮೀರ ಮತ್ತು ಲಡಾಖ್​ ಭಾಗಗಳು ಇರಲಿಲ್ಲ. ಆಗಂತೂ ಶಶಿ ತರೂರ್​ ಸಿಕ್ಕಾಪಟೆ ಟ್ರೋಲ್ ಆಗಿದ್ದರು. ಹಲವರು ಛೀಮಾರಿ ಹಾಕಿದ್ದರು.

ಇದನ್ನೂ ಓದಿ: Congress President | ಅಧ್ಯಕ್ಷ ರೇಸ್‌ನಿಂದ ಗೆಹ್ಲೋಟ್‌ ಔಟ್‌, ತರೂರ್‌, ಬನ್ಸಾಲ್‌ ಇನ್

Exit mobile version