Site icon Vistara News

ಪ್ರವಾದಿ ಮೊಹಮ್ಮದ್​ಗೆ ಅವಹೇಳನ; ತೆಲಂಗಾಣ ಬಿಜೆಪಿ ಶಾಸಕ ಬಂಧನ

Telangana BJP MLA T Raja Singh

ಹೈದರಾಬಾದ್​: ಪ್ರವಾದಿ ಮೊಹಮ್ಮದ್​ ವಿರುದ್ಧ ಮಾತನಾಡಿ ಬಿಜೆಪಿ ಮಾಜಿ ವಕ್ತಾರೆ ನೂಪುರ್​ ಶರ್ಮಾ ಎಷ್ಟು ಸಂಕಷ್ಟಕ್ಕೀಡಾಗಿದ್ದಾರೆ ಎಂಬುದನ್ನು ನೋಡಿದ್ದೇವೆ. ಅವರ ವಿರುದ್ಧ ಹಲವು ಕೇಸ್​​ಗಳು ದಾಖಲಾಗಿದ್ದು ಒಂದೆಡೆಯಾದರೆ, ನೂಪುರ್​ಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದು ಇನ್ನೊಂದೆಡೆ. ಈ ಮಧ್ಯೆ ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್​​ (Telangana BJP MLA T Raja Singh)ಕೂಡ ಇದೇ ಕೇಸ್​​ನಲ್ಲಿ ಸಿಲುಕಿದ್ದಾರೆ. ಪ್ರವಾದಿ ಮೊಹಮ್ಮದ್​​ ಬಗ್ಗೆ ಅವಹೇಳನ ಮಾಡಿದ ರಾಜಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಟಿ. ರಾಜಾ ಸಿಂಗ್ ಘೋಶಾಮಹಲ್​ ಕ್ಷೇತ್ರದ ಶಾಸಕನಾಗಿದ್ದು, ಅವರು ​ ಪ್ರವಾದಿ ಬಗ್ಗೆ ಅವಹೇಳನ ಮಾಡಿದ ವಿಡಿಯೋ ವೈರಲ್​ ಆಗಿತ್ತು. ಅದರ ಬೆನ್ನಲ್ಲೇ ಸೋಮವಾರ ರಾತ್ರಿ ಹೈದರಾಬಾದ್​ನ ಪೊಲೀಸ್​ ಆಯುಕ್ತ ಸಿವಿ ಆನಂದ್​ ಕಚೇರಿ ಎದುರು, ದಬೀರ್​​ಪುರ, ಭವಾನಿನಗರ್​, ರೇನ್‌ಬಜಾರ್ ಮತ್ತು ಮಿರ್‌ಚೌಕ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆದಿತ್ತು. ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ರಾಜಾ ಸಿಂಗ್​​ರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ದಬೀರ್​ಪುರ ಠಾಣೆಯಲ್ಲಿ ಈಗ ರಾಜಾ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿತ್ತು. ಇದೀಗ ಅವರನ್ನು ಅರೆಸ್ಟ್ ಮಾಡಲಾಗಿದೆ.

ಕಾಮಿಡಿಯನ್​ ಮುನಾವರ್​ ಫಾರೂಕಿಗೂ ರಾಜಾ ಸಿಂಗ್​ ಬೆದರಿಕೆ ಒಡ್ಡಿದ್ದರು. ಹೈದರಾಬಾದ್​ನಲ್ಲಿ ಮುನಾವರ್​ ಕಾರ್ಯಕ್ರಮವನ್ನು ಆಗಸ್ಟ್​ 20ರಂದು ಆಯೋಜಿಸಲಾಗಿತ್ತು. ಆದರೆ ಅದನ್ನು ತಡೆಯಲು ರಾಜಾ ಸಿಂಗ್​ ಮತ್ತು ಅವರ ಸಹಚರರು ತುಂಬ ಪ್ರಯತ್ನಿಸಿದ್ದರು. ‘ಮುನಾವರ್ ಫಾರೂಕಿ ಹಿಂದು ದೇವರು-ದೇವತೆಗಳನ್ನು ಅಪಹಾಸ್ಯ ಮಾಡುತ್ತಾನೆ. ಹಾಗಾಗಿ ಆತನ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ. ಮುನಾವರ್​ ಸಮಾರಂಭ ನಡೆಯುವ ಸ್ಥಳಕ್ಕೆ ಬೆಂಕಿ ಹಚ್ಚುತ್ತೇವೆ’ ಎಂದೂ ಇವರು ಬೆದರಿಕೆ ಒಡ್ಡಿದ್ದರು. ಅವರು ಹೀಗೆ ಬೆದರಿಕೆ ಹಾಕಿದ ವಿಡಿಯೋಗಳನ್ನೂ ಸೋಷಿಯಲ್​ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದರು. ಆಗ ಮುನ್ನೆಚ್ಚರಿಕೆ ಕ್ರಮವಾಗಿ ರಾಜಾ ಮತ್ತು ಅವರ ನಾಲ್ವರು ಸಹಚರರನ್ನು ಕಸ್ಟಡಿಗೆ ಕರೆದುಕೊಂಡು ಹೋಗಲಾಗಿತ್ತು. ಅಂದಹಾಗೇ, ಆ ಕಾರ್ಯಕ್ರಮ ನಿಗದಿತ ದಿನದಂದು ಯಶಸ್ವಿಯಾಗಿ ನಡೆದಿದೆ.

ಇದನ್ನೂ ಓದಿ: ISIS terror | ರಷ್ಯದಲ್ಲಿ ಸಿಕ್ಕಿಬಿದ್ದ ಐಸಿಸ್‌ ಉಗ್ರನಿಗೆ ಆನ್‌ಲೈನ್‌ನಲ್ಲೇ ತರಬೇತಿ, ನೂಪುರ್‌ ಶರ್ಮಾ ಕೊಲ್ಲಲು ಸ್ಕೆಚ್‌

Exit mobile version