Site icon Vistara News

Ghulam Nabi Azad | ಕಾಂಗ್ರೆಸ್​​ ತೊರೆದ ಗುಲಾಂ ನಬಿ ಆಜಾದ್; ರಾಹುಲ್​ ಗಾಂಧಿ ಅಪ್ರಬುದ್ಧ ಎಂದ ಹಿರಿಯ ನಾಯಕ

Gulam Nabi Azad

ನವ ದೆಹಲಿ: ಕಾಂಗ್ರೆಸ್​ನ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್​ನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಇತ್ತೀಚೆಗೆ ಜಮ್ಮು-ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷನ ಸ್ಥಾನವನ್ನು ಅವರಿಗೆ ವಹಿಸಲಾಗಿತ್ತು. ಆದರೆ ಹುದ್ದೆಗೆ ಏರಿದ ಕೆಲವೇ ಹೊತ್ತಲ್ಲಿ ರಾಜೀನಾಮೆ ಕೊಟ್ಟಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವವನ್ನೇ ತೊರೆದಿದ್ದಾರೆ.

ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಗುಲಾಂ ನಬಿ ಆಜಾದ್​, ‘ಕಾಂಗ್ರೆಸ್​​ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಹೊಗಳುಭಟ್ಟರು, ಅನನುಭವಿಗಳು ಹೆಚ್ಚಾಗುತ್ತಿದ್ದಾರೆ. ಈ ವಾತಾವರಣ ಹಿಂಸೆ ತರುತ್ತಿದೆ’ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ರಾಹುಲ್​ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್​​ನ ರಾಜಕೀಯ ಪ್ರಭಾವ ತಗ್ಗುತ್ತಿರುವುದಕ್ಕೆ, ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವುದಕ್ಕೆ ರಾಹುಲ್​ ಗಾಂಧಿ ಅಪ್ರಬುದ್ಧತೆಯೇ ಕಾರಣ ಎಂದಿದ್ದಾರೆ.

‘ರಾಹುಲ್​ ಗಾಂಧಿಯವರದ್ದು ಅಪ್ರಬುದ್ಧತೆ. ಶಿಕ್ಷೆಗೊಳಗಾದ ಶಾಸಕರು ಅಧಿಕಾರದಲ್ಲಿ ಮುಂದುವರಿಯುವಂತಿಲ್ಲ ಎಂಬ ಸುಪ್ರೀಂಕೋರ್ಟ್​ನ ಆದೇಶವನ್ನು ನಿರಾಕರಿಸಿ, ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಯ ಪ್ರತಿಯನ್ನು ಮಾಧ್ಯಮಗಳ ಎದುರು ಹರಿದುಹಾಕಿದ್ದು ಅವರ ಬಾಲಿಶ ವರ್ತನೆಗೆ ಜ್ವಲಂತ ಉದಾಹರಣೆ. ಇದು ಅಂದಿನ ಪ್ರಧಾನಿ ಮನಮೋಹನ್​ ಸಿಂಗ್​ ಮತ್ತು ಇಡೀ ಕೇಂದ್ರ ಸರ್ಕಾರಕ್ಕೆ ಮುಜುಗರ ತಂದಿಟ್ಟಿತು. ಅಷ್ಟೇ ಅಲ್ಲ, 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತೀವ್ರ ಹಿನ್ನಡೆಯಾಗಲು ಇದೂ ಒಂದು ಮುಖ್ಯ ಕಾರಣವಾಯಿತು’ ಎಂದೂ ತಮ್ಮ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪ್ರಮುಖ ಹುದ್ದೆಗೆ ನೇಮಕವಾದ ಒಂದೇ ತಾಸಲ್ಲಿ ರಾಜೀನಾಮೆ ಕೊಟ್ಟ ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​

Exit mobile version