Site icon Vistara News

ರಾಜಸ್ಥಾನ ಮುಖ್ಯಮಂತ್ರಿಯನ್ನು ರಾವಣ ಎಂದು ಕರೆದ ಕೇಂದ್ರ ಸಚಿವರ ವಿರುದ್ಧ ಎಫ್​ಐಆರ್​ ದಾಖಲು

FIR Against Union Minister Gajendra Shekhawat Over Ravana Remark

#image_title

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರನ್ನು ‘ರಾವಣ’ ಎಂದು ಕರೆದಿದ್ದ ಕೇಂದ್ರ ಜಲ ಶಕ್ತಿ ಇಲಾಖೆ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ರಾಜಸ್ಥಾನ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಸುರೇಂದ್ರ ಸಿಂಗ್​ ಅವರು ಚಿತ್ತೋರ್​ಗಢ್​ ಜಿಲ್ಲೆಯ ಪೊಲೀಸ್​ ಸ್ಟೇಶನ್​ನಲ್ಲಿ ಗಜೇಂದ್ರ ಸಿಂಗ್ ಶೇಖಾವತ್​ ವಿರುದ್ಧ ದೂರು ದಾಖಲಿಸಿದ್ದರು. ಕೇಂದ್ರ ಸಚಿವರು ಮುಖ್ಯಮಂತ್ರಿಗೆ ಅವಹೇಳನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ಚಿತ್ತೋರ್​ಗಢ್​​ನಲ್ಲಿ ನಡೆದ ಬಿಜೆಪಿ ಜನಾಕ್ರೋಶ ಸಭೆಯಲ್ಲಿ ಮಾತನಾಡಿದ್ದ ಗಜೇಂದ್ರ ಸಿಂಗ್​ ಶೇಖಾವತ್, ‘ರಾವಣನಿಗೆ 10 ತಲೆಗಳಿವೆ. ಅದರಂತೆಯೇ ರಾಜಸ್ಥಾನ ಸರ್ಕಾರ ಮತ್ತು ಇಲ್ಲಿನ ರಾಜಕಾರಣದ ರಾವಣನಿಗೂ 10 ತಲೆಗಳಿವೆ. ಮಾಫಿಯಾ ರಾಜ್ಯ ಮತ್ತು ಗೂಂಡಾ ರಾಜ್ಯವನ್ನು ಈ ಸರ್ಕಾರ ಪೋಷಿಸುತ್ತಿದೆ. ಇದು ಸುಲಿಗೆ ಮಾಡುವವರ, ನಿರುದ್ಯೋಗ ಸೃಷ್ಟಿಸುವವರ, ವಿಶ್ವಾಸದ್ರೋಹ ಹರಡುವವರ ಸರ್ಕಾರ. ರಾಜಸ್ಥಾನದಲ್ಲಿ ಈ ರಾವಣನ ರಾಜಕೀಯವನ್ನು ಕೊನೆಗೊಳಿಸಿ, ರಾಮರಾಜ್ಯ ಸ್ಥಾಪಿಸಬೇಕು. ಯಾರಿಗೆಲ್ಲ ಈ ರಾವಣನ ಆಡಳಿತ ಕೊನೆಗೊಳಿಸಬೇಕು ಎಂದಿದೆಯೋ ಅವರು ಕೈಯೆತ್ತಿ’ ಎಂದು ಹೇಳಿದ್ದರು. ಹೀಗೆ ರಾಜಸ್ಥಾನ ಮುಖ್ಯಮಂತ್ರಿಯನ್ನು ರಾವಣನಿಗೆ ಹೋಲಿಸಿದ ಶೇಖಾವತ್​​ ವಿರುದ್ಧ ಕಾಂಗ್ರೆಸ್​ ನಾಯಕ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ:Rajasthan Budget: ವಿಧಾನಸಭೆಯಲ್ಲಿ ಹಳೇ ಬಜೆಟ್​ ಓದಿ ಎಡವಟ್ಟು ಮಾಡಿಕೊಂಡ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​!

ಇನ್ನು ಗಜೇಂದ್ರ ಶೇಖಾವತ್​ ಹೇಳಿಕೆಗೆ ತಿರುಗೇಟು ನೀಡಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್, ‘ಗಜೇಂದ್ರ ಶೇಖಾವತ್​ ಅವರು ನನ್ನನ್ನು ರಾವಣ ಎಂದಿದ್ದಾರೆ. ರಾವಣ ಆಡಳಿತವನ್ನು ಕೊನೆಯಾಗಿಸಬೇಕು ಎಂದಿದ್ದಾರೆ. ಒಳ್ಳೇದಾಗಲಿ, ನಾನಿದನ್ನು ಸ್ವಾಗತಿಸುತ್ತೇನೆ. ನಾನು ರಾವಣನೇ ಎಂದಿಟ್ಟುಕೊಳ್ಳೋಣ. ಹಾಗಿದ್ದ ಮೇಲೆ ನೀವು ಮರ್ಯಾದಾ ಪುರುಷೋತ್ತಮ ರಾಮನಾಗಿ. ಬಡವರಿಗೆ ಅವರ ಹಣವನ್ನು ತಿರುಗಿಸಿ ಕೊಡಿ’ ಎಂದಿದ್ದರು.

Exit mobile version