Site icon Vistara News

ಟಿಎಂಸಿ ನಾಯಕನ ಮನೆಯಲ್ಲಿ ಸ್ಫೋಟ, ಮೂವರು ಸಾವು; ಎನ್​ಐಎ ತನಿಖೆಗೆ ಆಗ್ರಹಿಸಿದ ಬಿಜೆಪಿ

Explosion in TMC Leader House in West Bengal

ಕೋಲ್ಕತ್ತ: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರದಲ್ಲಿರುವ ತೃಣಮೂಲ ಕಾಂಗ್ರೆಸ್​​ ನಾಯಕ ರಾಜಕುಮಾರ್​ ಮನ್ನಾ ಎಂಬುವರ ಮನೆಯಲ್ಲಿ ಶನಿವಾರ ಮುಂಜಾನೆ ಸ್ಫೋಟ ಉಂಟಾಗಿದ್ದು, ಇದರಲ್ಲಿ ರಾಜಕುಮಾರ್​ ಸೇರಿ ಮೂವರು ಮೃತಪಟ್ಟಿದ್ದಾರೆ. ಹಾಗೇ, ಇಬ್ಬರು ಗಾಯಗೊಂಡಿದ್ದಾಗಿ ವರದಿಯಾಗಿದೆ. ರಾಜ್​ಕುಮಾರ್ ಅವರು ತೃಣಮೂಲ ಕಾಂಗ್ರೆಸ್​​ನ ಸ್ಥಳೀಯ ಅಧ್ಯಕ್ಷರಾಗಿದ್ದರು ಮತ್ತು ಬೂತ್​ ಅಧ್ಯಕ್ಷರೂ ಹೌದು.

ರಾಜ್​ಕುಮಾರ್ ಮನೆಯಲ್ಲಿ ಸ್ಫೋಟ ಉಂಟಾಗಿದ್ದಕ್ಕೆ ಕಾರಣ ಇನ್ನೂ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಅವರು ಇಂದು ಇಲ್ಲಿ ಸಾರ್ವಜನಿಕ ಸಭೆ ನಡೆಸುವವರು ಇದ್ದರು. ಅದಕ್ಕೂ ಮುನ್ನವೇ ಮನೆಯಲ್ಲಿ ಸ್ಫೋಟವಾಗಿದೆ. ಯಾರಾದರೂ ಹೊರಗಿನವರು ಬಾಂಬ್​ ಎಸೆದಿರುವ ಶಂಕೆಯೂ ವ್ಯಕ್ತವಾಗಿದೆ.

ಎನ್​ಐಎ ತನಿಖೆಗೆ ಆಗ್ರಹಿಸಿದ ಬಿಜೆಪಿ
ತೃಣಮೂಲ ಕಾಂಗ್ರೆಸ್​ ನಾಯಕನ ಮನೆಯಲ್ಲಿ ಸ್ಫೋಟವಾದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹ ಮಾಡಿದೆ. ಬಿಜೆಪಿ ಶಾಸಕ, ಪಶ್ಚಿಮ ಬಂಗಾಳ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ, ‘ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರದ ಭಾಗನ್​​ಪುರ ಎರಡನೇ ಬ್ಲಾಕ್​​ನಲ್ಲಿರುವ ಟಿಎಂಸಿ ನಾಯಕನ ಮನೆಯಲ್ಲಿ ಸ್ಫೋಟವಾಗಿ, ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಈ ಮನೆ ಟಿಎಂಸಿ ನಾಯಕ ರಾಜ್​ಕುಮಾರ್ ಮನ್ನಾರದ್ದು. ಅವರು ಮನೆಯಲ್ಲೇ ಬಾಂಬ್​ ತಯಾರಿಕೆ ಮಾಡುತ್ತಿದ್ದರು. ಅದೇ ಬಾಂಬ್​ ಈಗ ಸ್ಫೋಟವಾಗಿದೆ. ಎನ್​ಐಎ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್​​ ಪಕ್ಷಕ್ಕೆ ಮುಜುಗರ ತರುವ ಫೋಟೋಗಳು ವೈರಲ್

Exit mobile version