Site icon Vistara News

ಮೊದಲ ಭಾರತೀಯ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಮರಿ ಮೊಮ್ಮಗ ಕಾಂಗ್ರೆಸ್​​ಗೆ ರಾಜೀನಾಮೆ

CR Kesavan resigned from the Congress Party

#image_title

ನವ ದೆಹಲಿ: ಸ್ವತಂತ್ರ ಭಾರತದ ಮೊದಲ ಮತ್ತು ಮೊದಲ ಭಾರತೀಯ ಗವರ್ನರ್​ ಜನರಲ್ ಆಗಿದ್ದ​ ಸಿ.ರಾಜಗೋಪಾಲಾಚಾರಿ ಅವರ ಮರಿ ಮೊಮ್ಮಗ ಸಿ.ಆರ್​.ಕೇಶವನ್ (CR Kesavan)​ ಅವರು ಇಂದು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಪ್ರಸ್ತುತ ಕಾಂಗ್ರೆಸ್​ ಪಕ್ಷ ಸಾಗುತ್ತಿರುವ ಹಾದಿ ಬಗ್ಗೆ ನನಗೆ ಭಿನ್ನ ಅಭಿಪ್ರಾಯವಿದೆ. ಕಾಂಗ್ರೆಸ್​ನ ಯಾವ ಮೌಲ್ಯ-ಸಿದ್ಧಾಂತಗಳನ್ನು ನೋಡಿ, ನಾನು ಈ ಪಕ್ಷಕ್ಕೆ ಸೇರ್ಪಡೆಗೊಂಡು, ಎರಡು ದಶಕಗಳ ಕಾಲ ಕಾಂಗ್ರೆಸ್​ಗಾಗಿ ದುಡಿದೆನೋ ಆ ಮೌಲ್ಯಗಳ ಕುರುಹು ಕೂಡ ಕಾಂಗ್ರೆಸ್​​ನಲ್ಲಿ ಉಳಿದಿಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಕೇಶವನ್​ (CR Kesavan resigned from the Congress)ಉಲ್ಲೇಖಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ರಾಜೀನಾಮೆ ಪತ್ರ ಕಳಿಸಿರುವ ಸಿ.ಆರ್.ಕೇಶವನ್​, ‘ಕಾಂಗ್ರೆಸ್​​ನ ಈಗಿನ ನಿಲುವು, ಸಿದ್ಧಾಂತವನ್ನು ನಾನು ಒಪ್ಪುತ್ತೇನೆ ಎಂದು ಮನಸ್ಫೂರ್ತಿಯಾಗಿ ಹೇಳಲು ಸಾಧ್ಯವೂ ಇಲ್ಲ. ಇದೇ ಕಾರಣಕ್ಕೆ ನಾನು ಪಕ್ಷದ ರಾಷ್ಟ್ರೀಯ ಮಟ್ಟದ ಜವಾಬ್ದಾರಿಯಿಂದ ದೂರ ಉಳಿದಿದ್ದೇನೆ. ಭಾರತ್ ಜೋಡೋ ಯಾತ್ರೆಯಲ್ಲೂ ಭಾಗವಹಿಸಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾಂಸ ತಿಂದು ದೇವಾಲಯಕ್ಕೆ ಹೋಗುವುದು ಅಪರಾಧ ಅನ್ನೋ ಬಿಜೆಪಿ ಸಿ.ಟಿ.ರವಿ ಬಗ್ಗೆ ತುಟಿ ಬಿಚ್ಚುವುದಿಲ್ಲ: ಕಾಂಗ್ರೆಸ್‌ ಟೀಕೆ

ರಾಜೀನಾಮೆ ಬಳಿಕ ಎಎನ್​ಐ ಜತೆ ಮಾತನಾಡಿದ ಸಿ.ಆರ್.ಕೇಶವನ್​ ಅವರು ‘ನಾನು 22ವರ್ಷಗಳಿಂದ ಕಾಂಗ್ರೆಸ್​ನಲ್ಲಿದ್ದೇನೆ. ಸದ್ಯದ ಕಾಂಗ್ರೆಸ್​​ನ ಮನಸ್ಥಿತಿ ವಾಸ್ತವಿಕವಾಗಿಯೂ ಇಲ್ಲ, ರಚನಾತ್ಮಕವಾಗಿಯೂ ಇಲ್ಲ. ಪಕ್ಷದ ಮೌಲ್ಯಗಳು ಬದಲಾಗಿವೆ ಎಂದಿದ್ದಾರೆ. ಇನ್ನು ಕೇಶವನ್​ ಅವರು 2001ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಅವರಿಗೆ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸುವ ಅವಕಾಶ ಸಿಕ್ಕಿತ್ತು. ಶ್ರೀ ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ನ್ಯಾಶನಲ್​ ಇನ್​ಸ್ಟಿಟ್ಯೂಟ್ ಆಫ್​ ಯುತ್​ ಡೆವಲಪ್​​ನ ಉಪಾಧ್ಯಕ್ಷರಾಗಿ, ಪ್ರಸಾರ ಭಾರತಿ ಮಂಡಳಿ ಸದಸ್ಯರಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಪಕ್ಷಕ್ಕೆ ರಾಜೀನಾಮೆ ಕೊಡುವ ಹೊತ್ತಿನಲ್ಲಿ ಅವರು ತನಗೆ ಅವಕಾಶ ಕೊಟ್ಟ ಸೋನಿಯಾ ಗಾಂಧಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್​​ನ ಹಲವು ಹಿರಿ-ಕಿರಿಯ ನಾಯಕರು ಪಕ್ಷ ತೊರೆದು ಹೋಗಿದ್ದಾರೆ. ಕಾಂಗ್ರೆಸ್​ ಮೊದಲಿನಂತೆ ಇಲ್ಲ ಎಂದೇ ಎಲ್ಲರೂ ಆರೋಪಿಸಿದ್ದಾರೆ. ಇತ್ತೀಚೆಗೆ ಮಾಜಿ ರಕ್ಷಣಾ ಸಚಿವ ಎ.ಕೆ.ಅಂಟೋನಿ ಅವರ ಪುತ್ರ ಅನಿಲ್​ ಅಂಟೋನಿ ಕಾಂಗ್ರೆಸ್ ತೊರೆದಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಿಬಿಸಿ ನಿರ್ಮಿಸಿದ ಡಾಕ್ಯುಮೆಂಟರಿಯನ್ನು ಕಾಂಗ್ರೆಸ್ ಸಹಮತಿಸುತ್ತಿದೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ ಎಂದು ಹೇಳಿ ರಾಜೀನಾಮೆ ಕೊಟ್ಟಿದ್ದರು. ಆದರೆ ಕೇಶವನ್​ ಅವರು ಇಂಥ ಕಾರಣ ಕೊಟ್ಟಿಲ್ಲ. ಕಾಂಗ್ರೆಸ್​ನ ಬದಲಾದ ಮೌಲ್ಯಗಳನ್ನು ಒಪ್ಪಲಾಗುತ್ತಿಲ್ಲ ಎಂದಿದ್ದಾರೆ.

Exit mobile version