Site icon Vistara News

Ghulam Nabi Azad | ಕಾಶ್ಮೀರದಲ್ಲಿ ಸಕ್ರಿಯರಾದ ಗುಲಾಂ ನಬಿ ಆಜಾದ್​​ರಿಗೆ ಉಗ್ರರಿಂದ ಜೀವ ಬೆದರಿಕೆ

Ghulam Nabi Azad gets threat from The Resistance Front terror outfit

ಶ್ರೀನಗರ: ಕಾಂಗ್ರೆಸ್​ ತೊರೆದು ಈಗ ಜಮ್ಮು-ಕಾಶ್ಮೀರಕ್ಕೆ ಹೋಗಿ ಅಲ್ಲಿ ಹೊಸದಾದ ರಾಜಕೀಯ ಪಕ್ಷವನ್ನು ಕಟ್ಟಲು ನಿರ್ಧಾರ ಮಾಡಿರುವ ಗುಲಾಂ ನಬಿ ಆಜಾದ್​​ಗೆ ಉಗ್ರರಿಂದ ಜೀವ ಬೆದರಿಕೆ ಎದುರಾಗಿದೆ. ಗುಲಾಂ ನಬಿ ಆಜಾದ್​ ಅವರು ಹೊಸದಾದ ರಾಷ್ಟ್ರೀಯ ಪಕ್ಷವನ್ನು ಹುಟ್ಟುಹಾಕಲು ನಿರ್ಧರಿಸಿದ್ದು, ಅದರ ಮೊದಲ ಘಟಕವನ್ನು ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ನೂತನ ಪಕ್ಷ ಪ್ರಾರಂಭದ ಭಾಗವಾಗಿ ಮಿಷನ್​ ಕಾಶ್ಮೀರ್​ ಶುರುವಿಟ್ಟುಕೊಂಡಿದ್ದು ಅಲ್ಲಿ ಸಾರ್ವಜನಿಕ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಱಲಿಗಳನ್ನು ಆಯೋಜಿಸುತ್ತಿದ್ದಾರೆ.

ಹೀಗೆ ಕಾಶ್ಮೀರದಲ್ಲಿ ಸಕ್ರಿಯವಾದ ಅವರಿಗೆ ಅವರಿಗೆ ಲಷ್ಕರೆ ತೊಯ್ಬಾ ಉಗ್ರ ಸಂಘಟನೆಯ ಅಂಗ ಸಂಘಟನೆಯಾದ ರೆಸಿಸ್ಟೆನ್ಸ್​​​ ಫ್ರಂಟ್​ ಉಗ್ರ ಸಂಘಟನೆ ಜೀವ ಬೆದರಿಕೆಯನ್ನೊಡ್ಡಿದೆ. ಗುಲಾಂ ನಬಿ ಆಜಾದ್​​ಗೆ ಬೆದರಿಕೆ ಹಾಕಿದ ಪೋಸ್ಟರ್​​ಗಳು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿವೆ. ಸದ್ಯ ಗುಲಾಂ ನಬಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಾಶ್ಮೀರದಲ್ಲಿ 2019ರಲ್ಲಿ ವಿಶೇಷ ಸ್ಥಾನಮಾನ ತೆಗೆದ ಬಳಿಕ ಹುಟ್ಟಿಕೊಂಡಿದ್ದು ಈ ರೆಸಿಸ್ಟೆನ್ಸ್​ ಫ್ರಂಟ್​. ಕಾಶ್ಮೀರದಲ್ಲಿ ಸಕ್ರಿಯವಾಗಿ ಹೋರಾಟ ನಡೆಸಲು ಲಷ್ಕರೆ ತೊಯ್ಬಾ ನಾಯಕರೇ ಈ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. 2020ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ ನಡೆದ ಹಲವು ದಾಳಿಗಳಲ್ಲಿ ಈ ‘ದಿ ರೆಸಿಸ್ಟೆನ್ಸ್​ ಫ್ರಂಟ್​ (TRF)’ ಪಾತ್ರವಿದೆ.

ಟಿಆರ್​ಎಫ್​ ಹೇಳೋದೇನು?
ಸಾಮಾಜಿಕ ಜಾಲತಾಣದಲ್ಲಿ ಗುಲಾಂ ನಬಿ ಆಜಾದ್​ಗೆ ಬೆದರಿಕೆ ಹಾಕಿರುವ ದಿ ರೆಸಿಸ್ಟೆನ್ಸ್ ಫ್ರಂಟ್​ ಉಗ್ರ ಸಂಘಟನೆ ‘ಗುಲಾಂ ನಬಿ ಆಜಾದ್​​ ಇತ್ತೀಚೆಗೆ ಕಾಂಗ್ರೆಸ್​ ತೊರೆದು, ಜಮ್ಮು-ಕಾಶ್ಮೀರ ರಾಜಕೀಯಕ್ಕೆ ಪ್ರವೇಶ ಮಾಡಿರುವದರ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡ ಇದೆ. ಇವೆಲ್ಲ ಬದಲಾವಣೆಗಳೂ ಕೇಂದ್ರ ಸರ್ಕಾರದ ಕಾರ್ಯಕತಂತ್ರಗಳೇ ಆಗಿವೆ. ಗುಲಾಂ ನಬಿ ಆಜಾದ್​ ಕಾಂಗ್ರೆಸ್ ತೊರೆಯುವುದಕ್ಕೂ ಮೊದಲು ಅವರು ಗೃಹ ಸಚಿವ ಅಮಿತ್​ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ರನ್ನು ಭೇಟಿಯಾಗಿದ್ದಾರೆ. ಅವರೊಬ್ಬ ಬಿಜೆಪಿಯ ಏಜೆಂಟ್​. ಅಷ್ಟೇ ಅಲ್ಲ, ಬಿಜೆಪಿ ತನ್ನ ರಾಜಕೀಯಕ್ಕಾಗಿ, ಇಲ್ಲಿಂದ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದೆ.

ರಾಹುಲ್​ ಭಟ್​​ನನ್ನು ಕೊಂದಿದ್ದೇಕೆ?
ಇತ್ತೀಚೆಗೆ ಹತ್ಯೆಯಾದ ರಾಹುಲ್​ ಭಟ್​ ಬಗ್ಗೆಯೂ ಟಿಆರ್​ಎಫ್​ ತನ್ನ ಸೋಷಿಯಲ್​ ಮೀಡಿಯಾ ಪೋಸ್ಟರ್​​ನಲ್ಲಿ ಉಲ್ಲೇಖ ಮಾಡಿದೆ. ರಾಹುಲ್​ ಭಟ್​ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ, ಆತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಜತೆ ನೇರ ಸಂಪರ್ಕದಲ್ಲಿದ್ದ ಎಂಬ ಬಗ್ಗೆ ನಮ್ಮ ಗುಪ್ತಚರ ಸಿಬ್ಬಂದಿ ಮಾಹಿತಿ ನೀಡಿದ್ದರು. ಇನ್ನೊಬ್ಬ ಕಾಶ್ಮೀರಿ ಹಿಂದುವನ್ನು ಕೊಲ್ಲಲೂ ಇದೇ ಕಾರಣ ಎಂದು ಹೇಳಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ಇನ್ನೆಂದೂ ಸ್ಥಾಪಿತವಾಗದು ಎಂದ ಗುಲಾಂ ನಬಿ ಆಜಾದ್​

Exit mobile version