Site icon Vistara News

Atiq Ahmed: ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್​​ನ ಪುತ್ರನನ್ನು ಎನ್​ಕೌಂಟರ್​​​ನಲ್ಲಿ ಕೊಂದು ಹಾಕಿದ ಉತ್ತರ ಪ್ರದೇಶ ಪೊಲೀಸ್​

Umesh Pal's murder accused Atiq Ahmed, Ashraf killed in police encounter

#image_title

ಲಖನೌ: ಬಹುಜನ ಸಮಾಜ ಪಾರ್ಟಿ ಶಾಸಕ ರಾಜುಪಾಲ್ ಹತ್ಯೆ ಮತ್ತು ಆ ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್​ ಪಾಲ್​ನನ್ನು 2006ರಲ್ಲಿ ಅಪಹರಣ ಮಾಡಿದ್ದ ಆರೋಪದಡಿ ಜೈಲುಪಾಲಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಜಕಾರಣಿ/ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್​ನ (Atiq Ahmed) ಪುತ್ರ ಅಸಾದ್​ ಅಹ್ಮದ್​​ನನ್ನು ಇಂದು ಉತ್ತರ ಪ್ರದೇಶ ಪೊಲೀಸರು ಝಾನ್ಸಿ ಬಳಿ ಎನ್​ಕೌಂಟರ್​​ನಲ್ಲಿ ಕೊಂದು ಹಾಕಿದ್ದಾರೆ. ಅವನಿಂದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅತೀಕ್​ ಅಹ್ಮದ್​ನ ಈ ಮಗ ಅಸಾದ್​ ಅಹ್ಮದ್​ ಹೆಸರು ಉಮೇಶ್​ ಪಾಲ್​ ಅವರ ಕೊಲೆ ಕೇಸ್​​ನಲ್ಲಿ ಕೇಳಿಬಂದಿತ್ತು. ಇದೇ ಅಸಾದ್​ ಜತೆಗೆ ಇನ್ನೊಬ್ಬಾತ ಗುಲಾಮ್​ ಎಂಬುವನನ್ನೂ ಯುಪಿ ಪೊಲೀಸರು ಕೊಂದಿದ್ದಾರೆ. ನಾಪತ್ತೆಯಾಗಿದ್ದ ಈತನ ತಲೆಗೆ 5 ಲಕ್ಷ ರೂಪಾಯಿ ಬಹುಮಾನವನ್ನೂ ಕೂಡ ಘೋಷಿಸಲಾಗಿತ್ತು. ಅಂದಹಾಗೇ ಈ ಎನ್​ಕೌಂಟರ್ ಮಾಡಿದ್ದು ಉತ್ತರ ಪ್ರದೇಶ ಪೊಲೀಸ್​​ ಇಲಾಖೆಯ ಸ್ಪೆಶಲ್​ ಟಾಸ್ಕ್​ ಫೋರ್ಸ್​ ತಂಡ. ಇದರ ನೇತೃತ್ವವನ್ನು ಡೆಪ್ಯೂಟಿ ಎಸ್​ಪಿಗಳಾದ ನವೇಂದು ಮತ್ತು ವಿಮಲ್​ ವಹಿಸಿದ್ದರು. ಇವರಿಬ್ಬರೂ ಉಮೇಶ್​ ಪಾಲ್​ ಕೊಲೆ ಕೇಸ್​​ನಲ್ಲಿ ಬೇಕಾದವರಾಗಿರುವ ಜತೆ, ಅತೀಕ್ ಅಹ್ಮದ್​​ನನ್ನು ಉತ್ತರ ಪ್ರದೇಶದಿಂದ ಗುಜರಾತ್​ ಜೈಲಿಗೆ ಸಾಗಿಸುವ ಮಾರ್ಗದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಯೋಜನೆ ರೂಪಿಸಿದ್ದರು. ಈ ಮಾಹಿತಿ ಸಿಕ್ಕಿದ್ದರಿಂದಲೇ ಅವರಿಬ್ಬರನ್ನೂ ಹಿಡಿಯಲು ಸ್ಪೆಶಲ್​ ಟಾಸ್ಕ್​ ಫೋರ್ಸ್​ ನಿಯೋಜಿಸಲಾಗಿತ್ತು. ಪೊಲೀಸರನ್ನು ನೋಡಿದ ಅಸಾದ್ ಮತ್ತು ಗುಲಾಮ್​ ಇವರ ಮೇಲೆ ದಾಳಿಗೆ ಯತ್ನಿಸಿದರು. ಆಗ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ಇಬ್ಬರೂ ಗಾಯಗೊಂಡಿದ್ದರು. ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಬದುಕಲಿಲ್ಲ.

ಇದನ್ನೂ ಓದಿ: ನಾನು ಸುರಕ್ಷಿತವಾಗಿ ಇರುವುದೇ ಮಾಧ್ಯಮದವರಿಂದ ಎಂದ ಅತೀಕ್​ ಅಹ್ಮದ್​; ಜೈಲಲ್ಲಿರುವ ಗ್ಯಾಂಗ್​ಸ್ಟರ್​ಗೆ ಕಾಡುತ್ತಿದೆ ಅದೊಂದು ಭಯ!

ರಾಜು ಪಾಲ್​ ಹತ್ಯೆಯ ಪ್ರಮುಖ ಸಾಕ್ಷಿ ಉಮೇಶ್​ ಪಾಲ್​ರನ್ನು ಫೆಬ್ರವರಿ ತಿಂಗಳಲ್ಲಿ ಪ್ರಯಾಗ್​ರಾಜ್​​ನಲ್ಲಿ ದುಷ್ಕರ್ಮಿಗಳು ಕೊಂದಿದ್ದರು. ಈ ಹತ್ಯೆಯ ಪ್ರಮುಖ ಆರೋಪಿ ಅರ್ಬಾಜ್​ ಖಾನ್​ ಮತ್ತು ಇನ್ನೊಬ್ಬ ಆರೋಪಿ ವಿಜಯ್‌ ಚೌಧುರಿ ಅಲಿಯಾಸ್‌ ಉಸ್ಮಾನ್‌ ಎಂಬಾತನನ್ನು ಈಗಾಗಲೇ ಉತ್ತರ ಪ್ರದೇಶ ಪೊಲೀಸರು ಎನ್​ಕೌಂಟರ್ ಮಾಡಿದ್ದಾರೆ. ಈಗ ಇನ್ನಿಬ್ಬರು ಆರೋಪಿಗಳೂ ಯುಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

ಇನ್ನೊಂದೆಡೆ ಗುಜರಾತ್​​ನ ಸಬರಮತಿ ಜೈಲಿನಲ್ಲಿರುವ ಅತೀಕ್ ಅಹ್ಮದ್​ಗೆ ಕೂಡ ಎನ್​ಕೌಂಟರ್​ ಭಯ ಶುರುವಾಗಿದೆ. ಆತನನ್ನು ಗುಜರಾತ್​​ನ ಸಬರಮತಿ ಜೈಲಲ್ಲಿ ಇಡಲಾಗಿದ್ದು, ಪ್ರಯಾಗ್​ರಾಜ್​ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಆಗಾಗ ಅವನನ್ನು ಪೊಲೀಸ್​ ವಾಹನದಲ್ಲಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಹೀಗೆ ಮಾರ್ಗಮಧ್ಯೆ ತನ್ನ ಎನ್​ಕೌಂಟರ್​ ಆಗಬಹುದು ಎಂಬ ಭಯದಲ್ಲಿ ಅತೀಕ್​ ಅಹ್ಮದ್ ಇದ್ದಾನೆ. ಹೀಗಿರುವಾಗಲೇ ಅವನಿಗೆ ಬಹುದೊಡ್ಡ ಶಾಕ್​ ಎದುರಾಗಿದ್ದು, ಮಗನನ್ನೇ ಕೊಂದು ಹಾಕಿದ್ದಾರೆ. ಇಂದು ಕೂಡ ಪ್ರಯಾಗ್​ರಾಜ್​ ಕೋರ್ಟ್​​ನಲ್ಲಿ ಅತೀಕ್ ಅಹ್ಮದ್​ ವಿಚಾರಣೆ ಇತ್ತು. ಮತ್ತೆ ಆತನನ್ನು 14ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ.

Exit mobile version