Site icon Vistara News

ದೇಶದ 14ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಜಗದೀಪ್​ ಧನಕರ್​

Jagdeep Dhankar

ನವ ದೆಹಲಿ: ಜಗದೀಪ್​ ಧನಕರ್ ಅವರು ಇಂದು ದೇಶದ 14ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ಭವನದಲ್ಲಿ, ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಗದೀಪ್​ ಧನಕರ್​​ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್​, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಸೇರಿ ಇನ್ನಿತರರು ಇದ್ದರು. ಇಂದು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಜಗದೀಪ್ ಧನಕರ್​ ಅವರು ರಾಜ್​ಘಾಟ್​ಗೆ ಭೇಟಿ ಕೊಟ್ಟು, ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿದರು.

ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾಗಿರುವ ಜಗದೀಪ್​ ಧನಕರ್​ ಅವರು ಆಗಸ್ಟ್​ 6ರಂದು ಉಪರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದಾರೆ. 528 ಮತಗಳನ್ನು ಪಡೆದು, ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್​ ಆಳ್ವಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಒಟ್ಟಾರೆ ಹೇಳಬೇಕು ಎಂದರೆ ಜಗದೀಪ್ ಧನಕರ್​ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಶೇ.74.36ರಷ್ಟು ಮತ ಗಳಿಸಿದ್ದಾರೆ. 1997ರಿಂದ ಈಚೆಗೆ ಯಾವ ಉಪರಾಷ್ಟ್ರಪತಿಯೂ ಇಷ್ಟು ಮತ ಗಳಿಸಿ ಗೆದ್ದಿರಲಿಲ್ಲ.

ಜಗದೀಪ್​ ಧನಕರ್​ ಅವರು ಒಂದು ಕೃಷಿ ಕುಟುಂಬದಿಂದ ಬಂದವರು. ಮೂಲತಃ ರಾಜಸ್ಥಾನದ ಝುಂಜುನು ಜಿಲ್ಲೆಯವರು. ಚಿತ್ತೂರ್​​ಗರ್ಥ್​ನಲ್ಲಿರುವ ಸೈನಿಕ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದರು. ನಂತರ ರಾಜಸ್ಥಾನ ಯೂನಿವರ್ಸಿಟಿಯಲ್ಲಿ ಎಲ್​ಎಲ್​ಬಿ ಅಧ್ಯಯನ ಮಾಡಿದರು. ಇವರು ವಕೀಲರಾಗಿ ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್​​ನಲ್ಲಿ ಪ್ರತಿನಿಧಿಸಿದ್ದಾರೆ. 1989ರಲ್ಲಿ ಮೊಟ್ಟಮೊದಲು ಝುಂಜುನು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾದರು. ಆಗ ಅವರು ಸ್ಪರ್ಧಿಸಿದ್ದು ಜನತಾ ದಳ್​ನಿಂದ. ನಂತರ ಬಿಜೆಪಿ ಸೇರ್ಪಡೆಯಾದ ಅವರನ್ನು ಬಿಜೆಪಿ 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಕ ಮಾಡಿತು. ಈ ಸಲ ಅಚ್ಚರಿಯೆಂಬಂತೆ ಉಪರಾಷ್ಟ್ರಪತಿ ಹುದ್ದೆಗೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತ್ತು.

ಇದನ್ನೂ ಓದಿ: Vice President Election 2022 | ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಪ್‌ ಧನಕರ್‌ ಬಿಜೆಪಿ ಅಭ್ಯರ್ಥಿ

Exit mobile version