Site icon Vistara News

Mohan Bhagwat: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ವಿರುದ್ಧ ಕ್ರಿಮಿನಲ್​ ದೂರು ದಾಖಲು; ಬ್ರಾಹ್ಮಣರಿಗೆ ಅಪಮಾನ ಮಾಡಿದ ಆರೋಪ

Mohan Bhagwat

'RSS backs reservations': Mohan Bhagwat amid BJP vs Congress poll battle over quota row

ನವ ದೆಹಲಿ: ದೇಶದಲ್ಲಿ ಜಾತಿಪದ್ಧತಿಯನ್ನು ಹುಟ್ಟು ಹಾಕಿದ್ದು ದೇವರಲ್ಲ, ಪುರೋಹಿತರು/ಪಂಡಿತರು ಎಂದು ಹೇಳಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ (Mohan Bhagwat)​ ವಿರುದ್ಧ ಬಿಹಾರದ ಮುಜಾಫರ್​​ಪುರ ಜಿಲ್ಲೆಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​​ನಲ್ಲಿ ಕ್ರಿಮಿನಲ್​ ದೂರು ದಾಖಲಾಗಿದೆ. ಅಡ್ವೋಕೇಟ್​ ಸುಧೀರ್​ ಓಝಾ ಎಂಬುವರು ಮೋಹನ್ ಭಾಗವತ್​ ವಿರುದ್ಧ ದೂರು ನೀಡಿದ್ದಾರೆ.

‘ಫೆ.5ರಂದು ಮುಂಬಯಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಬ್ರಾಹ್ಮಣರು ಈ ದೇಶದಲ್ಲಿ ಜಾತಿ ವ್ಯವಸ್ಥೆ ಸೃಷ್ಟಿಸಿದರು ಎಂದು ಹೇಳಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​​ಎಸ್​)ದ ಮುಖ್ಯಸ್ಥ ಮೋಹನ್​ ಭಾಗವತ್​ ವಿರುದ್ಧ ನಾನು ಇಂದು ದೂರು ದಾಖಲಿಸಿದ್ದೇನೆ. ಮೋಹನ್​ ಭಾಗವತ್​ ತಮ್ಮ ಹೇಳಿಕೆಯ ಮೂಲಕ ಶಾಂತಿ ಭಂಗ ಪ್ರಚೋದನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್​ 504, 505 ಮತ್ತು 506ರ ಅಡಿಯಲ್ಲಿ ದೂರು ದಾಖಲಿಸಿದ್ದೇನೆ. ಮೋಹನ್​ ಭಾಗವತ್​ ಅವರು ಸಮಾಜದಲ್ಲಿ ಒಡಕು ಮೂಡಿಸುವ ಉದ್ದೇಶದಿಂದಲೇ ಈ ಹೇಳಿಕೆಯನ್ನು ನೀಡಿದ್ದಾರೆ. ಇದು ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ ಮತಗಳನ್ನು ಗಮನದಲ್ಲಿಟ್ಟುಕೊಂಡೇ ಆಡಿದ ಮಾತುಗಳು. ಆದರೆ ಅವರ ಹೇಳಿಕೆಗಳು ಬ್ರಾಹ್ಮಣರನ್ನು ಅಪಮಾನಿಸುವಂತೆ ಇದೆ’ ಎಂದು ಅಡ್ವೋಕೇಟ್​ ಸುಧೀರ್ ಓಝಾ ಹೇಳಿದ್ದಾರೆ.

ಇದನ್ನೂ ಓದಿ: ಮಾಂಸಾಹಾರ ಸೇವನೆ ಮಾಡುವವರಿಗೆ ಸಲಹೆಯೊಂದನ್ನು ಕೊಟ್ಟ ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​

ಫೆ.5ರಂದು ಮುಂಬಯಿಯಲ್ಲಿ ಆಯೋಜಿಸಲಾಗಿದ್ದ ಸಂತ ರೋಹಿದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್​, ‘ಜಾತಿ ಪದ್ಧತಿಯನ್ನು ದೇವರು ಹುಟ್ಟುಹಾಕಿಲ್ಲ. ಈ ವ್ಯವಸ್ಥೆಯನ್ನು ಸೃಷ್ಟಿಸಿದವರು ಪಂಡಿತರು’ ಎಂದು ಹೇಳಿದ್ದರು. ಈ ಮಾತುಗಳು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ನಾನು ‘ಪಂಡಿತ ಎಂದು ಹೇಳಿದ್ದು ಪುರೋಹಿತ ಎಂಬರ್ಥದಲ್ಲಿ ಅಲ್ಲ, ಬುದ್ಧಿಜೀವಿಗಳು (ವಿದ್ವಾಂಸರು) ಎಂಬ ಅರ್ಥದಲ್ಲಿ’ ಎಂದು ಸಮರ್ಥಿಸಿಕೊಂಡಿದ್ದರು.

Exit mobile version