Site icon Vistara News

Shiv Sena : ತಾಕತ್ತು ಇದ್ದರೆ ಜಾವೇದ್​ ಅಖ್ತರ್​ ರೀತಿ ಪಾಕ್ ​ನೆಲದಲ್ಲಿ ಅವರಿಗೇ ಸವಾಲು ಹಾಕಿ; ಬಿಜೆಪಿಗೆ ಉದ್ಧವ್​​ ಠಾಕ್ರೆ ಸವಾಲು

Uddhav Thackeray

ಮುಂಬಯಿ: ನಿಮಗೆ 56 ಇಂಚಿನ ಎದೆ ಇರುವುದು ಹೌದಾದರೆ ಜಾವೇದ್​ ಅಖ್ತರ್ ಅವರಂತೆ ಪಾಕಿಸ್ತಾನದ ನೆಲಕ್ಕೆ ಹೋಗಿ ಅಲ್ಲಿನ ಭಯೋತ್ಪಾದನ ಚಟುವಿಕೆಯನ್ನು ಪ್ರಶ್ನಿಸಿ ಎಂಬುದಾಗಿ ಶಿವಸೇನೆ (Shiv Sena) ನಾಯಕ ಉದ್ಧವ್​ ಠಾಕ್ರೆ ಬಿಜೆಪಿಗೆ ಸವಾಲು ಎಸೆದಿದ್ದಾರೆ. ತಮ್ಮ ಪಕ್ಷದ ಮುಖವಾಣಿ (ಪತ್ರಿಕೆ) ಸಾಮ್ನಾದ ಸಂಪಾದಕೀಯದಲ್ಲಿ ಅವರು ಬಿಜೆಪಿ ನಾಯಕರ ದೇಶ ಭಕ್ತಿಯ ಹಾಗೂ ಪಾಕ್​ ವಿರೋಧಿ ನಿಲುವನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಲಾಹೋರ್​ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಲ್ಲಿನ ಸರಕಾರದ ಭಯೋತ್ಪಾದಕ ಪರ ನಿಲುವನ್ನು ಖಂಡಿಸಿದ ಚಿತ್ರ ಸಾಹಿತಿ ಜಾವೇದ್ ಅಖ್ತರ್​ ಅವರನ್ನು ಹೊಗಳಿದ್ದಾರೆ.

ಗುಸ್​ಕೆ ಮಾರೇಂಗೆ (ನುಗ್ಗಿ ಹೊಡಿತೇವೆ), ಸರ್ಜಿಕಲ್​ ಸ್ಟ್ರೈಕ್​ ಎಂಬ ಪದಗಳನ್ನು ಬಳಸಿಕೊಂಡು ರಾಜಕೀಯ ಮಾಡುವುದು ಧೈರ್ಯವಲ್ಲ. ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಸರಕಾರವನ್ನು ನೀವು ಭಯೋತ್ಪಾದನೆಗೆ ಬೆಂಬಲ ಕೊಡುತ್ತಿದ್ದೀರಿ ಎಂದು ಪ್ರಶ್ನಿಸುವುದು ಧೈರ್ಯ ಎಂಬುದಾಗಿ ಉದ್ಧವ್​ ಠಾಕ್ರೆ ಹೇಳಿದ್ದಾರೆ. ಜಾವೆದ್ ಅಖ್ತರ್​ ಅವರದ್ದು ನಿಜವಾದ ದೇಶ ಭಕ್ತಿ ಹಾಗೂ ಧೈರ್ಯ ಎಂಬುದಾಗಿ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಶಿವಸೇನಾ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್​ ರಾವತ್ ಕೂಡ ಜಾವೇದ್ ಅಖ್ತರ್ ಅವರ ಧೈರ್ಯವನ್ನು ಕೊಂಡಾಡಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಕೂಡ ಜಾವೇದ್​ ಅಖ್ತರ್​ಗೆ ಪ್ರಶಂಸೆ ಸಲ್ಲಿಸಬೇಕು ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ : Uddhav Thackeray: ‘ರಾಮನ ಬಾಣ ರಾವಣನ ಕೈಯಲ್ಲಿರುವುದು ಭೂಷಣ ಅಲ್ಲ’, ಉದ್ಧವ್‌ ಠಾಕ್ರೆ ವ್ಯಂಗ್ಯ

ಭಾರತದಲ್ಲಿ ಹಿಂದೂ- ಮುಸ್ಲಿಮ್ ಹಾಗೂ ಭಾರತ – ಪಾಕಿಸ್ತಾನ ಎಂಬುದು ರಾಜಕೀಯ ವಿಷಯವಾಗಿದೆ. ಗೋಮಾಂಸದ ಹೆಸರಿನಲ್ಲಿಯೇ ಹಲ್ಲೆಗಳು ನಡೆಯುತ್ತಿವೆ. ಆದರೆ, ಬಿಜೆಪಿಯ ನಾಯಕರು ಗೋಮಾಂಸ ತಿನ್ನುವುದಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂಬುದಾಗಿ ಸಂಪಾದಕೀಯದಲ್ಲಿ ಬಿಜೆಪಿಯನ್ನು ಟೀಕೆ ಮಾಡಲಾಗಿದೆ.

Exit mobile version