Site icon Vistara News

Punjab Golden Temple: ಬಾತ್​ ರೂಮ್​​ನಿಂದ ಸ್ಫೋಟಕ ಎಸೆದ ದಂಪತಿ; ಐವರನ್ನು ಬಂಧಿಸಿದ ಪೊಲೀಸ್​​

Five arrested link To Punjab Golden Temple Blast

#image_title

ಪಂಜಾಬ್​ನ ಗೋಲ್ಡನ್​ ಟೆಂಪಲ್​ (Punjab Golden Temple)ಬಳಿ ಮೂರು ಬಾರಿ ಸ್ಫೋಟವಾಗಿದೆ. ಒಂದು ವಾರದಲ್ಲಿ ಇಂದು ಮೂರನೇ ಬಾರಿಗೆ ಸ್ಫೋಟವಾಗಿದ್ದು ಆತಂಕಕ್ಕೆ ಕಾರಣವಾಗಿದೆ ಮತ್ತು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಗುರುವಾರ ತಡರಾತ್ರಿ 12.30ರ ಹೊತ್ತಿಗೆ ಸ್ವರ್ಣ ಮಂದಿರದ ಬಳಿ ಸ್ಫೋಟವಾದ ಬೆನ್ನಲ್ಲೇ, ಈ ಘಟನೆಯಲ್ಲಿ ಕೈವಾಡ ಇರುವ ಅನುಮಾನದಡಿ ಐವರನ್ನು ಬಂಧಿಸಲಾಗಿದೆ. ಈ ಮೂರು ಸ್ಫೋಟಗಳ ಹಿಂದಿನ ಉದ್ದೇಶ ಕೇವಲ ಶಾಂತಿಯನ್ನು ಕದಡುವುದು ಎಂದು ಪಂಜಾಬ್​ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

ಮೇ 6 ಮತ್ತು 8ರಂದು ಒಂದರ ಬೆನ್ನಿಗೆ ಒಂದರಂತೆ ಸ್ಫೋಟ ನಡೆದಿತ್ತು. ಸ್ವರ್ಣ ಮಂದಿರದ ಸಮೀಪದಲ್ಲಿರುವ ಒಂದು ಪಾರ್ಕಿಂಗ್ ಸ್ಥಳದ ಬಳಿಯೇ ಎರಡೂ ಸ್ಫೋಟಗಳು ಆಗಿದ್ದವು. ಹೀಗೆ ಮೂರು ಸ್ಫೋಟಗಳಾದ ಬೆನ್ನಲ್ಲೇ ಶಿರೋಮಣಿ ಗುರುದ್ವಾರ ಪರಬಂಧಕ್​ ಸಮಿತಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಮಿ ಅವರು ಪಂಜಾಬ್ ಸರ್ಕಾರವನ್ನು ದೂಷಿಸಿದ್ದಾರೆ. ಎರಡು ಸ್ಫೋಟವಾಗಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಸರಿಯಾದ ಕ್ರಮ ವಹಿಸಲಿಲ್ಲ. ಹೀಗಾಗಿಯೇ ಮೂರನೇ ಸ್ಫೋಟವಾಯಿತು. ಗುರು ರಾಮದಾಸ್​ ಸೇರಾಯಿಯಲ್ಲಿ ವಾಸವಾಗಿರುವ ಒಂದು ನವದಂಪತಿ ಮತ್ತು ಇನ್ನೊಬ್ಬನನ್ನು ಗುರುದ್ವಾರದ ಸೆಕ್ಯೂರಿಟಿ ಸ್ಕ್ವಾಡ್​​ನವರು ವಶಕ್ಕೆ ಪಡೆದು, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂರೂ ಸ್ಫೋಟದ ಹಿಂದೆಯೂ ಇವರ ಕೈವಾಡ ಇದೆ. ಆ ದಂಪತಿ ಅವರು ಉಳಿದುಕೊಂಡಿರುವ 224 ನಂಬರ್​​ನ ಕೋಣೆಯ ಬಾತ್​ರೂಮ್​​ನಿಂದ ಸ್ಫೋಟಕವನ್ನು ಹೊರಗೆ ಎಸೆದಿದ್ದಾರೆ. ಪೊಲೀಸರು ಆ ಕೋಣೆಯಿಂದ ಕೆಲವು ಕೈಬರಹದ ಪತ್ರಗಳನ್ನು, ಪಟಾಕಿಯಂಥ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧ್ಯಕ್ಷ ಹರ್ಜಿಂದರ್ ಸಿಂಗ್​ ತಿಳಿಸಿದ್ದಾರೆ. ಇನ್ನು ಇದು ಮೂರು ಘಟನೆಗೆ ಉಗ್ರ ಲಿಂಕ್ ಇಲ್ಲ ಎಂದು ಈಗಾಗಲೇ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದಾಗ್ಯೂ ಅದೊಂದು ಆಯಾಮದಲ್ಲಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Golden Temple: ಪಂಜಾಬ್ ಸ್ವರ್ಣಮಂದಿರದ ಬಳಿ ಮತ್ತೊಂದು ಸ್ಫೋಟ; ಸ್ಥಳದಲ್ಲಿ ಆತಂಕ

ಮೇ 6ರಂದು ಮೊದಲ ಸ್ಫೋಟ ನಡೆದಾಗ ಅದು ಗ್ಯಾಸ್ ಲೀಕ್​​ನಿಂದ ಆಗಿದ್ದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು. ಅಂದು ಸುತ್ತಲೂ ಇರುವ ಕೆಲವು ಕಟ್ಟಡಗಳಿಗೆ ಹಾನಿಯಾಗಿತ್ತು. ಅದಾಗಿ ಒಂದು ದಿನದ ನಂತರ ಮೇ 8ರಂದು ಮತ್ತೆ ಸ್ಫೋಟವಾದಾಗ ಪೊಲೀಸರು ಮತ್ತಷ್ಟು ಬಿರುಸಾಗಿ ತನಿಖೆ ನಡೆಸಿದ್ದರು. ಈಗ ಮೂರನೇ ಸ್ಫೋಟವಾದಾಗ ಸ್ಥಳೀಯರು ತಿರುಗಿಬಿದ್ದಿದ್ದಾರೆ. ಗೋಲ್ಡನ್​ ಟೆಂಪಲ್​ ಪ್ರವೇಶ ದ್ವಾರದಲ್ಲಿ ಒಂದು ಸ್ಕ್ಯಾನರ್​ ಅಳವಡಿಸಬೇಕು ಎಂದು ಶಿರೋಮಣಿ ಗುರುದ್ವಾರ ಪರಬಂಧಕ್​ ಸಮಿತಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಮಿ ಒತ್ತಾಯಿಸಿದ್ದಾರೆ.

Exit mobile version