Site icon Vistara News

Independence Day 2024: ಹೊಸ ದಾಖಲೆ ಸೃಷ್ಟಿಸಿದೆ ಕೆಂಪುಕೋಟೆಯಲ್ಲಿನ ಮೋದಿ ಭಾಷಣದ ಅವಧಿ!

Independence Day 2024

ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ (Prime minister) ದಾಖಲೆ ಬರೆದಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಬಾರಿಯ ಸ್ವಾತಂತ್ರ್ಯ ದಿನದ (Independence Day 2024) ಭಾಷಣದಲ್ಲಿಯೂ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು (Jawaharlal Nehru) ಮತ್ತು ಇಂದಿರಾ ಗಾಂಧಿಯವರ (Indira Gandhi) ಅನಂತರ ಕೆಂಪು ಕೋಟೆಯಲ್ಲಿ ಸತತ 11 ಸ್ವಾತಂತ್ರ್ಯ ದಿನದ ಭಾಷಣ ಮಾಡಿರುವ ಮೂರನೇ ಭಾರತೀಯ ಪ್ರಧಾನಿಯಾದ ಅವರು, ತಮ್ಮ 11 ನೇ ಭಾಷಣವನ್ನು ಸುದೀರ್ಘವಾಗಿ ನಡೆಸಿದ ದಾಖಲೆ ನಿರ್ಮಿಸಿದರು.

ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು 98 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ಇದು ಅವರ 2016ರ ಭಾಷಣದ ದಾಖಲೆಯಾಗಿದ್ದ ಹಿಂದಿನ 96 ನಿಮಿಷಗಳ ದಾಖಲೆಯನ್ನು ಮುರಿದಿದೆ. ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣಗಳು ಸರಾಸರಿ 82 ನಿಮಿಷಗಳು. ಇದು ಭಾರತದ ಇತಿಹಾಸದಲ್ಲೇ ಇತರ ಪ್ರಧಾನ ಮಂತ್ರಿಗಳಿಗಿಂತ ಹೆಚ್ಚು.

ನೆಹರೂ 72, ಗುಜ್ರಾಲ್ 71 ನಿಮಿಷದ ದಾಖಲೆ

ಮೋದಿಯವರಿಗಿಂತ ಮೊದಲು ಜವಾಹರಲಾಲ್ ನೆಹರು ಅವರು 72 ನಿಮಿಷಗಳ ಸುದೀರ್ಘ ಭಾಷಣವನ್ನು ಮಾಡಿದ್ದರು. ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರು 1997ರಲ್ಲಿ 71 ನಿಮಿಷಗಳ ಕಾಲ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ್ದರು.

ಚಿಕ್ಕ ಭಾಷಣ ಅವಧಿ

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ಅವರು 1954 ಮತ್ತು 1966 ರಲ್ಲಿ ಕ್ರಮವಾಗಿ 14 ನಿಮಿಷಗಳ ಅತಿ ಸಣ್ಣ ಭಾಷಣ ಮಾಡಿದರು. ಮೋದಿಯವರು 2017ರಲ್ಲಿ ಅತ್ಯಂತ ಚಿಕ್ಕ ಭಾಷಣ ಮಾಡಿದ್ದು, ಇದು 56 ನಿಮಿಷಗಳಾಗಿತ್ತು.

ಮೋದಿ ದಾಖಲೆ

ಮೋದಿಯವರ ಈ ಬಾರಿಯ 11ನೇ ಭಾಷಣ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಂಖ್ಯೆಯನ್ನು ಮೀರಿಸಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 10 ಸ್ವಾತಂತ್ರ್ಯ ದಿನದ ಭಾಷಣಗಳನ್ನು ಮಾಡಿದ್ದರು. ಭಾರತದ ಮೊದಲ ಪ್ರಧಾನಿ ನೆಹರೂ ಅವರು 17 ಬಾರಿ ನಿರಂತರವಾಗಿ ಸ್ವಾತಂತ್ರ್ಯ ದಿನದ ಭಾಷಣಗಳನ್ನು ಮಾಡಿದ ದಾಖಲೆಯನ್ನು ಹೊಂದಿದ್ದಾರೆ.

ಜನವರಿ 1966ರಿಂದ ಮಾರ್ಚ್ 1977ರವರೆಗೆ ಮತ್ತು ಅನಂತರ ಜನವರಿ 1980ರಿಂದ ಅಕ್ಟೋಬರ್ 1984ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಇಂದಿರಾ ಗಾಂಧಿ ಅವರು ಒಟ್ಟು 16 ಬಾರಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣಗಳನ್ನು ಮಾಡಿದ್ದರು.

ದೇಶದ ಪ್ರಧಾನಿಯವರ ಸ್ವಾತಂತ್ರ್ಯ ದಿನದ ಭಾಷಣದ ಅವಧಿಗೆ ಹೋಲಿಸಿದರೆ ಮೋದಿಯವರೇ ಅತಿ ಉದ್ದದ ಭಾಷಣ ಮಾಡಿರುವ ಪ್ರಧಾನಿಯಾಗಿದ್ದರೆ.


ಈ ಬಾರಿಯ ದಾಖಲೆಯ 98 ನಿಮಿಷ

ಈ ಬಾರಿಯ ತಮ್ಮ 98 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆಚರಣೆಗಳ ಥೀಮ್ ವಿಕಸಿತ ಭಾರತ್ 2047ರ ಕುರಿತು ಹೆಚ್ಚು ಬೆಳಕು ಚೆಲ್ಲಿದರು.

ವಿಕಸಿತ್ ಭಾರತ್ 2047 ಗಾಗಿ ನಾವು ದೇಶವಾಸಿಗಳಿಂದ ಸಲಹೆಗಳನ್ನು ಆಹ್ವಾನಿಸಿದ್ದೇವೆ. ನಾವು ಸ್ವೀಕರಿಸಿದ ಅನೇಕ ಸಲಹೆಗಳು ನಮ್ಮ ನಾಗರಿಕರ ಕನಸು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ರಾಷ್ಟ್ರದ ಜನರು ಅಂತಹ ದೊಡ್ಡ ಕನಸುಗಳನ್ನು ಹೊಂದಿರುವಾಗ, ಅದು ನಮ್ಮ ಆತ್ಮವಿಶ್ವಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ನಾವು ಹೆಚ್ಚು ದೃಢನಿಶ್ಚಯವನ್ನು ಹೊಂದಿದ್ದೇವೆ ಎಂದು ಹೇಳಿದರು.


ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಯ ವಿಷಯದ ಬಗ್ಗೆಯೂ ಮಾತನಾಡಿದ ಅವರು, ದೇಶ, ಸಮಾಜ, ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ವಿರುದ್ಧದ ಅಪರಾಧಗಳ ತ್ವರಿತ ತನಿಖೆ, ಈ ದೈತ್ಯಾಕಾರದ ಕಾರ್ಯಗಳನ್ನು ನಿರ್ವಹಿಸುವವರಿಗೆ ಆದಷ್ಟು ಬೇಗ ಕಠಿಣ ಶಿಕ್ಷೆಯನ್ನು ನೀಡಬೇಕು. ಇದು ಸಮಾಜದಲ್ಲಿ ಆತ್ಮವಿಶ್ವಾಸವನ್ನು ತುಂಬಲು ಮುಖ್ಯವಾಗಿದೆ ಎಂದು ತಿಳಿಸಿದರು.

ಇದು ದೇಶದ ಸುವರ್ಣ ಯುಗ ಎಂದು ಘೋಷಿಸಿದ ಪ್ರಧಾನಮಂತ್ರಿ ಮೋದಿ ಅವರು, ವಿವಿಧ ಕ್ಷೇತ್ರಗಳಾದ್ಯಂತ ಅಭಿವೃದ್ಧಿ, ಆರ್ಥಿಕ ಸುಧಾರಣೆ ಮತ್ತು ದೇಶದ ಯುವಜನರಿಗೆ ಭರವಸೆಗಳನ್ನು ನೀಡುವ ಹಲವಾರು ಯೋಜನೆಗಳನ್ನು ವಿವರಿಸಿದರು.

ಇದನ್ನೂ ಓದಿ: Independence Day 2024: ಜಾತ್ಯಾತೀತ ನಾಗರಿಕ ಸಂಹಿತೆ ಜಾರಿಯಾದರೆ ಮಾತ್ರ ತಾರತಮ್ಯದಿಂದ ಮುಕ್ತಿ; ಪ್ರಧಾನಿ ಮೋದಿ

ಪ್ರಾಕೃತಿಕ ವಿಕೋಪಗಳನ್ನು ನಿಭಾಯಿಸುವುದರಿಂದ ಹಿಡಿದು ಜಾತ್ಯತೀತ ನಾಗರಿಕ ಸಂಹಿತೆ, ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ರಜೆಯವರೆಗೆ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ನಿರ್ಣಯದೊಂದಿಗೆ ಮುಂದುವರಿಯುತ್ತಿದ್ದೇವೆ. ಆದರೆ ಕೆಲವು ಜನರು ಪ್ರಗತಿಯನ್ನು ಕಾಣುವುದಿಲ್ಲ ಅಥವಾ ಅವರಿಗೆ ಪ್ರಯೋಜನವಾಗದ ಹೊರತು ಭಾರತದ ಒಳಿತನ್ನು ಯೋಚಿಸುವುದಿಲ್ಲ. ದೇಶವು ಈ ಬೆರಳೆಣಿಕೆಯ ನಿರಾಶಾವಾದಿ ಜನರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

Exit mobile version