Site icon Vistara News

ದೇಶದಲ್ಲಿ 8ನೇ ಮಂಕಿಪಾಕ್ಸ್ ಪ್ರಕರಣ; ಹೆದರಬೇಡಿ ಎಂದು ಧೈರ್ಯ ತುಂಬಿದ ಕೇಂದ್ರ ಆರೋಗ್ಯ ಸಚಿವ

Covid 19 Updates: Cengral directs hospitals to hold mock drill on April 10, 11

ನವ ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲೀಗ ಮೂರನೇ ಮಂಕಿಪಾಕ್ಸ್ ಕೇಸ್​ ದಾಖಲಾಗಿದೆ. ಇದು ದೇಶದ 8ನೇ ಕೇಸ್​ ಆಗಿದೆ. 31ವರ್ಷದ ನೈಜೀರಿಯಾ ಮೂಲದ ವ್ಯಕ್ತಿಯಲ್ಲೀಗ ಮಂಕಿಪಾಕ್ಸ್ ದೃಢಪಟ್ಟಿದ್ದು, ದೆಹಲಿಯ ಲೋಕ್ ನಾಯಕ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೂ ಕೂಡ ವಿದೇಶ ಪ್ರವಾಸ ಮಾಡಿದವರು ಅಲ್ಲ. ಇಂದು ಕೇರಳದಲ್ಲಿ 30 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇವರು ಯುಎಇಯಿಂದ ಜುಲೈ 27ರಂದು ಕೇರಳಕ್ಕೆ ಆಗಮಿಸಿದ್ದರು.

ಹೆದರಬೇಡಿ..
ಭಾರತದಲ್ಲಿ ಮಂಕಿಪಾಕ್ಸ್​ ಕೇಸ್​​ಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ, ಲೋಕಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಈ ಬಗ್ಗೆ ಮಾತನಾಡಿದ್ದಾರೆ. ‘ಮಂಕಿಪಾಕ್ಸ್ ಎಂಬುದು ಜಗತ್ತಿಗಾಗಲೀ, ಭಾರತಕ್ಕಾಗಲೀ ಹೊಸ ರೋಗವಲ್ಲ. 1970ರಿಂದಲೂ ಆಫ್ರಿಕಾದಲ್ಲಿ ಹಲವು ಪ್ರಕರಣಗಳು ಕಾಣಿಸಿಕೊಂಡಿವೆ. ಮಂಕಿಪಾಕ್ಸ್ ನಿಯಂತ್ರಣಕ್ಕೆ, ಚಿಕಿತ್ಸೆಗೆ ಭಾರತದಲ್ಲೂ ಕೂಡ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ರೋಗ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯೂ ವಿಶೇಷ ಗಮನ ಕೊಟ್ಟಿದೆ. ಯಾರೂ ಹೆದರುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

‘ಮಂಕಿಪಾಕ್ಸ್​ ಬಗ್ಗೆ ಅನಗತ್ಯ ಭಯ, ಗಾಬರಿ ಬೇಡ. ಈ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಅಭಿಯಾನವನ್ನು ನಾವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ನಡೆಸುತ್ತಿದ್ದೇವೆ. ನೀತಿ ಆಯೋಗದ ಸದಸ್ಯರ ನೇತೃತ್ವದಲ್ಲಿ ಕಾರ್ಯಪಡೆಯನ್ನೂ ರಚಿಸಿದ್ದೇವೆ. ಈ ಟಾಸ್ಕ್​ಫೋರ್ಸ್​​ನ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕೇರಳದಲ್ಲಿಯೇ ಅತ್ಯಂತ ಹೆಚ್ಚು ಕೇಸ್​​ಗಳು ಕಂಡುಬಂದಿವೆ. ರೋಗ ನಿಯಂತ್ರಣ, ಚಿಕಿತ್ಸೆ ಸಂಬಂಧಪಟ್ಟು ಕೇರಳ ರಾಜ್ಯ ಸರ್ಕಾರಕ್ಕೆ ಯಾವುದೇ ಸಹಾಯ ಬೇಕಿದ್ದರೂ ನಾವು ನೀಡುತ್ತೇವೆ ’ ಎಂದು ಮನ್​ಸುಖ್​ ಮಾಂಡವಿಯಾ ತಿಳಿಸಿದ್ದಾರೆ.

ಭಾರತದಲ್ಲಿ ಮೊದಲ ಮಂಕಿಪಾಕ್ಸ್​ ಪ್ರಕರಣ ಕಾಣಿಸಿಕೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ‘ಮಂಕಿಪಾಕ್ಸ್ ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಹೋದವರು ಕಡ್ಡಾಯವಾಗಿ 21ದಿನಗಳ ಕಾಲ ಐಸೋಲೇಟ್​ ಆಗಬೇಕು. ಮಾಸ್ಕ್ ಧರಿಸಬೇಕು. ಸ್ವಚ್ಛತೆ ಪಾಲನೆ ಮಾಡಬೇಕು’ ಎಂದೂ ಹೇಳಿತ್ತು. ಈಗಾಗಲೇ 75ರಾಷ್ಟ್ರಗಳಲ್ಲಿ ಮಂಕಿಪಾಕ್ಸ್​ ಕಾಣಿಸಿಕೊಂಡಿದ್ದರಿಂದ ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಹೆಚ್ಚಿನ ಗಮನಹರಿಸಿದೆ.

ಲಸಿಕೆ ಸಂಶೋಧನೆ ನಡೆಯುತ್ತಿದೆ
ಮಂಕಿಪಾಕ್ಸ್​ ಭಾರತದಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಸೀರಂ ಇನ್​ಸ್ಟಿಟ್ಯೂಟ್​​ನ ಸಿಇಒ ಆಧಾರ್​ ಪೂನಾವಾಲಾ ಒಂದು ಸಮಾಧಾನಕರ ಸುದ್ದಿ ಕೊಟ್ಟಿದ್ದಾರೆ. ಮಂಕಿಪಾಕ್ಸ್​ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾರನ್ನು ಭೇಟಿ ಮಾಡಿದ ಅವರು ಬಳಿಕ ಮಾತನಾಡಿ, ‘ನಾವು ಲಸಿಕೆ ಅಭಿವೃದ್ಧಿ ಪಡಿಸಲು ಈಗಾಗಲೇ ಸಂಶೋಧನೆ ಪ್ರಾರಂಭಿಸಿದ್ದೇವೆ. ಇದನ್ನು ಆರೋಗ್ಯ ಸಚಿವರಿಗೂ ತಿಳಿಸಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮಂಕಿಪಾಕ್ಸ್​ ಪ್ರಕರಣ 7ಕ್ಕೆ ಏರಿಕೆ; ಯುಎಇಯಿಂದ ಕೇರಳಕ್ಕೆ ಬಂದಿದ್ದವನಲ್ಲಿ ಸೋಂಕು

Exit mobile version