Site icon Vistara News

Death Due to Lightning : ಸಿಡಿಲಿಗೆ ವರ್ಷದಲ್ಲಿ 2,880 ಸಾವು! ಕರ್ನಾಟಕದಲ್ಲಿ 10 ವರ್ಷದಲ್ಲಾದ ಸಾವಿನ ಸಂಖ್ಯೆ ಆಘಾತಕಾರಿ!

Death Due to Lightning

ನವದೆಹಲಿ: ಸಿಡಿಲು ಬಡಿದು ಸಾವು ಸಂಭವಿಸುವ ಪ್ರಕರಣಗಳ ಬಗ್ಗೆ ಪ್ರತಿ ವರ್ಷ ಹಲವಾರು ವರದಿಗಳು (Death Due to Lightning) ಪ್ರಕಟ ಆಗುತ್ತಿರುತ್ತವೆ. ಈ ರೀತಿ ಸಿಡಿಲಿನಿಂದಾಗಿಯೇ ಭಾರತದಲ್ಲಿ ವರ್ಷಕ್ಕೆ ಎರಡು ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಭೂ ವಿಜ್ಞಾನ ಸಚಿವಾಲಯವು ವಿಶೇಷವಾದ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಭೂ ವಿಜ್ಞಾನ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2020ರಲ್ಲಿ 2,862 ಮಂದಿ ಸಿಡಿಲಿನಿಂದಾಗಿ ಸಾವನ್ನಪ್ಪಿದ್ದರು. 2021ರಲ್ಲಿ ಆ ಸಂಖ್ಯೆ 2,880 ಆಗಿತ್ತು. ವರದಿಯ ಪ್ರಕಾರ ಮಧ್ಯ ಪ್ರದೇಶದಲ್ಲಿಯೇ ಅತಿ ಹೆಚ್ಚು ಮಂದಿ ಸಿಡಿಲಿನಿಂದಾಗಿ ಸಾವನ್ನಪ್ಪಿದ್ದಾರೆ. 2021ರಲ್ಲಿ ಮಧ್ಯ ಪ್ರದೇಶದಲ್ಲಿ ಒಟ್ಟಾರೆಯಾಗಿ 496 ಮಂದಿ ಸಿಡಿಲು ಬಡಿದು ಮೃತರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆಘಾತಕಾರಿ ಸಂಗತಿ ಏನೆಂದರೆ, 2011ರಿಂದ 2021ರ ಅವಧಿಯಲ್ಲಿ ಕರ್ನಾಟಕದಲ್ಲಿ ಸಿಡಿಲು ಬಡಿದು 800ಕ್ಕೂ ಹೆಚ್ಚು ಜೀವ ಬಲಿಯಾಗಿದೆ.

ಇಷ್ಟಾದರೂ ಸಿಡಿಲು ಬಡಿದು ಸಾವನ್ನಪ್ಪುವುದು ಇನ್ನೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಲ್ಲಿ ಅಧಿಸೂಚಿತ ವಿಪತ್ತುಗಳ ಪಟ್ಟಿಯ ಭಾಗವಾಗಿಲ್ಲ. ಹಾಗಾಗಿ ಸಿಡಿಲು ಬಡಿದು ಸಾವನ್ನಪ್ಪುತ್ತಿರುವವರ ಕುಟುಂಬಗಳಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ.

ಇದನ್ನೂ ಓದಿ: Viral Video : ತನ್ನ ಪ್ರಯಾಣಿಕರಿಗೆಂದು ವಿಶೇಷ ಆಟಗಳನ್ನು ಪರಿಚಯಿಸಿದ ಉಬರ್‌ ಡ್ರೈವರ್‌!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೂ ವಿಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಗಳೊಬ್ಬರು, “ಪ್ರಸ್ತುತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ(NDRF)/ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಸಹಾಯಕ್ಕೆ ಅರ್ಹವಾದ ವಿಪತ್ತುಗಳ ಪಟ್ಟಿಯಲ್ಲಿ 12 ವಿಪತ್ತುಗಳಿವೆ. ಅವುಗಳೆಂದರೆ ಚಂಡಮಾರುತ, ಬರ, ಭೂಕಂಪ, ಬೆಂಕಿ, ಪ್ರವಾಹ, ಸುನಾಮಿ, ಆಲಿಕಲ್ಲು, ಭೂಕುಸಿತ, ಹಿಮಪಾತ, ಮೇಘಸ್ಫೋಟ, ಕೀಟಗಳ ದಾಳಿ ಮತ್ತು ಹಿಮ ಮತ್ತು ಶೀತ ಅಲೆ. ಈ ಪಟ್ಟಿಗೆ ಇನ್ನೂ ಕೆಲವು ವಿಪತ್ತುಗಳನ್ನು ಸೇರಿಸಲು 15ನೇ ಹಣಕಾಸು ಆಯೋಗ ಪರಿಗಣಿಸಿದೆ” ಎಂದು ತಿಳಿಸಿದ್ದಾರೆ.

ಹಾಗೆಯೇ, “ಭೂ ವಿಜ್ಞಾನ ಇಲಾಖೆಯು ಭಾರತದ ಹವಾಮಾನ ಇಲಾಖೆಯ ಮೂಲಕ, ಗುಡುಗು, ಮಳೆ ಮತ್ತು ಸಂಬಂಧಿತ ವಿದ್ಯಮಾನಗಳ ಮುನ್ಸೂಚನೆ ಮತ್ತು ಎಚ್ಚರಿಕೆಗಳನ್ನು ಐದು ದಿನಗಳ ಮುಂಚೆಯೇ ನೀಡುತ್ತದೆ. ಈ ವಿಚಾರದಲ್ಲಿ ಸಂತ್ರಸ್ತ ಕುಟುಂಬಗಳಿಗೆ ನೆರವು ಆಯಾ ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುತ್ತದೆ” ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಟ್ರಾಫಿಕ್‌ ಸಿಗ್ನಲ್‌ ವೇಳೆ ಬ್ಯಾಗ್‌ಗೆ ಕೈಹಾಕಿ ತಿಂಡಿ ತಿಂದ ಡೆಲಿವರಿ ಬಾಯ್; ಆರ್ಡರ್‌ ಮಾಡಿದವನ ಬಗ್ಗೆ ಮರುಕ
“ಐಎಂಡಿ ನೀಡುವ ಮಾಹಿತಿ ಜಿಲ್ಲೆ ಮತ್ತು ಪಟ್ಟಣದ ಮಟ್ಟದಲ್ಲಿ ನಿರ್ದಿಷ್ಟವಾಗಿರುತ್ತದೆ. ಐಎಂಡಿ ವೆಬ್‌ಸೈಟ್‌, ಮೊಬೈಲ್‌ ಅಪ್ಲಿಕೇಶನ್‌, ಎಸ್‌ಎಂಎಸ್‌, ಇಮೇಲ್‌ ಮತ್ತು ಸ್ಥಳೀಯ ಭಾಷೆಗಳಲ್ಲಿ ವಾಟ್ಸ್‌ಆಪ್‌ ಸಂದೇಶಗಳ ಮೂಲಕ ಮಾಹಿತಿ ರವಾನೆ ಮಾಡುತ್ತಿದೆ. ಪ್ರಸ್ತುತ ಐಎಂಡಿಯು ದೇಶದಾದ್ಯಂತ 732 ಜಿಲ್ಲೆಗಳು ಮತ್ತು 1089 ನಗರಗಳಲ್ಲಿ ಮೂರು ಗಂಟೆಗಳಿಗೊಮ್ಮೆ ಎಚ್ಚರಿಕೆ ನೀಡುತ್ತಿದೆ. DAMINI ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ತಮ್ಮ ಸುತ್ತಮುತ್ತಲಿನ(40 ಕಿಲೋಮೀಟರ್‌) ಸಿಡಿಲಿನ ಮಾಹಿತಿಯನ್ನು ಪಡೆದುಕೊಳ್ಳಬಹುದು” ಎಂದೂ ಅವರು ಮಾಹಿತಿ ನೀಡಿದ್ದಾರೆ.

ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳು

Exit mobile version